ಬೀದರ್: ಮದಾರ ಸಾಹೆಬ್ ಉರೂಸ್​ಗೆ ಹಿಂದೂಗಳದ್ದೇ ಸಾರಥ್ಯ! ಕೋಮು ಸೌಹಾರ್ದತೆಗೆ ಸಾಕ್ಷಿ ಕೋಹಿನೂರು ಜಾತ್ರೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರು ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಒಂದಾಗಿ ಮದಾರ ಸಾಹೇಬ್ ಉರೂಸ್ ಅದ್ದೂರಿಯಾಗಿ ಆಚರಿಸುತ್ತಾರೆ. ಭೇದಭಾವ ಮರೆತು ಹಿಂದೂ ಮುಸ್ಲಿಮರು ಸೇರಿಕೊಂಡು ಉರೂಸ್ ಆಚರಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಉರೂಸ್​ಗೆ ಸಾವಿರಾರು ಸಂಖ್ಯೆಯಲ್ಲಿ ಉಭಯ ಸಮುದಾಯಗಳ ಜನ ಬಂದು ಭಾಗವಹಿಸುತ್ತಾರೆ.

ಬೀದರ್: ಮದಾರ ಸಾಹೆಬ್ ಉರೂಸ್​ಗೆ ಹಿಂದೂಗಳದ್ದೇ ಸಾರಥ್ಯ! ಕೋಮು ಸೌಹಾರ್ದತೆಗೆ ಸಾಕ್ಷಿ ಕೋಹಿನೂರು ಜಾತ್ರೆ
ಉರೂಸ್​ನಲ್ಲಿ ದೀಪದ ಮೆರವಣಿಗೆ
Edited By:

Updated on: Nov 25, 2024 | 8:09 AM

ಬೀದರ್, ನವೆಂಬರ್ 24: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರು ಗ್ರಾಮದ ಹೊವಲಯದಲ್ಲಿರುವ ಜಿಂದಾಶಾ ಮದಾರ ಸಾಹೇಬ್ ದರ್ಗಾದ ಜಾತ್ರೆಯೂ ಹಿಂದೂ ಹಾಗೂ ಮುಸ್ಲಿಂ ಸಹೋದರತ್ವದ ಪ್ರತೀಕವಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಜಾತ್ರೆಯಿದಾಗಿದ್ದು ಗ್ರಾಮದ ಹಿರಿಯರು ಹಲವಾರು ವರ್ಷಗಳಿಂದ ಭೇದಭಾವ ಇಲ್ಲದೆ ಎಲ್ಲರೂ ಸೇರಿಕೊಂಡು ಮದಾರ ಸಾಹೇಬ್ ಉರೂಸು (ಜಾತ್ರೆಯನ್ನ) ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಜಿಂದಾಶಾ ಮದಾರಸಾಹೇಬ್ ಸಮಾಧಿಗೆ ಹಿಂದೂಗಳ ಮನೆಯಿಂದ ಗಂಧ, ಎಣ್ಣೆ, ದೀಪ ತಂದು ಅರ್ಪಿಸುವ ಸಂಪ್ರದಾಯ ಶತಮಾನದಿಂದಲೂ ರೂಢಿಯಲ್ಲಿದೆ. ಇಲ್ಲಿನ ಬಹುತೇಕ ಚಟುವಟಿಗೆ ಹಿಂದೂಗಳೇ ಸಾರಥ್ಯವಹಿಸುವುದು ವಿಶೇಷವಾಗಿದೆ.

ಕೋಹಿನೂರು ಪಹಾಡ್!

ಶ್ರೀ ಶರಣ, ಸೂಫಿ ಸಂತ ಜಿಂದಾ ಶಾ ಮದಾರ್​ ಸಾಹೇಬರ ದರ್ಗಾ ಕೋಹಿನೂರು ಗ್ರಾಮದಿಂದ 2 ಕಿಲೋ ಮೀಟರ್ ದೂರದಲ್ಲಿದೆ. ಎತ್ತರದ ಗುಡ್ಡ ಪ್ರದೇಶದಲ್ಲಿರುವ ಕಾರಣ ಇದನ್ನ ಕೋಹಿನೂರು ಪಹಾಡ್​ ಎಂದು ಕರೆಯಲಾಗುತ್ತದೆ.

