Kannada News Karnataka Bengaluru Nadaprabhu Kempegowda Layout Open Forum slams BDA for not providing infrastructure for 9 blocks: Residents Face Hardship
ನಾಡಪ್ರಭು ಕೆಂಪೇಗೌಡ ಲೇಔಟ್ನ 9 ಬ್ಲಾಕ್ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ವಿಳಂಬವಾಗಿದ್ದು, ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಿಧಾನಸಭೆ ಅರ್ಜಿ ಸಮಿತಿಯ 14 ತಿಂಗಳ ಗಡುವು ಮುಗಿದಿದ್ದರೂ, ರಸ್ತೆ, ವಿದ್ಯುತ್, ನೀರು, ಚರಂಡಿ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಬಿಡಿಎ ಕೇವಲ ಒಂದು ಬ್ಲಾಕ್ನಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅಪೂರ್ಣ ಕೆಲಸ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ‘ನಾಡಪ್ರಭು ಕೆಂಪೇಗೌಡ ಲೇಯೌಟ್ ಓಪನ್ ಫೋರಂ’ ಆರೋಪಿಸಿದೆ.
ಬೆಂಗಳೂರು, ನವೆಂಬರ್ 8: ನಾಡಪ್ರಭು ಕೆಂಪೇಗೌಡ ಬಡಾವಣೆಯ 9 ಬ್ಲಾಕ್ಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯು ಸೆಪ್ಟೆಂಬರ್ 2023 ರಂದು 14 ತಿಂಗಳುಗಳ ಗಡುವು ವಿಧಿಸಿತ್ತು. ಇದೀಗ ಆ ಗಡುವು ಪೂರ್ಣಗೊಂಡರೂ ಮೂಲಸೌಕರ್ಯಗಳನ್ನು ಇನ್ನೂ ಕಲ್ಪಿಸಲಾಗಿಲ್ಲ ಎಂದು ‘ನಾಡಪ್ರಭು ಕೆಂಪೇಗೌಡ ಲೇಯೌಟ್ ಓಪನ್ ಫೋರಂ’ನ ಜಂಟಿ ಕಾರ್ಯದರ್ಶಿ ಮತ್ತು ವಕ್ತಾರ ಸೂರ್ಯಕಿರಣ್ ಎಎಸ್ ದೂರಿದ್ದಾರೆ.
9 ಬ್ಲಾಕ್ಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ನಿರ್ದೇಶನ ನೀಡುವಂತೆ ಕೋರಿ ‘ನಾಡಪ್ರಭು ಕೆಂಪೇಗೌಡ ಲೇಯೌಟ್ ಓಪನ್ ಫೋರಂ’ನ ಅಧ್ಯಕ್ಷ ಚನ್ನಬಸವರಾಜ ಅವರು ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಗೆ ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ವಿಧಾನಸಭೆ ಅರ್ಜಿ ಸಮಿತಿ, 14 ತಿಂಗಳುಗಳ ಗಡುವು ವಿಧಿಸಿತ್ತು ಎಂದು ಸೂರ್ಯಕಿರಣ್ ತಿಳಿಸಿದ್ದಾರೆ.
ಬಿಡಿಎ ವಿರುದ್ಧದ ಆರೋಪಗಳೇನು?
