ಜನರ ಜೇಬು ಸುಡಲಿದೆ ವಿದ್ಯುತ್ ದರ ಏರಿಕೆ, ಹೋಟೆಲ್​ನಲ್ಲಿ ಕಾಫಿ-ಟೀ, ತಿಂಡಿ, ಊಟದ ದರ ಹೆಚ್ಚಳ

ಗೃಹಜ್ಯೋತಿ ಯೋಜನೆ ಜಾರಿಗೂ ಮುನ್ನ ವಿದ್ಯುತ್ ದರ ಹೆಚ್ಚಳ ಮಾಡಲಾಗಿದ್ದು, ಇದು ಇದೀಗ ಜನರ ಜೇಬು ಸುಡುತ್ತಿದೆ.

ಜನರ ಜೇಬು ಸುಡಲಿದೆ ವಿದ್ಯುತ್ ದರ ಏರಿಕೆ, ಹೋಟೆಲ್​ನಲ್ಲಿ ಕಾಫಿ-ಟೀ, ತಿಂಡಿ, ಊಟದ ದರ ಹೆಚ್ಚಳ
Edited By:

Updated on: Jun 22, 2023 | 8:37 AM

ಬೆಂಗಳೂರು: ಕರ್ನಾಟಕ ಸರ್ಕಾರ ಗೃಹಜ್ಯೋತಿ ಯೋಜನೆ(Gruha Jyothi Scheme) ಜಾರಿಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದ್ರೆ, ಗೃಹಜ್ಯೋತಿ ಯೋಜನೆ ಜಾರಿಗೂ ಮುನ್ನ, ಇಂಧನ ಇಲಾಖೆ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳಿಗೆ ಬಿಗ್ ಶಾಕ್ ನೀಡಿದೆ. ವಿದ್ಯುತ್ ದರವನ್ನ (electricity price increased) ಏಕಾಏಕಿ ಹೆಚ್ಚಳ ಮಾಡಿರುವುದರಿಂದ ದುಪ್ಪಟ್ಟು ಬಿಲ್ ಕಟ್ಟಬೇಕಾಗಿದೆ. ವಿದ್ಯುತ್ ದರ ಹೆಚ್ಚಳ ಇದೀಗ ಜನರ ಜೇಬು ಸುಡುತ್ತಿದೆ. ಹೌದು…ಹೋಟೆಲ್​ (Hotel) ಮಾಲೀಕರು ಸಹ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ಹೋಟೆಲ್​ಗಳಲ್ಲಿ ಕಾಫಿ, ಟೀ-ತಿಂಡಿ ಹಾಗೂ ಊಟದ ದರ ಹೆಚ್ಚಳವಾಗಿದೆ.

ಇದನ್ನೂ ಓದಿ: ನಂದಿನಿ ಹಾಲಿನ ದರ 5 ರೂ. ಹೆಚ್ಚಳ ಸಾಧ್ಯತೆ; ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಸುಳಿವು

​ಕಳೆದ ಒಂದು ವಾರದಿಂದ ರಾಜಧಾನಿಯ ಹೋಟೆಲ್ ಗಳಲ್ಲಿ ದರ ಏರಿಕೆಯಾಗಿದೆ. ವಿದ್ಯುತ್ ದರ ಏರಿಕೆಯಿಂದ ಅಲ್ಲಲ್ಲಿ ಮಾಲೀಕರೇ ತಮ್ಮ ತಮ್ಮ ಹೋಟೆಲ್ ಗಳಲ್ಲಿ ದರ ಹೆಚ್ಚಳ ಮಾಡಿಕೊಂಡಿದ್ದಾರೆ. ಹೋಟೆಲ್ ಮಾಲೀಕರ ಸಂಘ ದರ ಹೆಚ್ಚಳಕ್ಕೆ ಸೂಚನೆ ನೀಡಿದ್ದರು. ಅದರಂತೆ ಬೆಲೆ ಹೆಚ್ಚಳ ಮಾಡಲಾಗಿದ್ದು, ಊಟ ಹಾಗೂ ತಿಂಡಿ ದರ ಕನಿಷ್ಠ ಐದು ರೂಪಾಯಿ ಏರಿಕೆಯಾಗಿದೆ. ಇನ್ನು ಕಾಫಿ ಮತ್ತು ಟೀ ದರಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ.

ಮಸಾಲೆ ದೋಸೆ 50 ರುಪಾಯಿ ಇತ್ತು. ಈಗ ವಿದ್ಯುತ್ ದರ ಹೆಚ್ಚಳದಿಂದ 60 ರಿಂದ 70 ರುಪಾಯಿ ಆಗಿದೆ. ಟೀ, ಕಾಫಿ, ಲೇಮನ್ ಟೀ ಮೊದಲು ಹತ್ತು ರುಪಾಯಿ ಇತ್ತು. ಈಗ 12 ರಿಂದ 15 ರುಪಾಯಿಗೆ ಏರಿಕೆಯಾಗಿದೆ. ಹೀಗೆ ಪ್ರತಿಯೊಂದಕ್ಕೂ ಹೋಟೆಲ್​ ಮಾಲೀಕರು ದರ ಹೆಚ್ಚಳ ಮಾಡಿದ್ದು, ಗ್ರಾಹಕರ ಜೇಬು ಸುಡಲಿದೆ.

ಇನ್ನು ಹಾಲಿನ ದರ ಸಹ ಹೆಚ್ಚಳಕ್ಕೆ ತೀರ್ಮಾನಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನೂತನ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್​ ಹೇಳಿದ್ದಾರೆ. ಒಂದು ವೇಳೆ ಹಾಲಿ ದರ ಹೆಚ್ಚಳಕ್ಕೆ ಸಮ್ಮತಿಸಿದರೆ ಹಾಲಿನ ಉತ್ಪನ್ನಗಳ ದರ ಸಹ ಏರಿಕೆಯಾಗಲಿವೆ.

ಒಟ್ಟಿನಲ್ಲಿ ರಾಜ್ಯದಾದ್ಯಂತ ಗ್ಯಾರಂಟಿಗಳದ್ದೆ ಸದ್ದು. ಶಕ್ತಿ ಯೋಜನೆ. ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಜಾರಿಗಾಗಿ ಸರ್ಕಾರ ಸಾಕಷ್ಟು ಸರ್ಕಸ್ ಮಾಡುತ್ತಿದ್ದು, ಇವುಗಳಿಗೆ ಹಣ ಕ್ರೂಢಿಕರಣಕ್ಕಾಗಿ ಇತರೆ ಬೆಲೆಗಳ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಅದರಲ್ಲೂ ಮುಖ್ಯವಾಗಿ ಗೃಹಜ್ಯೋತಿ ಯೋಜನೆ ಜಾರಿಗೂ ಮುನ್ನ ಸರ್ಕಾರ ವಿದ್ಯುತ ಬಿಲ್ ಹೆಚ್ಚಳ ಮಾಡಿರುವುದು ವಿವಿಧ ದರ ಮೇಲೂ ಪರಿಣಾಮ ಬೀರಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us