ಕೇಂದ್ರ ಸರ್ಕಾರ ಧಾರವಾಡ ಜಿಲ್ಲೆಗೆ 1400 ರೂ. ಅನುದಾನ ನೀಡಿದೆ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

| Updated By: ವಿವೇಕ ಬಿರಾದಾರ

Updated on: Jul 02, 2023 | 3:10 PM

ನಾಳೆಯಿಂದ ಅಧಿವೇಶನ ಆರಂಭ ಹಿನ್ನೆಲೆ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ಮಾಡಲಿದೆ. ಇವರ ಬೋಗಸ್ ಗ್ಯಾರಂಟಿ ಬಗ್ಗೆ ಹೋರಾಟ ಮಾಡುತ್ತೇವೆ. ನೀವು 10 ಕೆಜಿ ಅಕ್ಕಿಯ ಹಣ ಕೊಡಬೇಕು. ಇಲ್ಲವೇ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್​ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ ಮಾಡಿದರು.

ಕೇಂದ್ರ ಸರ್ಕಾರ ಧಾರವಾಡ ಜಿಲ್ಲೆಗೆ 1400 ರೂ. ಅನುದಾನ ನೀಡಿದೆ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ
Follow us on

ಧಾರವಾಡ: ಕೇಂದ್ರ ಸರ್ಕಾರ ಧಾರವಾಡ (Dharwad) ಜಿಲ್ಲೆಗೆ 1400 ರೂ. ಅನುದಾನ ನೀಡಿದೆ. ಈ ಅನುದಾನದಲ್ಲಿ ಮಲಪ್ರಭಾ ಜಲಾಶಯದ (Malaprabha Dam) ನೀರು ಪ್ರತಿ ಹಳ್ಳಿಗೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ (Pralhad Joshi) ಹೇಳಿದರು. ಹಿಂದೆ ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ಬಾಂಬ್ ಹಾಕಿ ಓಡುತ್ತಿದ್ದರು. ಈಗ ದೇಶದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಬಾಂಬ್​ ಹಾಕಿದ ದೇಶಕ್ಕೆ ನುಗ್ಗಿ ಹೊಡೆಯುವ ಸಾಮರ್ಥ್ಯ ಬೆಳೆದಿದೆ. ಭಾರತದ ಮೇಲೆ ಯಾರೂ ಈಗ ಕಣ್ಣು ಕೆಕ್ಕರಿಸಿ ನೋಡುವುದಿಲ್ಲ. ಹಾಗೆ ನಾವು ನಮ್ಮ ಸೈನ್ಯವನ್ನು ಬಲಪಡಿಸಿದ್ದೇವೆ ಎಂದರು.

