ಮಹಾಲಕ್ಷ್ಮಿ ಹತ್ಯೆ ಪ್ರಕರಣ: ಮತ್ತೊಂದು ಸ್ಪೋಟಕ ವಿಚಾರ ಬಯಲಿಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2024 | 9:34 PM

ವೈಯಾಲಿಕಾವಲ್​ನಲ್ಲಿ ನಡೆದ ಮಹಾಲಕ್ಷ್ಮಿ ಹತ್ಯೆ ಪ್ರಕರಣದ ಮತ್ತೊಂದು ಸ್ಪೋಟಕ ವಿಚಾರ ಬಯಲಾಗಿದೆ. ಕೊಲೆ ಮಾಡಿದ ಆರೋಪಿ ತನ್ನ ಬೈಕ್​​ನಲ್ಲೇ ಒಂದೂವರೆ ಸಾವಿರ ಕಿ.ಮೀ ಸಂಚಾರ ಮಾಡಿದ್ದ. ಅಷ್ಟಲ್ಲದೇ ಕೊಲೆ ವಿಚಾರವನ್ನ ತನ್ನ ಸಹೋದರ ಮತ್ತು ತಾಯಿಗೂ ಹೇಳಿಕೊಂಡಿದ್ದ. ಆದ್ರೆ, ಕೊನೆಗೆ ಆತನೇ ಆತ್ಮಹತ್ಯೆ ಮಾಡಿಕೊಂಡ. ಹಾಗಾದರೆ ಆರೋಪಿ ಸಾವನ್ನಪ್ಪಿರುವುದರಿಂದ ಪೊಲೀಸರ ಮುಂದಿನ ತನಿಖೆ ಹೇಗಿರುತ್ತೆ?. ಈ ಕುರಿತು ಇಲ್ಲಿದೆ ವಿವರ.

ಮಹಾಲಕ್ಷ್ಮಿ ಹತ್ಯೆ ಪ್ರಕರಣ: ಮತ್ತೊಂದು ಸ್ಪೋಟಕ ವಿಚಾರ ಬಯಲಿಗೆ
ಮಹಾಲಕ್ಷ್ಮಿ ಹತ್ಯೆ ಪ್ರಕರಣ, ಮತ್ತೊಂದು ಸ್ಪೋಟಕ ವಿಚಾರ ಬಯಲಿಗೆ
Follow us on

ಬೆಂಗಳೂರು, ಸೆ.27: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಡೆದ ಮಹಾಲಕ್ಷ್ಮಿ ಭೀಕರ ಕೊಲೆಯ ಆರೋಪಿ ಸತ್ತು 2 ದಿನಗಳೇ ಆಗಿವೆ. ಆದ್ರೆ, ಮಹಾಲಕ್ಷ್ಮಿ ಕೊಲೆ ಸುತ್ತಲೂ ಹತ್ತಾರು ಅನುಮಾಗಳು ಹಾಗೆ ಉಳಿದುಕೊಂಡಿವೆ. ಸದ್ಯ ಪೊಲೀಸರು ತನಿಖೆಯಲ್ಲಿ ಹತ್ಯೆಯ ಒಂದೊಂದೆ ವಿಚಾರ ಬಯಲಾಗುತ್ತಿದೆ. ಅದರಲ್ಲೂ ಆರೋಪಿ ರಂಜನ್ ಕೊಲೆ ನಡೆದ ಸೆ.2ರಂದು ಬೆಂಗಳೂರು ತೊರೆದು ಬೈಕ್​ನಲ್ಲೇ ಊರು(ಒಡಿಸಾ) ತಲುಪಿ ಆತ್ಮಹತ್ಯೆಗೆ ಶರಣಾಗಿದ್ದ.

ಹೌದು, ಕೊಲೆ ಮಾಡಿದ ಬಳಿಕ ಹೆಬ್ಬಗೋಡಿಯ ಸಹೋದರನ ರೂಂಗೆ ಹೋಗಿದ್ದ ಆರೋಪಿ, ಸಹೋದರನ ಬಳಿ ಎಲ್ಲಾ ವಿಚಾರವನ್ನ ಹೇಳಿ, ನೀನು ರೂಂ ಖಾಲಿ ಮಾಡು ಎಂದಿದ್ದ. ಬಳಿಕ ತನ್ನ ಬಜಾಜ್ ಪ್ಲಾಟಿನಂ ಬೈಕ್​ನಲ್ಲಿ ಆಂಧ್ರ, ಪ.ಬಂಗಾಳ ಮೂಲಕ ಸುಮಾರು ಎರಡೂವರೆ ದಿನ 1500 ಕಿ.ಮೀ ಸಂಚರಿಸಿ ಒಡಿಸಾದ ಬೋನಿಪುರ ತಲುಪಿ, ಮನೆಗೆ ತಲುಪಿ ತನ್ನ ತಾಯಿಗೂ ಎಲ್ಲಾ ವಿಚಾರ ತಿಳಿಸಿದ್ದ.

