HDK on Mekedatu: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಅವಧಿಯಲ್ಲಿ ಡಿಪಿಆರ್ ಮಾಡಿಲ್ಲ: ಎಚ್​ಡಿ ಕುಮಾರಸ್ವಾಮಿ

JDS on Mekedatu Project: ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ. ಇನ್ನೂ 5 ವರ್ಷ ಯಾರು ಬೇಕಾದರೂ ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದರು

HDK on Mekedatu: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಅವಧಿಯಲ್ಲಿ ಡಿಪಿಆರ್ ಮಾಡಿಲ್ಲ: ಎಚ್​ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 18, 2022 | 4:13 PM

ಬೆಂಗಳೂರು: ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಿದ್ದೇವೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಯನ್ನು ಜೆಡಿಎಸ್ (JDS) ನಾಯಕ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಮಂಗಳವಾರ ಸಾರಾಸಗಟಾಗಿ ತಳ್ಳಿಹಾಕಿದರು. ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಯಾವುದೇ ಡಿಪಿಆರ್ ಆಗಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೆ. ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ. ಇನ್ನೂ 5 ವರ್ಷ ಯಾರು ಬೇಕಾದರೂ ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದರು. ಅವರು (ಕಾಂಗ್ರೆಸ್​ನವರು) ಪಾದಯಾತ್ರೆ (Mekedatu Padayatre) ಮಾಡಿದರೂ, ನಿಲ್ಲಿಸಿದರೂ ನಮಗೆ ಗಾಬರಿಯಿಲ್ಲ. ಜನರ ಮಾರಣಹೋಮ ಮಾಡಲು ನಾವು ತಯಾರು ಇಲ್ಲ. ಒಂದು ಎರಡು ಇದ್ದ ಸೋಂಕಿತರ ಸಂಖ್ಯೆಯು ಈಗ 400 ದಾಟುತ್ತಿದೆ. ಜನವರಿ 26ರಿಂದ ಜಲಧಾರಿ ಕಾರ್ಯಕ್ರಮ ಆರಂಭಿಸಬೇಕಿತ್ತು. ಆದರೆ ಕೊರೊನಾ ಪಿಡುಗು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯಿಂದ ಹಿಂದೆ ಸರಿದೆವು. ಕಳೆದ ಎರಡು ವರ್ಷಗಳಿಂದ ಕೊರೊನಾ ಪಿಡುಗು ಹೆಚ್ಚಾಗಿರುವ ಕಾರಣ, ಪಕ್ಷದ ಸಂಘಟನೆಯಿಂದಲೂ ಹಿಂದೆ ಸರಿಯಬೇಕಾಯಿತು ಎಂದು ವಿವರಿಸಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ನಡೆಸಿದ ವರ್ಚುವಲ್ ಕಾನ್ಫರೆನ್ಸ್​ನಲ್ಲಿ ಗತಿಶಕ್ತಿ ಯೋಜನೆಯ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ನೀರನ ವಿಚಾರದಲ್ಲಿ ನಾವು ಪೆಟ್ಟು ತಿಂದಿದ್ದೇವೆ. ಇದೇ ವಿಚಾರಗಳನ್ನು ಜನತೆಗೆ ತಿಳಿಸುತ್ತೇವೆ. ನಮ್ಮ ನೀರನ್ನು ಬಳಕೆ ಮಾಡುವಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಅನಾಹುತಗಳೇ ಆಗಿವೆ. ಚುನಾವಣೆ ಬಂದಾಗ ಮಾತ್ರ ಇವರಿಗೆ ನೀರು ನೆನಪಾಗುತ್ತದೆ. 20 ದಿನಗಳ ಕಾಲ ಜಲಧಾರೆ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆಯಲ್ಲಿ ಜೆಡಿಎಸ್ ಮುಂದೂಡಿದೆ ಎಂದರು.

ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಮಹದಾಯಿ ಹೋರಾಟಗಾರರ ಮೇಲೆ ಈ ಹಿಂದೆ ಲಾಠಿಚಾರ್ಜ್‌ ನಡೆದಿತ್ತು. ಹೆಣ್ಣುಮಕ್ಕಳ ಮೇಲೆಯೂ ಪೊಲೀಸರು ಲಾಠಿ ಬೀಸಿದ್ದರು. ಊರುಗಳಲ್ಲಿರುವ ಎಲ್ಲ ಗಂಡು ಮಕ್ಕಳೂ ಊರು ಬಿಡುವಂತೆ ಮಾಡಿದ್ದರು. ಇದ ನಡೆದದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಕೆಲ ನಿಲುವುಗಳಿಂದಲೇ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ. ಘೋಷಣೆ ಮಾಡಿರುವ ಯೋಜನೆಗಳು ಜನರಿಗೆ ತಲುಪಬೇಕಿದೆ. ಕೊವಿಡ್ ಲಸಿಕೆ ಪಡೆದವರಿಗೆ ಸೋಂಕಿನಿಂದ ಹೆಚ್ಚು ತೊಂದರೆಯಾಗುತ್ತಿಲ್ಲ. ವ್ಯಾಕ್ಸಿನೇಷನ್‌ನಲ್ಲಿ ಅಕ್ರಮ ನಡೆಯುತ್ತಿದ್ದರೆ ತಡೆಯಬೇಕು ಎಂದು ಕರೆ ನೀಡಿದರು.

ಕರ್ನಾಟಕದಲ್ಲಿ ಕೊರೊನಾ ಪರಿಸ್ಥಿತಿ ಗಮನಿಸಿದರೆ ಶಾಲೆಗಳನ್ನು 15 ದಿನ ಮುಚ್ಚುವುದು ಒಳ್ಳೆಯದು. ಫೆಬ್ರವರಿ ಮೊದಲ ವಾರದೊಳಗೆ ಎಲ್ಲ ಕಾಲೇಜುಗಳನ್ನು ಮುಚ್ಚುವುದು ಸೂಕ್ತ ಎಂದರು. ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಿಪಡಿಸಿದರು. ಇದರಿಂದ ರಾಜ್ಯದ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ನೈಟ್ ಕರ್ಫ್ಯೂ ಮುಂದುವರಿಸುವುದಾದರೆ ಜನರಿಗೆ ಸಹಾಯ ಮಾಡಬೇಕು. ಕೂಲಿಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಲಹೆ ಮಾಡಿದರು.

ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆರಂಭವಾಗಿದೆ ಎಂದು ಹೇಳಿದ ಅವರು, ಇಂದು 22 ಸಾವಿರ ಕೇಸ್ ಬರಲಿದೆ ಎನ್ನಲಾಗುತ್ತಿದೆ. ಕರ್ಫ್ಯೂ ವಿಚಾರವಾಗಿ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲಗಳಿವೆ. ಕೆಲವರು ನೈಟ್ ಕರ್ಫ್ಯೂ ಜಾರಿಗೆ ತಂದಿರೋದು ಸರಿಯಿಲ್ಲ ಎನ್ನುತ್ತಿದ್ದಾರೆ. ಕೆಲ ವ್ಯಾಪಾರಿ ಸಂಘಟನೆಗಳಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇನ್ನೊಂದೆರಡು ಬಿರುಸಿನ ಚಟುವಟಿಕೆ ನಡೆಯಲಿದೆ. ಬಾದಾಮಿ ಜಾತ್ರೆಯಲ್ಲಿ ನಲವತ್ತರಿಂದ ಐವತ್ತು ಸಾವಿರ ಭಕ್ತರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಸರ್ಕಾರದ ನೀತಿ ನಿಯಮಗಳಿಂದ ಇದನ್ನು ಕೊರೊನಾ ಪರಿಸ್ಥಿತಿ ಬದಲಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಮನವಿ ಮಾಡಿದರು.

ಇನ್ನೊಂದು ವರ್ಷದಲ್ಲಿ ಚುನಾವಣಾ ಸಮಯ ಬರಲಿದೆ. ಆಗ ನಿಯಮಗಳನ್ನು ಉಲ್ಲಂಘಿಸಿದರೆ ಜನರೇ ಪ್ರಶ್ನೆ ಮಾಡುತ್ತಾರೆ. ಈಗಾಗಲೇ ಇಂಥ ಘಟನೆಗಳ ಬಗ್ಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವರ ದಯೆಯಿಂದ ಎರಡನೇ ಅಲೆಯಂತೆ ದೊಡ್ಡಮಟ್ಟದ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದರು.

ಇದನ್ನೂ ಓದಿ: ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ – ಸುಳ್ಳು ಸಿದ್ದಯ್ಯ ಎಂದೆಲ್ಲಾ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ ರಾಜ್ಯ ಜೆಡಿಎಸ್ ಘಟಕ ಇದನ್ನೂ ಓದಿ: ನನ್ನ ತೋಟದ ಮನೆಯಲ್ಲಿ ವೃದ್ಧಾಶ್ರಮ ಅಥವಾ ಅನಾಥಾಶ್ರಮ ನಿರ್ಮಿಸುವೆ: ಎಚ್​ಡಿಕೆ

Published On - 4:12 pm, Tue, 18 January 22