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಹುಬ್ಬಳ್ಳಿಯ ಕ್ಷಮತಾ ಸೇವಾ ಸಂಸ್ಥೆ ಆಯೋಜಿಸಿರುವ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಅನೇಕ ವರ್ಷಗಳಿಂದ ಕ್ಷಮತಾ ಸೇವಾ ಸಂಸ್ಥೆ ಇದೆ. ಆರಂಭದಿಂದ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಜೊತೆಗೆ ಅನೇಕ ನೇತ್ರ ತಪಾಸಣಾ ಶಿಬಿರ ಮಾಡಿದ್ದೇವೆ. ಅನೇಕ ತಜ್ಞ ವೈದ್ಯರ ಜೊತೆಗೂ ವಿವಿಧ ಶಿಬಿರ ಆಗಿವೆ. ಆದರೆ ಮಧ್ಯೆ ಕೋವಿಡ್ ಸಮಯದಲ್ಲಿ ಶಿಬಿರಗಳನ್ನು ನಿಲ್ಲಿಸಿದ್ದೇವೆ. ಆದರೆ ಈಗ ಪುನಃ ಆರಂಭಿಸಿದ್ದೇವೆ ಎಂದು ತಿಳಿದರು.
ಇವತ್ತು ಧಾರವಾಡ ತಾಲೂಕಿಗೆ ಪ್ರವೇಶ ಮಾಡಿದ್ದೇವೆ. ಈಗ ಕರಡಿಗುಡ್ಡದಿಂದ ಆರಂಭ ಮಾಡಿದ್ದೇವೆ. ಕರಡಿಗುಡ್ಡ ಶಿಬಿರಕ್ಕೆ ಹಲವಾರು ನುರಿತ ವೈದ್ಯರು ಬಂದಿದ್ದಾರೆ. ನರ, ಎಲುಬು-ಕೀಲು, ಇಎನ್‌ಟಿ, ಹೃದಯ ಸೇರಿ ವಿವಿಧ ತಜ್ಞರು ಬಂದಿದ್ದಾರೆ. ಎಲ್ಲ ತಪಾಸಣೆ ಉಚಿತವಾಗಿ ಇರುತ್ತದೆ. ಪ್ರಧಾನಿಗಳು ಜನರ ಆರೋಗ್ಯದ ದೃಷ್ಟಿಯಿಂದ ಕಾರ್ಯ ಮಾಡಲಿ ಸಂಸದರಿಗೆ ಕರೆ ಕೊಟ್ಟಿದ್ದಾರೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಹೊಸ ವೈದ್ಯಕೀಯ ಕಾಲೇಜ್ ಆರಂಭ ಮಾಡುತ್ತಿದ್ದೇವೆ. ಪ್ರತಿ ವರ್ಷ 54 ಸಾವಿರ ವೈದ್ಯರು ದೇಶದಲ್ಲಿ ಹೊರ ಬರುತ್ತಿದ್ದರು. ಈಗ ಅದು ಪ್ರತಿ ವರ್ಷಕ್ಕೆ 1 ಲಕ್ಷಕ್ಕೆ ಏರಿದೆ ಎಂದು ಹೇಳಿದ್ದಾರೆ.

ವೈದ್ಯಕೀಯ ಕೋರ್ಸ್ ಬಳಿಕ ಆಯಾ ವಿಷಯದ ನುರಿತ ತಜ್ಞರು ಆಗುವವರ ಸಂಖ್ಯೆಯೂ ಕಡಿಮೆ ಇತ್ತು. ಅದು ಸಹ ಈಗ ಹೆಚ್ಚಳವಾಗಿದೆ. ನಿತ್ಯ ಔಷಧಿ ತೆಗೆದುಕೊಳ್ಳುವ ಅಗತ್ಯ ಇರುವವರಿಗಾಗಿ ಜನರಿಕ್ ಮೆಡಿಸಿನ್ ಆರಂಭಿಸಿದ್ದೇವೆ. ಆಯುಷ್ಮಾನ್ ಭಾರತ ಕಾರ್ಡ್ ಎಲ್ಲರಿಗೂ ಕೊಟ್ಟಿದ್ದೇವೆ. ಇದರಲ್ಲಿ 5 ಲಕ್ಷದವರೆಗೆ ಇನ್ಸೂರೆನ್ಸ್ ವ್ಯವಸ್ಥೆ ಇದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಇದಾಗಿದೆ. ಧಾರವಾಡದ ಜಿಲ್ಲಾ ಆಸ್ಪತ್ರೆ ಯಲ್ಲಿ ಸಣ್ಣ ಮಕ್ಕಳಿಗಾಗಿ ವಿಶೇಷ ಆಸ್ಪತ್ರೆ ಮಾಡಿದ್ದೇವೆ. ತಾಯಿ-ಮಗುವಿಗಾಗಿ ಕೇಂದ್ರ ಸರ್ಕಾರದ ವಿಶೇಷ ಆಸ್ಪತ್ರೆ ಇದಾಗಿದೆ. ಹೃದಯ ಸಮಸ್ಯೆ ಆದಾಗ ದೂರದ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಈಗ ಜಯದೇವ ಆಸ್ಪತ್ರೆ ಹುಬ್ಬಳ್ಳಿಯಲ್ಲಿಯೇ ಆಗಲಿದೆ. ಅದರ ಕಟ್ಟಡ ಕಾರ್ಯವೂ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: No Guarantee: ಜನರಿಗೆ ಹೇಳಿದಂತೆ “ಗ್ಯಾರಂಟಿ” ಕೊಡಲಾಗದೆ ಕಾಂಗ್ರೆಸ್​ ನಾಯಕರಿಂದ ಕುಂಟು ನೆಪ : ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ

