ಬೆಂಗಳೂರು: ಮಾನ್ಸೂನ್​ನಲ್ಲಿ ಮಕ್ಕಳನ್ನು ಕಾಡುತ್ತಿದೆ ಗುಲಾಬಿ ಕಣ್ಣಿನ ಸೋಂಕು, ವೈದ್ಯರ ಸಲಹೆ ಇಲ್ಲಿದೆ

| Updated By: ಆಯೇಷಾ ಬಾನು

Updated on: Jul 24, 2024 | 8:49 AM

ಮಾನ್ಸೂನಿಂದಾಗಿ ಸಧ್ಯ ಡೆಂಗ್ಯೂ ಕೇಸ್​ಗಳು ಹೆಚ್ಚಾಗಿವೆ.‌ ಈ‌ ಮಧ್ಯೆ ಬೆಂಗಳೂರಿನಲ್ಲಿ ಗುಲಾಬಿ‌ ಕಣ್ಣು ಸೋಂಕು ಹೆಚ್ಚಾಗುತ್ತಿದ್ದು, ಡಾಕ್ಟರ್​ಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡ್ತಿದ್ದಾರೆ. ಗುಲಾಬಿ ಕಣ್ಣಿನ ಸೋಂಕು ಮಕ್ಕಳನ್ನ ಹೆಚ್ಚು ಭಾದಿಸುತ್ತಿದೆ.

ಬೆಂಗಳೂರು: ಮಾನ್ಸೂನ್​ನಲ್ಲಿ ಮಕ್ಕಳನ್ನು ಕಾಡುತ್ತಿದೆ ಗುಲಾಬಿ ಕಣ್ಣಿನ ಸೋಂಕು, ವೈದ್ಯರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜುಲೈ.24: ರಾಜಧಾನಿ‌ ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನದ ಪರಿಣಾಮ ಸಾಕಷ್ಟು ಜನರ ಆರೋಗ್ಯದಲ್ಲಿ ವ್ಯತ್ಯಯ ಆಗುತ್ತಿದೆ. ಒಂದು ಕಡೆ ಸೊಳ್ಳೆ ಕಾಟದಿಂದ ಸಿಟಿಯಲ್ಲಿ ಡೆಂಗ್ಯೂ (Dengue) ಉಲ್ಬಣ ಆಗುತ್ತಾ ಇದ್ದರೆ, ಇನ್ನೊಂದು ಕಡೆ ಮಳೆ, ಚಳಿ, ಬಿಸಿಲು ಅಂತ ದಿನೇ ದಿನೇ ಬದಲಾಗುತ್ತಾ ಇರುವ ಕಾರಣ ಮಕ್ಕಳಲ್ಲಿ ಗುಲಾಬಿ ಕಣ್ಣಿನ ಸೋಂಕು (Pink Eye) ಕಾಣಿಸಿಕೊಳ್ಳುತ್ತಿದೆ.

