ಕಬ್ಬನ್ ಪಾರ್ಕ್​ನಲ್ಲಿ ಹೆಚ್ಚಿದ ಶಬ್ದ ಮಾಲಿನ್ಯ; ಕ್ರಮಕ್ಕೆ ಪರಿಸರ ಪ್ರೇಮಿಗಳು ಆಗ್ರಹ

ಟ್ರಾಫಿಕ್ ಕಿರಿ - ಕಿರಿಯಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ.‌ ಈ ಮಧ್ಯೆ ಕಬ್ಬನ್ ಪಾರ್ಕ್ ನಲ್ಲಿ ಸ್ವಲ್ಪ ರಿಲಾಕ್ಸ್ ಮಾಡೋಣ ಅಂತ ಹೋದ್ರೆ ಬರೀ ಶಬ್ದ ಮಾಲೀನ್ಯವೇ ಹೆಚ್ಚಾಗಿ ಕಂಡುಬರುತ್ತಿದ್ದು, ವಾಕರ್ಸ್ ಬೇಸರ ವ್ಯಕ್ಯಪಡಿಸುತ್ತಿದ್ದಾರೆ.‌ ಲಾಲ್ ಬಾಗ್​ನಲ್ಲಿ ವಾಹನಗಳನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದರಂತೆ ಕಬ್ಬನ್ ಪಾರ್ಕ್​ನಲ್ಲಿ ವಾಹನ ನಿಷೇಧಿಸಬೇಕು‌. ಕೇವಲ ಇ ವೆಹಿಕಲ್ ಗಳಿಗೆ ಮಾತ್ರ ಪರ್ಮಿಷನ್ ನೀಡಬೇಕು ಎನ್ನುತ್ತಿದ್ದಾರೆ.

ಕಬ್ಬನ್ ಪಾರ್ಕ್​ನಲ್ಲಿ ಹೆಚ್ಚಿದ ಶಬ್ದ ಮಾಲಿನ್ಯ; ಕ್ರಮಕ್ಕೆ ಪರಿಸರ ಪ್ರೇಮಿಗಳು ಆಗ್ರಹ
ಕಬ್ಬನ್ ಪಾರ್ಕ್
Updated By: ಆಯೇಷಾ ಬಾನು

Updated on: Jan 04, 2024 | 8:03 AM

ಬೆಂಗಳೂರು, ಜ.04: ರಾಜ್ಯ – ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ನಗರ. ಸಧ್ಯ ಸಿಲಿಕಾನ್ ಸಿಟಿ ಇತ್ತೀಚೆಗೆ ಗಾರ್ಡನ್ ಸಿಟಿಗಿಂತ ಹೆಚ್ಚಾಗಿ ಕಾಂಗ್ರೀಟ್ ಸಿಟಿಯಾಗಿದೆ. ಈ ಮಧ್ಯೆ ಹಚ್ಚ ಹಸಿರು, ಪರಿಸರ ಸೌಂದರ್ಯವನ್ನ ಸವಿಬೇಕು ಎಂದರೆ ಕಬ್ಬನ್ ಪಾರ್ಕ್ (Cubbon Park) ಅಥವಾ ಲಾಲ್ ಬಾಗ್​ಗೆ (Lal Bagh) ಹೋಗಬೇಕು. ಆದರೆ ಇತ್ತೀಚೆಗೆ ಕಬ್ಬನ್ ಪಾರ್ಕ್​ನಲ್ಲಿಯೂ ಶಬ್ದ ಮಾಲಿನ್ಯ (Noise Pollution) ಹೆಚ್ಚಾಗಿ ಕಂಡುಬರುತ್ತಿದ್ದು, ವಾಕಿಂಗ್ ಬರುವ ನಡಿಗೆದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಬ್ಬನ್ ಪಾರ್ಕ್​ನಲ್ಲಿ ವಾಹನಗಳನ್ನ ಬಿಡಬಾರದು ಅಂತ ಹಲವು ದಿನಗಳಿಂದ ವಾಕರ್ಸ್ ಡಿಮಾಂಡ್ ಮಾಡಿಕೊಂಡು ಬರ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದು, ಪ್ರತಿದಿನ ಸಾವಿರಾರು ವಾಹನಗಳು ಕಬ್ಬನ್ ಪಾರ್ಕ್ ನಲ್ಲಿಯೇ ಸಂಚರಿಸುತ್ತಿವೆ.‌ ಹೀಗಾಗಿ ಕಬ್ಬನ್ ಪಾರ್ಕ್​ನಲ್ಲಿ ಶಬ್ದ ಮಾಲಿನ್ಯ‌ ಉಂಟಾಗುತ್ತಿದ್ದು, ಈ ಮಾಲಿನ್ಯವನ್ನ ತಡೆಗಟ್ಟುವ ನಿಟ್ಟಿನಲ್ಲಿ ಕಬ್ಬನ್ ಪಾರ್ಕ್ ಅಸೋಸಿಯೇಷನ್ ವಾಹನಗಳ ಸಂಚಾರವನ್ನ ಸ್ಟಾಪ್ ಮಾಡ್ಬೇಕು. ಇಲ್ಲದಿದ್ದರೆ ಶಬ್ದಮಾಡದಂತೆ ವಾಹನಗಳು ಸಂಚರಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಸಧ್ಯ ನಗರದಲ್ಲಿರುವುದೇ ಎರಡೇ ಪಾರ್ಕ್.‌ ಲಾಲ್ ಬಾಗ್​ನಲ್ಲಿ ವಾಹನಗಳನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದರಂತೆ ಕಬ್ಬನ್ ಪಾರ್ಕ್​ನಲ್ಲಿ ವಾಹನ ನಿಷೇಧಿಸಬೇಕು‌. ಕೇವಲ ಇ ವೆಹಿಕಲ್ ಗಳಿಗೆ ಮಾತ್ರ ಪರ್ಮಿಷನ್ ನೀಡಬೇಕು.‌ ಇಲ್ಲದಿದ್ದರೆ ಕಬ್ಬನ್ ಪಾರ್ಕ್ ತನ್ನ ನೈಸರ್ಗಿಕತೆಯನ್ನ ಕಳೆದುಕೊಳ್ಳಲಿದೆ ಅಂತ ವಾಕರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೈಡ್​ ಮಾರ್ಗದರ್ಶನದಲ್ಲಿ ಕಬ್ಬನ್ ಪಾರ್ಕ್ ಮತ್ತು ನಂದಿ ಬೆಟ್ಟದ ಇತಿಹಾಸ ತಿಳಿದುಕೊಳ್ಳುವ ವಾಕಿಂಗ್​​ ಗುರುವಾರದಿಂದ ಆರಂಭ

