ಬೆಂಗಳೂರಿಗೇಕೆ ಈ ತಾರತಮ್ಯ? ಏರ್​ಪೋರ್ಟ್ ರಸ್ತೆ ಟೋಲ್ ಸ್ಥಳಾಂತರಕ್ಕೆ ಮೋಹನ್ ದಾಸ್ ಪೈ ಆಗ್ರಹ

ದೇವನಹಳ್ಳಿ ಟೋಲ್ ಪ್ಲಾಜಾವನ್ನು ಬಳ್ಳಾರಿ ರಸ್ತೆಗೆ ಸ್ಥಳಾಂತರಿಸಬೇಕೆಂದು ಉದ್ಯಮಿ ಮೋಹನ್ ದಾಸ್ ಪೈ ಆಗ್ರಹಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಟೋಲ್ ಪ್ಲಾಜಾ ಇರುವುದು ಅನ್ಯಾಯ ಎಂದು ಅವರು ಪ್ರತಿಪಾದಿಸಿದ್ದಾರೆ. 2023-24ರಲ್ಲಿ ಟೋಲ್ ಪ್ಲಾಜಾ 308 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ವಿಮಾನ ನಿಲ್ದಾಣದ ಸಮೀಪದಲ್ಲಿ ಇರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಬೆಂಗಳೂರಿಗೇಕೆ ಈ ತಾರತಮ್ಯ? ಏರ್​ಪೋರ್ಟ್ ರಸ್ತೆ ಟೋಲ್ ಸ್ಥಳಾಂತರಕ್ಕೆ ಮೋಹನ್ ದಾಸ್ ಪೈ ಆಗ್ರಹ
ದೇವನಹಳ್ಳಿ ಟೋಲ್ ಪ್ಲಾಜಾ ಮತ್ತು ,ಓಹನ್ ದಾಸ್ ಪೈ (ಸಂಗ್ರಹ ಚಿತ್ರ)

Updated on: Dec 13, 2024 | 12:37 PM

ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ದೇವನಹಳ್ಳಿ ಟೋಲ್ ಪ್ಲಾಜಾ ಟೋಲ್ ಸಂಗ್ರಹದಲ್ಲಿ ಬರೋಬ್ಬರಿ ಶೇ 185ರಷ್ಟು ಹೆಚ್ಚಳವಾದ ಬೆನ್ನಲ್ಲೇ ಇದೀಗ ಆ ಕುರಿತು ಚರ್ಚೆ ಆರಂಭವಾಗಿದೆ. ದೇವನಹಳ್ಳಿ ಟೋಲ್ ಪ್ಲಾಜಾ ವಿರುದ್ಧ ಉದ್ಯಮಿ ಮೋಹನ್ ದಾಸ್ ಪೈಕಿ ಧ್ವನಿಯೆತ್ತಿದ್ದು, ಅದನ್ನು ಏರ್​ಪೋರ್ಟ್ ನಂತರ ಬಳ್ಳಾರಿ ರಸ್ತೆಗೆ ಸ್ಥಳಾಂತರಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಆಗ್ರಹಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿ ಸಂದೇಶ ಪ್ರಕಟಿಸಿರುವ ಮೋಹನ್ ದಾಸ್ ಪೈ, ಬೆಂಗಳೂರಿಗೆ ಮಾತ್ರ ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಈ ಮೊದಲು ಯಾವ ಏರ್​ಪೋರ್ಟ್ ರಸ್ತೆಗೂ ಟೋಲ್ ಇರಲಿಲ್ಲ. ಬೆಂಗಳೂರಿಗೆ ಮಾತ್ರ ಯಾಕೆ ಈ ತಾರತಮ್ಯ? ಟೋಲ್ ಅನ್ನು ವಿಮಾನ ನಿಲ್ದಾಣದ ನಂತರ ಬಳ್ಳಾರಿ ರಸ್ತೆಯಲ್ಲಿ ಸ್ಥಾಪಿಸಬೇಕು ಎಂದು ಎಕ್ಸ್​​ ಸಂದೇಶದಲ್ಲಿ ಮೋಹನ್ ದಾಸ್ ಪೈ ಆಗ್ರಹಿಸಿದ್ದಾರೆ. ಈ ಸಂದೇಶದ ಜತೆಗೆ ನಿತಿನ್ ಗಡ್ಕರಿ, ಸಿಎಂ ಆಫ್ ಕರ್ನಾಟಕ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನೂ ಟ್ಯಾಗ್ ಮಾಡಿದ್ದಾರೆ.

ಮೋಹನ್ ದಾಸ್ ಪೈ ಎಕ್ಸ್ ಸಂದೇಶ

ದಾಖಲೆಯ ಆದಾಯ ಸಂಗ್ರಹಿಸಿದ ದೇವನಹಳ್ಳಿ ಟೋಲ್

2023-24 ಹಣಕಾಸು ವರ್ಷದಲ್ಲಿ ದೇವನಹಳ್ಳಿ ಟೋಲ್ ಪ್ಲಾಜಾ 308 ಕೋಟಿ ರೂ. ಆದಾಯ ಗಳಿಸಿತ್ತು. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿಯಲ್ಲೇ ಟೋಲ್ ಪ್ಲಾಜಾ ಇರುವುದು ಆದಾಯ ಸಂಗ್ರಹ ಏರಿಕೆಗೆ ಕಾರಣ ಎನ್ನಲಾಗಿದೆ. ಬಳ್ಳಾರಿ ರಸ್ತೆ ಮಾತ್ರವಲ್ಲದೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರೂ ಇಲ್ಲಿ ಟೋಲ್ ಪಾವತಿಸಬೇಕಾಗುತ್ತದೆ.

ಟೋಲ್ ಆದಾಯ ಹೆಚ್ಚಳಕ್ಕೆ ವಿಮಾನ ನಿಲ್ದಾಣವೇ ಕಾರಣ

2023-24 ರಲ್ಲಿ, ಕೆಂಪೇಗೌಡ ಅಂತರರರಾಷ್ಟ್ರೀಯ ವಿಮಾನ ನಿಲ್ದಾಣ 37.53 ದಶಲಕ್ಷ ಪ್ರಯಾಣಿಕರನ್ನು ಮತ್ತು 4,39,000 ಮೆಟ್ರಿಕ್ ಟನ್​ಗಳಷ್ಟು ಸರಕುಗಳ ಸಾಗಾಟ ಮಾಡಿದೆ. ಇದು ಟೋಲ್ ಪ್ಲಾಜಾದ ಗಳಿಕೆಗೆ ಗಣನೀಯವಾಗಿ ಕೊಡುಗೆ ನೀಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಹೊಸ ವರ್ಷದಿಂದ ಮೆಟ್ರೋ ಟಿಕೆಟ್ ದರ ಹೆಚ್ಚಳ ಬಹುತೇಕ ಖಚಿತ

ಕಳೆದ ಒಂದು ದಶಕದಲ್ಲಿ ದೇವನಹಳ್ಳಿ ಟೋಲ್ ಪ್ಲಾಜಾದಲ್ಲಿ 1,577 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಟೋಲ್ ಶುಲ್ಕಗಳು ಅಸಮಂಜಸವಾಗಿವೆ ಎಂದು ಮೋಹನ್ ದಾಸ್ ಪೈ ಪ್ರತಿಪಾದಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us