ಕಾರ್ಯಕ್ರಮ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಮಾಜಿ ಶಾಸಕ ರೇಣುಕಾಚಾರ್ಯಗೆ ನೋಟಿಸ್ ಕೊಟ್ಟ ವಿಚಾರವಾಗಿ ಮಾತನಾಡಿ ಬಿಎಸ್ ಯಡಿಯೂರಪ್ಪ ಅವರು ಕೂಡ ರೇಣುಕಾಚಾರ್ಯರನ್ನು ಕರೆದು ಮಾತನಾಡಿದ್ದಾರೆ. ನಾನು ಕೂಡ ರೇಣುಕಾಚಾರ್ಯರನ್ನು ಕರೆದು ಮಾತನಾಡುತ್ತೇನೆ. ಯಾರು ಕೂಡ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ. ಪಕ್ಷದ ಚೌಕಟ್ಟಿನಲ್ಲೇ ಮಾತನಾಡುವಂತೆ ಕಟ್ಟುನಿಟ್ಟಿನ ಸೂಚನೆ ಇದೆ ಎಂದು ಸ್ಪಷ್ಟನೆ ನೀಡಿದರು.

ಒಂದಿಷ್ಟು ಆಕ್ರೋಶದಲ್ಲಿ ಕೆಲವರು ಮಾತನಾಡಿದ್ದರು. ಆದರೆ ಈಗ ಅದು ಸರಿ ಹೋಗಿದೆ. ಪಕ್ಷದ ಮೇಲೆ ಯಾರಿಗೂ ಅಸಮಾಧಾನ ಇಲ್ಲ. ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ ಮಾತನಾಡಿದ್ದಾರೆ. ಆದರೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚನೆ ಕೊಟ್ಟಿದ್ದೇವೆ. ಕಟೀಲ ಅವರ ಅಧ್ಯಕ್ಷತೆ, ಬಿಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಸಭೆ ಆಗಿದೆ. ಇಲ್ಲಿ ಅವರ ಪರ, ಇವರ ಪರ ಎಂಬ ಪ್ರಶ್ನೆಯೆ ಇಲ್ಲ. ಯಾರೂ ಸಾರ್ವಜನಿಕವಾಗಿ ಹೇಳಿಕೆ ಕೊಡಬಾರದೆಂಬ ನಿಯಮ ಹೇಳಿದ್ದೇವೆ. ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಹೇಳಿದ್ದೇವೆ ಎಂದು ಸೂಚನೆ ನೀಡಿದರು.

ನಾಳೆಯಿಂದ ಅಧಿವೇಶನ ಆರಂಭ ಹಿನ್ನೆಲೆ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ಮಾಡಲಿದೆ. ಇವರ ಬೋಗಸ್ ಗ್ಯಾರಂಟಿ ಬಗ್ಗೆ ಹೋರಾಟ ಮಾಡುತ್ತೇವೆ. ನೀವು 10 ಕೆಜಿ ಅಕ್ಕಿಯ ಹಣ ಕೊಡಬೇಕು. ಇಲ್ಲವೇ ಕ್ಷಮೆ ಕೇಳಬೇಕು. ನಾವು 5 ಕೆಜಿ ಅಕ್ಕಿಯ ಹಣ ಕೊಡುತ್ತಿದ್ದೇವೆ. ನರೇಂದ್ರ ಮೋದಿಯವರು 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಎಂಬ ಸತ್ಯ ಹೇಳಬೇಕು. ಈ ಸತ್ಯವನ್ನು ಹೇಳಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಜನರಿಗೆ 10 ಕೆಜಿ ಅಕ್ಕಿಯ ಹಣ ಕೊಡಬೇಕು ಎಂದು ವಾಗ್ದಾಳಿ ಮಾಡಿದರು.

ವಿರೋಧ ಪಕ್ಷದ ನಾಯಕ ಸ್ಥಾನ ಉತ್ತರ ಕರ್ನಾಟಕ್ಕೆ ಸಿಗುತ್ತಾ ಎಂಬ ವಿಚಾರ ಯಾರಿಗೆ ಸಿಗುತ್ತೆ ನೋಡೋಣ ಎಂದು ಜಾರಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