ಇದನ್ನೂ ಓದಿ:ಬೆಂಗಳೂರಿನ ಮಹಾಲಕ್ಷ್ಮೀಯನ್ನು 50ಕ್ಕೂ ಹೆಚ್ಚು ಪೀಸ್ ಪೀಸ್ ಮಾಡಿದ್ದ ಹಂತಕ ಆತ್ಮಹತ್ಯೆ

ಬಂಧನದ ಭೀತಿಯಿಂದ ಡೆತ್ ನೋಟ್ ಬರೆದು ಪ್ರಾಣತ್ಯಾಗ

ಹೀಗೆ ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡು ಮಾಡಿ ಫ್ರಿಡ್ಜ್​ನಲ್ಲಿ ಇಟ್ಟಿದ್ದ ರಂಜನ್, ಬಳಿಕ ಬೈಕ್​ನಲ್ಲೇ ಊರು ತಲುಪಿದ್ದ. ಆದ್ರೆ, ಬಂಧನದ ಭೀತಿಯಿಂದ ಡೆತ್ ನೋಟ್ ಬರೆದು ಪ್ರಾಣತ್ಯಾಗ ಮಾಡಿದ್ದಾನೆ. ಸದ್ಯ ಬೆಂಗಳೂರು ಪೊಲೀಸರು ರಂಜನ್ ಊರಿನಲ್ಲಿ ಆತನ ಮರಣೋತ್ತರ ಪರೀಕ್ಷಾ ವರದಿ, ಮೊಬೈಲ್, ಫಿಂಗರ್ ಪ್ರಿಂಟ್, ಫ್ಯಾಮಿಲಿಯವರ ಹೇಳಿಕೆ ಪಡೆದು ವಾಪಸ್ ಆಗಲಿದ್ದಾರೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿದ್ದ ರಂಜನ್ ಸಹೋದರನ ವಿಚಾರಣೆ ನಡೆಸಿರುವ ಪೊಲೀಸರು, ಪ್ರಕರಣದ ಸಂಬಂಧ ಆತನಿಂದ ನ್ಯಾಯಾಧೀಶರ ಮುಂದೆ ಸೆಕ್ಷನ್​.164 ಅಡಿ ಹೇಳಿಕೆ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ರಂಜನ್ ವಿರುದ್ಧ ಸಾಕ್ಷ್ಯ ಸಂಗ್ರಹಿಸುತ್ತಿರೋ ಪೊಲೀಸರು

ಒಂದು ಕಡೆ ಮಹಾಲಕ್ಷ್ಮಿ ಕೊಲೆ ಪ್ರಕರಣ ಪ್ರಮುಖ ಶಂಕಿತ ಆರೋಪಿಯಾಗಿದ್ದ ರಂಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ರೆ, ಆತನ ವಿರುದ್ಧ ಈಗಾಗಲೇ ಪೊಲೀಸರಿಗೆ ಕೆಲವು ಸಾಕ್ಷ್ಯಗಳು ಸಿಕ್ಕಿದ್ದು, ಮತ್ತಷ್ಟು ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಎಲ್ಲಾ ಸಾಕ್ಷ್ಯಗಳನ್ನ ಕಲೆಹಾಕಲಿರುವ ಪೊಲೀಸರು, ಅಬೇಟೆಡ್ ಚಾರ್ಜ್ ಶೀಟ್ ಅಂದರೆ ಆರೋಪಿ ಸಾವನ್ನಪ್ಪಿರುವುದರಿಂದ ಆತನ ವಿರುದ್ಧ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಕೋರ್ಟಿಗೆ ಪ್ರಕರಣದ ವರದಿ ಸಲ್ಲಿಸಲಿದ್ದಾರೆ. ಅಲ್ಲಿಗೆ ಕೊಲೆ ಆರೋಪಿ ಸಾವನ್ನಪ್ಪಿರುವುದರಿಂದ ತನಿಖೆಯೂ ಮುಂದುವರಿಯಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