ಈ ಕುರಿತಾಗಿ ತೋಟಾಗಾರಿಕೆ ಇಲಾಖೆಯ ಜಂಟಿ ಆಯುಕ್ತ ಜಗದೀಶ್ ಅವರನ್ನ ಪ್ರಶ್ನಿದ್ದಕ್ಕೆ ಸಧ್ಯ ಕಬ್ಬನ್ ಪಾರ್ಕ್​ನಲ್ಲಿ ನಾಲ್ಕು ಕಡೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಇನ್ನು ಕಬ್ಬನ್ ಪಾರ್ಕ್​ನಲ್ಲಿ ಸಂಚರಿಸುವವರು ಹಾರ್ನ್ ಮಾಡಬಾರದು ಅಂತ ನಿಯಮಗಳಿವೆ‌. ವಾಹನ ಸಂಚಾರಕ್ಕೆ ಮುಕ್ತವಾಗಿ ಸಂಚಾರ ಮಾಡಲು ಸರ್ಕಾರವೇ ತಿಳಿಸಿದೆ‌. ಇದಲ್ಲದೇ ಶಬ್ದಮಾಲಿನ್ಯ ಉಂಟಾಗದಂತೆ ನೋ ಹಾಕಿಂಗ್ ಜೋನ್ ಅಂತ ತೋಟಾಗಾರಿಕೆ ಇಲಾಖೆ ಮಾಡಿದ್ದು, ಇದರ ಮಧ್ಯೆಯು ಹಾರ್ನ್ ಮಾಡುವುದು ಕಂಡುಬಂದ್ರೆ ಅದನ್ನ ತಡೆಯುವ ಸಲುವಾಗಿ ಟ್ರಾಫಿಕ್ ಪೋಲಿಸರಿಗೂ ತಿಳಿಸಿದ್ದೇವೆ. ಸಾರ್ವಜನಿಕರು ಹಾಗೂ ವಾಹನ ಸವಾರರು ನಮಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಒಟ್ನಲ್ಲಿ, ಪಾರ್ಕ್​ಗಳಿಗೆ ಹೋಗಿ ನೆಮ್ಮದಿಯಾಗಿ ಗಾಳಿ ತೆಗದುಕೊಳ್ಳೊಣ.‌ ಟ್ರಾಫಿಕ್ ಕಿರಿ – ಕಿರಿಯಿಂದ ಸ್ವಲ್ಪ ರಿಲಾಕ್ಸ್ ಅಗೋಣ ಅಂತ ಕಬ್ಬನ್ ಪಾರ್ಕ್​ಗೆ ಹೋದವರಿಗೆ ಸಧ್ಯ ಕಿರಿ – ಕಿರಿಯಾಗುತ್ತಿದ್ದು, ತೋಟಾಗಾರಿಕೆ ಇಲಾಖೆ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಬೇಕಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