
ಬೆಂಗಳೂರು:ವಿದೇಶದಲ್ಲಿ ಸಿಲುಕಿರುವ ಭಾರತೀಯರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಅತ್ತ ಇದ್ದ ಕೆಲಸ ಕಳೆದುಕೊಂಡು, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವರ ಪಾಡಂತೂ ಇದಕ್ಕಿಂತ ಕಡೆಯಾಗಿದೆ.
ಇಂಥ ಹೊತ್ತಲ್ಲೇ ಕೇಂದ್ರ ಸರ್ಕಾರ ನಮ್ಮವರ ನೆರವಿಗೆ ಧಾವಿಸಿದೆ. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನ ಮತ್ತೆ ತವರಿಗೆ ಕರೆತರಲು ಭಾರತದಿಂದ ಏರ್ ಇಂಡಿಯಾ ವಿಮಾನಗಳು ಹಾರಿವೆ. ಈ ಪೈಕಿ ಇಂದು ಏರ್ ಇಂಡಿಯಾ ವಿಮಾನದಲ್ಲಿ ಲಂಡನ್ನಿಂದ 323 ಕನ್ನಡಿಗರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನ್ನಡಿಗರು ಆಗಮಿಸಿದ್ದಾರೆ. KIALನಲ್ಲಿ 3 ವೈದ್ಯರ ತಂಡದಿಂದ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದೆ. ವೈದ್ಯಕೀಯ ತಪಾಸಣೆ ವೇಳೆ ಎ, ಬಿ, ಸಿ ಎಂದು ವಿಂಗಡಣೆ ಮಾಡಲಾಗುತ್ತೆ.
ಕೊರೊನಾ ಲಕ್ಷಣ ಕಂಡು ಬಂದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತೆ. KIALನಿಂದ ನೇರವಾಗಿ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಉಳಿದವರಿಗೆ ಹೋಟೆಲ್ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಕೆಐಎಎಲ್ನಿಂದ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರನ್ನ ಶಿಫ್ಟ್ ಮಾಡಲು ನಿರ್ಧರಿಸಲಾಗಿದ್ದು, ಒಂದು ಬಸ್ನಲ್ಲಿ 20 ಜನರಂತೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಎಲ್ಲಾ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗಿದೆ.
ಮುಂಜಾಗ್ರತಾ ಕ್ರಮವಾಗಿ KIAL ಬಳಿ ಹಾಗೂ KIALನಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲೂ ಭದ್ರತೆಗೆ ಪೊಲೀಸ್ ನಿಯೋಜಿಸಲಾಗಿದೆ. ಇನ್ನು ವಿದೇಶದಿಂದ ಬಂದ ಭಾರತೀಯರನ್ನು ತಾಜ್ ವಿವಾಂತ, ಲೆಮನ್ ಟ್ರೀ ಹೋಟೆಲ್, ಫೈವ್ಸ್ಟಾರ್, ತ್ರೀಸ್ಟಾರ್ ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
Published On - 7:30 am, Mon, 11 May 20