9 ಬ್ಲಾಕ್ಗಳಲ್ಲಿ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸಲಾಗದೆ ಕೇವಲ ಬಡಾವಣೆಯ ಬ್ಲಾಕ್ 7ರಲ್ಲಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಲ್ಲಿಯ ಕಾಮಗಾರಿಗಳನ್ನು 80 ರಷ್ಟು ಪೂರ್ಣಗೊಳಿಸಿ ಪ್ರಾಧಿಕಾರವು ಅರ್ಜಿ ಸಮಿತಿಯ ಛೀಮಾರಿಯಿಂದದ ತಪ್ಪಿಸಿಕೊಳ್ಳಲು ಸಂಪೂರ್ಣ ಬಡಾವಣೆಯ ಎಲ್ಲಾ ಮೂಲಭೂತ ಸೌಕರ್ಯಗಳು ಪೂರ್ಣಗೊಂಡಿದೆ ಎನ್ನುತ್ತಿದದೆ. ರಸ್ತೆ ಡಾಂಬರಿಕರಣದ ಕಾಮಗಾರಿಯು ಬಹಳಷ್ಟು ಬ್ಲಾಕ್ಗಳಲ್ಲಿ ತ್ವರಿತವಾಗಿ ನಡೆಯುತ್ತಿದೆ ಎಂದು ಬಿಂಬಿಸಲು ಪ್ರಯತ್ನ ಪಡುತ್ತಿದೆ. ಕೇವಲ ಬ್ಲಾಕ್ 7 ರಲ್ಲಿ ಮಾತ್ರ ಎಲ್ಲಾ ರೀತಿಯ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಬ್ಲಾಕ್ 5 ಮತ್ತು 6 ರ ರಸ್ತೆಯ ಕಾಮಗಾರಿಯು ಕುಂಟುತ್ತಾ ಸಾಗಿದೆ. ಅಲ್ಲದೆ ಉಳಿದ 6 ಬ್ಲಾಕ್ ಗಳ ಕಾಮಗಾರಿಗಳು ಪೂರ್ಣಗೊಳ್ಳಲು ಮತ್ತಷ್ಟು ವರ್ಷಗಳು ಬೇಕಾಗುವ ಪರಿಸ್ಥಿತಿ ಇದೆ ಎಂದು ಸೂರ್ಯಕಿರಣ್ ತಿಳಿಸಿದ್ದಾರೆ.
ರಸ್ತೆ,ವಿದ್ಯುತ್, ನೀರು ಸರಬರಾಜುಗಳ, ಚರಂಡಿ ವ್ಯವಸ್ಥೆಗಳ ಕೊರತೆಯಿಂದಾಗಿ 29,000 ನಿವೇಶನಗಳಲ್ಲಿ ಕೇವಲ 20 ರಿಂದ 30 ಮನೆಗಳ ನಿರ್ಮಾಣವಾಗುತ್ತಿದೆ. ಮನೆ ಕಟ್ಟಲು ಮುಂದೆ ಬರುವವರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಪ್ರಾಧಿಕಾರ ಹೇಳಿಕೊಳ್ಳುತ್ತದೆ. ಆದರೆ ಭರವಸೆಗಳು ಭರವಸೆಯಾಗಿ ಮಾತ್ರ ಉಳಿದಿವೆ ಹಾಗೂ ನಿವೇಶನದಾರರು ಮೂಲಭೂತ ಸೌಕರ್ಯಗಳ ಕೊರತೆಯಲ್ಲಿಯೇ ಮನೆ ಕಟ್ಟಿ ವಾಸಮಾಡಬೇಕಾದ ಪರಿಸ್ಥಿತಿ ಇದೆ ಎಂದು ಅವರು ಆರೋಪಿಸಿದ್ದಾರೆ.
‘ನಾಡಪ್ರಭು ಕೆಂಪೇಗೌಡ ಲೇಯೌಟ್ ಓಪನ್ ಫೋರಂ’ ಆರೋಪಗಳೇನು?
ವಿದ್ಯುತ್ ಜಾಲವು ಸಂಪೂರ್ಣಗೊಳ್ಳದೆ ಇರುವುದರಿಂದ ಮನೆ ಕಟ್ಟತ್ತಿರುವವರ ರಸ್ತೆಯಲ್ಲಿರುವ ಫೀಡರ್ ಪಿಲ್ಲರ್ನಿಂದ ವಿದ್ಯುತ್ ಸಂಪರ್ಕವನ್ನು ಪಡೆಯಲಾಗದೆ ಬೆಸ್ಕಾಂನಿಂದ ದೂರದಿಂದ ವಿದ್ಯುತ್ ಪಡೆಯಬೇಕಾಗಿರುವುದರಿಂದ ಹೆಚ್ಚುವರಿಯಾಗಿ 20-30,000 ಖರ್ಚು ಮಾಡಬೇಕಾಗಿದೆ.
