ದಾಳಿಗೂ ಮುನ್ನ ಪರಪ್ಪನ ಅಗ್ರಹಾರದ ಮುಂದೆ ಅರ್ಧಗಂಟೆ ಕಾಯ್ದಿದ್ದ ಸಿಸಿಬಿ: ತನಿಖೆಗೆ ಆದೇಶ

ಸಿಸಿಬಿ ಅಧಿಕಾರಿಗಳು ಬೆಂಗಳೂರು ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡುವ ಮಾಹಿತಿ ಸೋರಿಕೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ, ಪ್ರಕರಣ ಸಂಬಂಧ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್​ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಾಳಿಗೂ ಮುನ್ನ ಪರಪ್ಪನ ಅಗ್ರಹಾರದ ಮುಂದೆ ಅರ್ಧಗಂಟೆ ಕಾಯ್ದಿದ್ದ ಸಿಸಿಬಿ: ತನಿಖೆಗೆ ಆದೇಶ
ಸಿಸಿಬಿ ಅಧಿಕಾರಿಗಳ ದಾಳಿ
ವಿವೇಕ ಬಿರಾದಾರ

Updated on: Aug 27, 2024 | 11:02 AM

ಬೆಂಗಳೂರು, ಆಗಸ್ಟ್​​ 27: ನಾಲ್ಕು ದಿನಗಳ ಹಿಂದೆ ಶನಿವಾರ (ಆ.​ 24) ರಂದು ಸಿಸಿಬಿ (CCB) ಅಧಿಕಾರಿಗಳು ಬೆಂಗಳೂರು ಕೇಂದ್ರ ಕಾರಾಗೃಹದ (Bengaluru Central Jail) ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಏನು ಸಿಗದೆ ಖಾಲಿ ಕೈಯಲ್ಲಿ ಅಧಿಕಾರಿಗಳು ಬರೀಗೈಯಲ್ಲಿ ಮರಳಿದ್ದರು. ದಾಳಿ ಮಾಡಿದ ಮರು ದಿನವೇ (ಆ.25) ರಂದು ಕೊಲೆ ಆರೋಪಿ ದರ್ಶನ್​ ಜೈಲಿನಲ್ಲಿ ಬಲಗೈಯಲ್ಲಿ ಚಹಾ ಮಗ್​ ಮತ್ತು ಎಡಗೈನಲ್ಲಿ ಸಿಗರೇಟ್​ ಹಿಡಿದಿರುವ ಫೋಟೋ ವೈರಲ್​ ಆಗಿತ್ತು. ಈ ಫೋಟೋ ವೈರಲ್​ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳ ದಾಳಿ ಮಾಹಿತಿ ಸೋರಿಕೆಯಾಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಶನಿವಾರ ಸಿಸಿಬಿ ಅಧಿಕಾರಿಗಳು ಜೈಲಿನೊಳಗೆ ಪ್ರವೇಶಿಸುವ ಮುನ್ನ ಅರ್ಧಗಂಟೆ ಹೊರಗಡೆ ಕಾಯ್ದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಿಸಿಬಿ ಅಧಿಕಾರಿಗಳು ದಾಳಿಗೆ ಬಂದಿದ್ದಾಗ ಜೈಲಧಿಕಾರಿಗಳು ಅರ್ಧ ಗಂಟೆ ಒಳಗೆ ಬಿಡಲಿಲ್ಲ. ಈ ವೇಳೆ ಸಿಸಿಬಿ ಅಧಿಕಾರಿಗಳು ಏಕೆ ಕಾಯಬೇಕು ಎಂದು ಜೈಲು ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ. ಜೈಲು ಅಧೀಕ್ಷಕ ಬಂದಿಲ್ಲ, ಅವರಿಲ್ಲದೆ ಒಳಗೆ ಬಿಡಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ, ಸಿಸಿಬಿ ಅಧಿಕಾರಿಗಳು ಸುಮಾರು ಅರ್ಧಗಂಟೆ ಜೈಲಿನ ಬಾಗಿಲಿನಲ್ಲೇ ಕಾಯ್ದಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ: ಪ್ರಕರಣದ ತನಿಖೆಗಾಗಿ 3 ವಿಶೇಷ ತಂಡ ರಚನೆ

ಬ್ಯಾರಕ್‌ನಲ್ಲಿ ನಾಲ್ಕು ರಟ್ಟಿನ ಬಾಕ್ಸ್​ಗಳನ್ನು ಶಿಫ್ಟ್ ಮಾಡಿದ ಬಗ್ಗೆಯೂ ಜೈಲು ಸಿಬ್ಬಂದಿಯನ್ನು ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಬಾಕ್ಸ್​​ಗಳಲ್ಲಿ ಕಸ ಇತ್ತು ಜೈಲು ಸಿಬ್ಬಂದಿ ಹೇಳಿದ್ದಾರೆ. ಆದರೆ, ಜೈಲಿನ ಯಾವ ಬ್ಯಾರಕ್​​ನಿಂದಲೂ ಕಸ ತೆಗೆದುಕೊಂಡು ಹೋಗಿಲ್ಲ, ಕೇವಲ ಬ್ಯಾರಕ್ ನಂಬರ್ 10 ರಿಂದ ಏಕೆ ಕಸ ತೆಗೆದುಕೊಂಡು ಹೋಗಿದ್ದೀರಿ ಎಂದು ಸಿಸಿಬಿ ಪೊಲೀಸರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ. ಜೈಲು ಅಧಿಕಾರಿಗಳ ಈ ನಡೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿಯ ಮಾಹಿತಿ ಸೋರಿಕೆಯಾಗಿದೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಸೂಚನೆ ನೀಡಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಸಿಸಿಬಿ ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತಗೆ ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:30 am, Tue, 27 August 24

Loading...
Unable to load recommendations.
Follow Us