ಸೈಬರ್ ವಂಚನೆಗಳ ಕೇಂದ್ರವಾಗುತ್ತಿರುವ ಬೆಂಗಳೂರು, ಒಂಬತ್ತು ತಿಂಗಳಲ್ಲಿ 470 ಕೋಟಿ ರೂ. ದೋಚಿದ ವಂಚಕರು!

ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಬೆಂಗಳೂರು, ಆನ್‌ಲೈನ್ ಉದ್ಯೋಗ ಹಗರಣಗಳು, ಸುಲಿಗೆ, ಬಿಟ್‌ಕಾಯಿನ್ ವಂಚನೆಗಳಂತಹ ಸೈಬರ್ ವಂಚನೆಗಳ ಕೇಂದ್ರವಾಗಿ ವೇಗವಾಗಿ ಬದಲಾಗುತ್ತಿದೆ. ನಗರದ ಜನರು ಪ್ರತಿದಿನ ಸರಾಸರಿ 1.71 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಸೈಬರ್ ವಂಚನೆಗಳ ಕೇಂದ್ರವಾಗುತ್ತಿರುವ ಬೆಂಗಳೂರು, ಒಂಬತ್ತು ತಿಂಗಳಲ್ಲಿ 470 ಕೋಟಿ ರೂ. ದೋಚಿದ ವಂಚಕರು!
ಬೆಂಗಳೂರಿನಲ್ಲಿ ಕೇವಲ ಒಂಬತ್ತು ತಿಂಗಳಲ್ಲಿ 470 ಕೋಟಿ ರೂ. ದೋಚಿದ ವಂಚಕರು!
Rakesh Nayak Manchi

Updated on: Oct 12, 2023 | 8:36 AM

ಬೆಂಗಳೂರು, ಅ.12: ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಬೆಂಗಳೂರು (Bengaluru), ಆನ್‌ಲೈನ್ ಉದ್ಯೋಗ ಹಗರಣಗಳು, ಸುಲಿಗೆ, ಬಿಟ್‌ಕಾಯಿನ್ ವಂಚನೆಗಳಂತಹ ಸೈಬರ್ ವಂಚನೆಗಳ ಕೇಂದ್ರವಾಗಿ ವೇಗವಾಗಿ ಬದಲಾಗುತ್ತಿದೆ. ನಗರದ ಜನರು ಪ್ರತಿದಿನ ಸರಾಸರಿ 1.71 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

ದಾಖಲೆಗಳ ಪ್ರಕಾರ, ಈ ವರ್ಷ ಕೇವಲ ಒಂಬತ್ತು ತಿಂಗಳಲ್ಲಿ 470 ಕೋಟಿ ರೂಪಾಯಿಗಳನ್ನು ನಗರದ ಜನರು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಗರದಲ್ಲಿ 12,615 ಸೈಬರ್ ಪ್ರಕರಣಗಳು ದಾಖಲಾಗಿವೆ.

ಕಳೆದ ಒಂಬತ್ತು ತಿಂಗಳಲ್ಲಿ (ಜನವರಿ 1, 2023 ರಿಂದ 20 ಸೆಪ್ಟೆಂಬರ್, 2023) 12,615 ಸೈಬರ್ ಪ್ರಕರಣಗಳು ದಾಖಲಾಗಿವೆ ಮತ್ತು ಪೊಲೀಸರು 28.4 ಕೋಟಿ ರೂಪಾಯಿ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ 27.6 ಕೋಟಿ ಹಣವನ್ನು ದೂರುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.

ಕಳೆದುಹೋದ ಒಟ್ಟು ಮೊತ್ತದಲ್ಲಿ 201 ಕೋಟಿ ರೂ.ಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಆನ್‌ಲೈನ್ ಉದ್ಯೋಗ ವಂಚನೆಗಳಿಗೆ ಸಿಲುಕುತ್ತಿದ್ದು, 204 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ಡೇಟಾ ಬಹಿರಂಗಪಡಿಸಿದೆ. ಈ ಮೊತ್ತದಲ್ಲಿ 73 ಕೋಟಿ ರೂ.ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದು, ಸುಮಾರು 7 ಕೋಟಿ ರೂ.ಗಳನ್ನು ವಸೂಲಿ ಮಾಡಿದ್ದು, ಈ ಪೈಕಿ ಬಹುತೇಕ ಹಣವನ್ನು ಸಂತ್ರಸ್ತರಿಗೆ ಹಿಂದಿರುಗಿಸಿದ್ದಾರೆ.

ಇದನ್ನೂ ಓದಿ: ಹ್ಯಾಕರ್ ಶ್ರೀಕೃಷ್ಣನಿಂದ ಇ- ಪ್ರೊಕ್ಯೂರ್ಮೆಂಟ್ ವಂಚನೆ ಕೇಸ್: ಸ್ಫೋಟಕ ವಿಚಾರ ಬೆಳಕಿಗೆ

ಇದೇ ಅವಧಿಯಲ್ಲಿ ಲೋನ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ 277 ಪ್ರಕರಣಗಳು, 195 ಬಿಟ್‌ಕಾಯಿನ್ ವಂಚನೆ ಪ್ರಕರಣಗಳು ಮತ್ತು 84 ಸೆಕ್ಸ್‌ಟಾರ್ಶನ್ (ಖಾಸಗಿ ಫೋಟೋಗಳನ್ನಿಟ್ಟು ಬ್ಲ್ಯಾಕ್ ಮೇಲ್) ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಸಂತ್ರಸ್ತರು ಒಟ್ಟು 24.62 ಕೋಟಿ ರೂ. ಕಳೆದುಕೊಂಡಿದ್ದಾರೆ ಈ ಪೈಕಿ ಸುಮಾರು 74 ಲಕ್ಷ ರೂ.ಗಳನ್ನು ಪೊಲೀಸರು ವಸೂಲಿ ಮಾಡಿದ್ದು, 58,20,801 ರೂ. ಹಣವನ್ನು ಸಂತ್ರಸ್ತರಿಗೆ ಹಿಂದಿರುಗಿಸಿದ್ದಾರೆ.

ದೇಶಾದ್ಯಂತ ಸೈಬರ್ ಕ್ರೈಂಗಳು ಹೆಚ್ಚುತ್ತಿದ್ದು, ಬೆಂಗಳೂರು ಕೂಡ ಇದರಿಂದ ಹೊರತಾಗಿಲ್ಲ ಎಂದು ಬಿ ದಯಾನಂದ ಹೇಳಿದರು. ಇಂತಹ ವಂಚನೆಗಳ ವಿರುದ್ಧ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಜಾಗೃತರಾಗಬೇಕು ಎಂದರು.

“ನಾವು ಎಲ್ಲಾ ಪೊಲೀಸ್ ಠಾಣೆಗಳಿಗೆ ಸುಧಾರಿತ ಸಾಧನಗಳನ್ನು ಒದಗಿಸಲು ಶ್ರಮಿಸುತ್ತಿದ್ದೇವೆ ಮತ್ತು ಈ ಪ್ರಕರಣಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ವಿಳಂಬವಾದಲ್ಲಿ ಅಧಿಕಾರಿ ವಿವರಣೆ ನೀಡಬೇಕಾಗುತ್ತದೆ. ನಾವು ಸಿಇಎನ್ ಪೊಲೀಸ್ ಠಾಣೆಯಲ್ಲಿ ಮಾತ್ರವಲ್ಲದೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಿದ್ದೇವೆ ಎಂದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us