ಒಂದು ವಿದ್ಯುತ್ ಉಪ ಕೇಂದ್ರವು ನಿರ್ಮಾಣ ಹಂತದಲ್ಲಿದೆ. ಕಳೆದ ಎರಡುವರೆ ವರ್ಷಗಳಿಂದ, ಆದರೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ಬಡಾವಣೆಯಾದ್ಯಂತ ಬಿಡಿಎ ಜಾಲದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆಯುವುದು ಅನಿವಾರ್ಯವಾಗಿದೆ.
ಕೇವಲ ಮನೆ ಕಟ್ಟುತ್ತಿರುವ ರಸ್ತೆಯಲ್ಲಿ ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ ಮತ್ತು ಅದರ ವಿದ್ಯುತ್ ಸಂಪರ್ಕವನ್ನು ಮನೆ ಕಟ್ಟುತ್ತಿರುವವರ ಮೀಟರ್ಗೆ ಸಂಪರ್ಕಿಸಲಾಗುತ್ತಿದೆ.
ಬಡಾವಣೆಯಾದ್ಯಂತ ಇನ್ನೂ ಮಣ್ಣಿನ ಕಚ್ಚಾ ರಸ್ತೆಗಳೇ ಇರುವುದರಿಂದ ಸಾಮಗ್ರಿಗಳನ್ನು ಸಾಗಿಸಲು ಮತ್ತು ವಾಸ ಮಾಡುತ್ತಿರುವವರು ಪ್ರತಿದಿನ ರಸ್ತೆಯನ್ನು ಉಪಯೋಗಿಸಲು ತೊಂದರೆಯಾಗುತ್ತಿದೆ. ಅದು ಮಳೆಗಾಲದಲ್ಲಿ ಉಪಯೋಗಿಸಲು ಸಾಧ್ಯವೇ ಆಗದ ಪರಿಸ್ಥಿತಿಯನ್ನು ಹೊಂದಿದೆ.
ಎಂಟು ತಿಂಗಳಗಳ ಹಿಂದೆ ಬಡಾವಣೆಯ ಬ್ಲಾಕ್ 5, 6, 7 ಕ್ಕೆ ಡಾಂಬರೀಕರಣಕ್ಕಾಗಿ ಟೆಂಡರ್ ಅನ್ನು ಕರೆಯಲಾಗಿತ್ತು. ಆದರೆ ಕೇವಲ ಬ್ಲಾಕ್ 7 ರಲ್ಲಿ ಕಾಮಗಾರಿಯು ನಡೆಯುತ್ತಿದೆ. ಬ್ಲಾಕ್ 6 ರಲ್ಲಿ ಈಗಷ್ಟೇ ಕಾಮಗಾರಿಯು ಪ್ರಾರಂಭವಾಗಿದೆ. ಬ್ಲಾಕ್ 5 ರಲ್ಲಿ ಕಾಮಗಾರಿಯೂ ಈಗಷ್ಟೇ ಪ್ರಾರಂಭವಾಗಬೇಕಿದೆ. ಬಡಾವಣೆಯ 1,2,3,4,5,6,8,9 ಬ್ಲಾಕ್ಗಳಲ್ಲಿ ಬೇರೆ ಕಾಮಗಾರಿಗಳು ಬಾಕಿ ಇರುವುದರಿಂದ ಇನ್ನೂ ಡಾಂಬರೀಕರಣದ ಟೆಂಡರನ್ನು ಕರೆಯಲಾಗಿರುವುದಿಲ್ಲ.