ಮದಾರ್​ ಸಾಹೇಬರ ಹಿನ್ನೆಲೆ

ಸುಮಾರು 600 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಿಂದ ಇಲ್ಲಿಗೆ ವಲಸೆ ಬಂದಿದ್ದ ಮದಾರ್​ ಸಾಹೇಬರು ಇಲ್ಲೇ ನೆಲೆಗೊಂಡಿದ್ದರು. ಇವರಯ ಸೂಫಿ ಸಂತರಾಗಿದ್ದರು. ಜತೆಗೆ ಆಯುರ್ವೇದ ವೈದ್ಯರಾಗಿದ್ದರು. ಸರ್ವ ಧರ್ಮ ಸಮನ್ವಯ ತತ್ವವನ್ನ ಈ ಭಾಗದಲ್ಲಿ ಹರಡಿದ್ದ ಅವರು ಮುಂದೆ ಇದೇ ಸ್ಥಳದಲ್ಲೇ ಜೀವಂತ ಸಮಾಧಿಯಾದರು ಎಂಬ ಪ್ರತೀತಿ ಇದೆ. ಇದೇ ಕಾರಣಕ್ಕೆ ಜಿಂದಾ ಶಾ ಮದಾರ್​ ಸಾಹೇಬರು ಎಂದು ಕರೆಯಲಾಗುತ್ತದೆ. ಮುಂದೆ ಆ ಕಾಲಕ್ಕೆ ಸಲಗರ್ ಎಂಬ ಊರನ್ನು ಆಳುತ್ತಿದ್ದ ರಾಜಾ ವಾಜೀರ್​ ಖಾನ್​ ಮಕ್ಕಳಾಗದ ಕಾರಣ ಮದಾರ್ ಸಾಹೇಬರ ಸಮಾಧಿ ದರ್ಶನ ಪಡೆದಿದ್ದರು. ಬಳಿಕ ಅವರಿಗೆ ಮಕ್ಕಳಾಗಿದ್ದರು. ಹೀಗಾಗಿ ಖುದ್ದು ರಾಜನೇ ಇಲ್ಲೊಂದು ದರ್ಗಾ ಕಟ್ಟಿಸಿದ್ದರು ಎಂದು ಇತಿಹಾಸ ಹೇಳುತ್ತದೆ.

ಮೂರು ದಿನಗಳ ಕಾಲ ಅದ್ದರೂರಿ ಉರೂಸ್

ಪ್ರತಿ ವರ್ಷವೂ ಕೂಡಾ ಮೂರು ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ದಿಪೋತ್ಸವ, ಅಂತರ್ ರಾಜ್ಯ ಕುಸ್ತಿ ಪಂದ್ಯಗಳು ನಡೆಯುತ್ತವೆ. ಜಾತ್ರೆಯ ಮೊದಲ ದಿನ ಗ್ರಾಮದ ಶಿವಶರಣಪ್ಪ ಅಕ್ಕಾ ಮತ್ತು ಯುಸೂಫ್​ ಸಾಬ್ ಅವರ ಮನೆಯಿಂದ ಶ್ರೀಗಂಧವನ್ನ ರಾತ್ರಿ 11ಗಂಟೆಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ.

ಪೈಲ್ವಾನರ ಕುಸ್ತಿ ಪಂದ್ಯ

ಎರಡನೇ ದಿನ ಗ್ರಾಮದ ಬಸವರಾಜ ಮಹಾಜನ್ ಮನೆಯಿಂದ ರಾತ್ರಿ 10 ಕ್ಕೆ ದೀಪವನ್ನು ಅದ್ಧೂರಿ ಮೆರವಣಿಗೆ ಮೂಲಕ ದರ್ಗಾಕ್ಕೆ ತೆಗೆದುಕೊಂಡು ಹೋಗಿ ಸಮಾಧಿಗೆ ಬೆಳಗಲಾಗುತ್ತದೆ. ಇನ್ನು ಮೂರನೇ ದಿನ ಮಧ್ಯಾಹ್ನ 2ಗಂಟೆಗೆ ಜಂಗೀ ಪೈಲ್ವಾನರ ಭರ್ಜರಿ ಕುಸ್ತಿ ಪಂದ್ಯಗಳು ನಡೆಯುತ್ತವೆ.

ಇದನ್ನೂ ಓದಿ: ಬೀದರ್​: 18.6 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು, 11 ವರ್ಷದಿಂದ ಕಚೇರಿಗೆ ಅಲೆಯುತ್ತಿರುವ ರೈತ

ಈ ಭಾವೈಕತೆಯೆ ಜಾತ್ರೆಗೆ ನೂರಾರು ಹಿಂದೂ ಮುಸ್ಲಿಮರು ಬಂದು ತಮ್ಮ ಇಷ್ಟಾರ್ಥಗಳನ್ನ ಈಡೆರಿಸಿಕೊಂಡು ಹೋಗುತ್ತಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us