ಮಾನ್ಸೂನ್​ನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಕಂಜಂಕ್ಟಿವಿಟಿಸ್ ಅಥವ ಪಿಂಕ್ ಐ ಕಣ್ಣಿನ ಪ್ರಕರಣಗಳು ಹೆಚ್ಚಾಗಿವೆ.‌ ಈ ಸೋಂಕು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಬ್ಯಾಕ್ಟೀರಿಯಾಗಳಿಂದ ಬರಲಿದೆ. ಇದು ಬಂದಾಗ ಒಂದರಿಂದ ಎರಡು ವಾರಗಳ‌ ಕಾಲ ರೋಗಿಯನ್ನ ಬಾಧಿಸಲಿದ್ದು, ಕಣ್ಣಿನ ಕಾರ್ನಿಯಲ್ ಅಲ್ಸರ್, ಶಿಲೀಂಧ್ರಗಳು ಹಾಗೂ ಕಣ್ಣಿನ ಕಾರ್ನಿಯಾದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಇದರಿಂದಾಗಿ ಕಣ್ಣಿನ ಒಳಗೆ ಹುಣ್ಣುಗಳಾಗಲಿದ್ದು, ತೀವ್ರ ನೋವುಂಟು ಮಾಡುತ್ತದೆ.‌ ಇದರಿಂದ‌ ಕಣ್ಣುಗಳಲ್ಲಿ ನೀರು ಸೋರುವಿಕೆ ಹೆಚ್ಚಾಗಿ ಇರಲಿದೆ. ಇದರಿಂದಾಗಿ ಕಣ್ಣುಗಳು ಕೆಂಪು ಬಣ್ಣಕ್ಕೆ ಬರಲಿವೆ. ಈ ವೇಳೆ ಬೆಳಕಿನ ಸೂಕ್ಷ್ಮತೆ, ಮಸುಕಾದ ದೃಷ್ಟಿ ರೋಗಲಕ್ಷಣಗಳು ಕಂಡು ಬರಲಿದ್ದು, ತಕ್ಷಣಕ್ಕೆ ಚಿಕಿತ್ಸೆ ನೀಡದಿದ್ದರೆ ದೃಷ್ಟಿ‌ ಕಳೆದುಕೊಳ್ಳುವ ಸಾಧ್ಯಾತೆ ಇರಲಿದೆ. ಸಧ್ಯ ನಗರದ ಕಣ್ಣಿನ ಆಸ್ಪತ್ರೆಗಳಲ್ಲಿ ಇಂತಹ ಕೇಸ್ ಗಳು ಹೆಚ್ಚಾಗುತ್ತಿದ್ದು, ಮಕ್ಕಳ‌ ಮೇಲೆ ನಿಗಾ ಇಡಿ ಅಂತ ವೈಧ್ಯರು ಸಲಹೆ ನೀಡ್ತಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಏರಿಕೆಯ ಅಸಲಿ ಕಾರಣ ಪತ್ತೆ, ಖಾಸಗಿ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಮಾಡಿಸಿದವರಿಗೆಲ್ಲ ಪಾಸಿಟಿವ್!

ಸೋಂಕು ಬಂದಾಗ ಏನೆಲ್ಲ ಕ್ರಮಗಳನ್ನ ತೆಗೆದುಕೊಳ್ಳಬೇಕು?

  • ಸೋಂಕು ಬಂದಾಗ ಐಬುಪ್ರೊಫೇನ್ ಅಥವಾ ಕಣ್ಣಿನ ನೋವು ನಿವಾರಕಗಳನ್ನು ಬಳಸುವುದು.
  • ಲೂಬ್ರಿಕೇಟಿಂಗ್ ಕಣ್ಣಿನ ಹನಿಗಳನ್ನು ಬಳಸುವುದು
  • ಕಣ್ಣುಗಳ ಮೇಲೆ ಬೆಚ್ಚಗಿನ, ಒದ್ದೆಯಾದ ಬಟ್ಟೆಯನ್ನು ಹಾಕುವುದು
  • ಶುದ್ಧವಾದ ಬಟ್ಟೆಯನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ನಂತರ ಅದರಲ್ಲಿ ಕಣ್ಣನ್ನ ನೆವಿಸುವುದು
  • ಪ್ರತಿ ದಿನ ದಿಂಬಿನ ಕವರ್ ಬೆಡ್‌ಶೀಟ್ ಬದಲಿಸಬೇಕು
  • ಶುದ್ಧ ಟವೆಲ್ ಬಳಸುವುದು.
  • ಕೈಗಳನ್ನು ಆಗಾಗ್ಗೆ ತೊಳೆಯುವುದು.
  • ಕಣ್ಣುಗಳು ಸಹಜ ಸ್ಥಿತಿಗೆ ಬರುವವರೆಗೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸದಿರುವುದು
  • ಸೋಂಕು ಬಂದಾಗ ಅಂತರ ಕಾಯ್ದುಕೊಳ್ಳುವುದು.

ಒಟ್ನಲ್ಲಿ, ನಗರದ ಆಸ್ಪತ್ರೆಯಲ್ಲಿ ಈ ಹಿಂದೆ ಒಂದು ವಾರಕ್ಕೆ ಎರಡರಿಂದ‌ ಮೂರು ಕೇಸ್ ಗಳು ಬರುತ್ತಿದ್ದವು. ಆದ್ರೀಗ ಪ್ರತಿದಿನ 3 ರಿಂದ 4 ಕೇಸ್ ಬರುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಜಾಸ್ತಿಯಾಗಿದೆ. ಮಳೆ ವೇಳೆ ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಬೇಕಾಗಿದೆ.

ರಾಜ್ಯದ  ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