ಮನೆ ಕಟ್ಟಿ ವಾಸಕ್ಕೆ ಬಂದ ಎರಡು ಮೂರು ತಿಂಗಳಲ್ಲಿ ಮ್ಯಾನ್ ಹೋಲ್ಗಳು ಉಕ್ಕಿ ಹರಿಯುತ್ತಿದೆ ಅದಲ್ಲದೆ. ಮನೆ ಪೂರ್ಣಗೊಳ್ಳುವವರೆಗೂ ಒಳಚರಂಡಿ ವ್ಯವಸ್ಥೆಗೆ ಸಂಪರ್ಕವನ್ನು ಕಲ್ಪಿಸಲು ಅವಕಾಶವನ್ನೇ ಕೊಡುವುದಿಲ್ಲ.
ಒಳಚರಂಡಿ ಜಾಲ ನಿರಂತರತೆ ಇಲ್ಲದಿರುವುದರಿಂದ ಸೋಕ್ ಪಿಟ್ಟ್ ಮಾಡಲಾಗುತ್ತಿದೆ.
ಮನೆ ಕಟ್ಟುವವರು ಮನೆ ಕಟ್ಟುವಾಗ ಮತ್ತು ವಾಸಕ್ಕೆ ಬಂದ ನಂತರ ಬೋರ್ವೆಲ್ ನೀರನ್ನು ಉಪಯೋಗಿಸುವುದು ಅನಿವಾರ್ಯ.
ಮನೆ ಕಟ್ಟಿ ವಾಸವಿರುವವರಿಗೆ ಕಾವೇರಿ ಅಥವಾ ಬೇರೆ ಮೂಲಗಳಿಂದ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ನೀರನ್ನು ಸರಬರಾಜು ಮಾಡುವ ಪರಿಸ್ಥಿತಿಯಲ್ಲಿಲ್ಲ.
ಬಿಡಿಎ ನಿಯಮಾವಳಿಗಳ ಪ್ರಕಾರ ಮನೆ ಕಟ್ಟಲು ನೀರನ್ನು ಪೂರೈಸುವುದಿಲ್ಲ ಆದರೆ ಮನೆ ಕಟ್ಟಿದ ನಂತರವೂ ಬಡಾವಣೆಯಲ್ಲಿ ನೀರನ್ನು ಪೂರೈಸಲು ಸಾಧ್ಯವಾಗಿರುವುದಿಲ್ಲ.
ಅರ್ಜಿ ಸಮಿತಿಯಿಂದಲೂ 2023ರ ಡಿಸೆಂಬರ್ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಗಡುವನ್ನು ಮೊದಲು ಪಡೆಯಲಾಗಿತ್ತು. ಆದರೆ ತದನಂತರ 2024ರ ನವೆಂಬರ್ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಂತಿಮ ಗಡುವನ್ನು ನೀಡುವಂತೆ ಅರ್ಜಿ ಸಮಿತಿಗೆ ಕೋರಿರಲಾಗಿರುತ್ತದೆ. ಅದರಂತೆ ಅರ್ಜಿ ಸಮಿತಿಯು 2024 ನವೆಂಬರ್ ವರೆಗೆ ಎಲ್ಲಾ 9 ಬ್ಲಾಕ್ ಗಳ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಂತಿಮ ಗಡುವು ನೀಡಿತ್ತು.
ಇನ್ನೂ 1300 ಎಕರೆ ಭೂ ಸ್ವಾಧೀನ ಸಮಸ್ಯೆಯೂ ಬಗೆಹರಿದಿಲ್ಲ.
ಗುತ್ತಿಗೆದಾರರುಗಳಿಗೆ ಬಾಕಿ ಉಳಿಸಿಕೊಂಡಿರುವ ಬಾರಿ ಪಾವತಿ ಗಳಿಂದಾಗಿ ಕಾಮಗಾರಿಗಳು ನಿಂತಿದೆ ಮತ್ತು ಕೆಲವೊಂದು ಕಡೆ ಮಾತ್ರ ಕುಂಟತ್ತಾ ಸಾಗಿದೆ.