ಕಾಂಗ್ರೆಸ್ ಸೂಜಿ ರೀತಿ, ಬಿಜೆಪಿ ಕತ್ತರಿ ರೀತಿ; ನಾವು ಸಮಾಜ ಒಗ್ಗೂಡಿಸಿದರೆ ಅವರು ಕತ್ತರಿಸುತ್ತಾರೆ: ಡಿಕೆ ಶಿವಕುಮಾರ್

ಮುಂದಿನ ದಿನಗಳಲ್ಲಿ ಪದಾಧಿಕಾರಿಗಳ ಚುನಾವಣೆ ಕೂಡ ನಡೆಯಲಿದೆ. ಮಾರ್ಚ್ ಒಳಗೆ ಸದಸ್ಯತ್ವ ಅಭಿಯಾನ ಮುಗಿಯಬೇಕು. ಅನುಮಾನಗಳಿದ್ದರೆ ಬ್ಲಾಕ್ ಅಧ್ಯಕ್ಷರು, ಡಿಸಿಸಿ ಅಧ್ಯಕ್ಷರನ್ನು ಸಂಪರ್ಕ ಮಾಡಿ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಸೂಜಿ ರೀತಿ, ಬಿಜೆಪಿ ಕತ್ತರಿ ರೀತಿ; ನಾವು ಸಮಾಜ ಒಗ್ಗೂಡಿಸಿದರೆ ಅವರು ಕತ್ತರಿಸುತ್ತಾರೆ: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated By: ganapathi bhat

Updated on: Jan 02, 2022 | 6:25 PM

ಚಾಮರಾಜನಗರ: ಕಾಂಗ್ರೆಸ್‌ ಸದಸ್ಯತ್ವ ಪಡೆಯೋದು ಹೆಮ್ಮೆ. ಎಐಸಿಸಿ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಪ್ರತಿ ಬೂತ್‌ನಲ್ಲೂ ಒಬ್ಬರು ಮಹಿಳೆ, ಒಬ್ಬರು ಪುರುಷರನ್ನು ಎನ್‌ರೋಲರ್ ಆಗಿ ನೇಮಿಸಿಕೊಳ್ಳಬೇಕು. ಮನೆ ಮನೆಗೆ ಹೋಗಿ ಕಾಂಗ್ರೆಸ್‌ ಸದಸ್ಯತ್ವ ಮಾಡಿಸಬೇಕು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳುವವರು ಆಧಾರ್, ವೋಟರ್ ಐಡಿ ನೀಡಿದರೆ ಗುರುತಿನ ಚೀಟಿ ಸಿಗುತ್ತೆ. ಆನ್‌ಲೈನ್ ಸದಸ್ಯತ್ವಕ್ಕೆ ಆದ್ಯತೆ ಕೊಡಬೇಕು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. 

ಒಮ್ಮೆ ಸದಸ್ಯರಾದರೆ ಕೆಪಿಸಿಸಿ ನಾಯಕರ ಸಭೆ, ಚಲನವಲನಗಳದ ಮಾಹಿತಿ ದೊರಕಲಿದೆ. ರಾಹುಲ್ ಗಾಂಧಿ ಅವರು ಒಂದು ಮೆಸೇಜ್ ಹಾಕಿ ನಿಮ್ಮ ಎಂಎಲ್‌ಎ ಯಾರಾಗಬೇಕು ಅಂತ ಕೇಳಿದರೆ ಅದರಲ್ಲೇ ಉತ್ತರ ಕೊಡಬಹುದು. ಮುಂದಿನ ದಿನಗಳಲ್ಲಿ ಪದಾಧಿಕಾರಿಗಳ ಚುನಾವಣೆ ಕೂಡ ನಡೆಯಲಿದೆ. ಮಾರ್ಚ್ ಒಳಗೆ ಸದಸ್ಯತ್ವ ಅಭಿಯಾನ ಮುಗಿಯಬೇಕು. ಅನುಮಾನಗಳಿದ್ದರೆ ಬ್ಲಾಕ್ ಅಧ್ಯಕ್ಷರು, ಡಿಸಿಸಿ ಅಧ್ಯಕ್ಷರನ್ನು ಸಂಪರ್ಕ ಮಾಡಿ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಮೇಕೆದಾಟು ಪಾದಯಾತ್ರೆಗೆ ಆಹ್ವಾನ
ತಿಂಡಿಗೆ ಅಲ್ಲೆ ಬಂದ್ ಬಿಡಿ. ತಮಟೆ ನಗಾರಿ ಅವರನ್ನು ಕರ್ಕೊಂಡು ಬಂದ್ಬಿಡಿ. ಮೇಕೆದಾಟು ರಾಮನಗರ ಚಾಮರಾಜನಗರ ಕಲ್ಲುಗಳ ನಡುವೆ ಇದೆ. ಇದು ನಮ್ಮ ನೀರು ನಮ್ಮ ಹಕ್ಕು. ಹೀಗಾಗಿ ಮೊದಲ ದಿನವೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ. ಎಷ್ಟು ಜನರು ಬರ್ತಿರಾ ಅಂತ ಮೊದಲೆ ಹೇಳಬೇಕು. ಟೀ ಶರ್ಟ್, ಟೋಪಿ, ಊಟ ವಸತಿ ವ್ಯವಸ್ಥೆ ಮಾಡಬೇಕು‌. ನಿಮ್ಮ ಎಲ್ಲರಿಗೂ ರೂಂ ಕೊಡಲು ಆಗಲ್ಲ. ನಿಮ್ಮ ಜೊತೆ ಚೌಲ್ಟ್ರಿಯಲ್ಲಿ ಮಲಗುತ್ತೇನೆ. ಎಷ್ಟು ಜನರು ಬರುತ್ತೀರಾ ಎಂದು ಡಿ.ಕೆ. ಶಿವಕುಮಾರ್ ಪಾದಯಾತ್ರೆಗೆ ಜನರನ್ನು ಆಹ್ವಾನಿಸಿದ್ದಾರೆ. ಈ ವೇಳೆ ಸಮಾವೇಶದಲ್ಲಿ ಇದ್ದವರೆಲ್ಲ ಕೈ ಎತ್ತಿ ಬೆಂಬಲ ಸೂಚಿಸಿದ್ದಾರೆ.

ಕಾಂಗ್ರೆಸ್ ಸೂಜಿ ರೀತಿ, ಬಿಜೆಪಿ ಕತ್ತರಿ ರೀತಿ
ಚಾಮರಾಜನಗರದಲ್ಲಿ ಕಾಂಗ್ರೆಸ್​ನಿಂದ ಜನಜಾಗೃತಿ ಸಮಾವೇಶ ನಡೆಸಲಾಗಿದೆ. ನಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಮೀಸಲಿಟ್ಟಿದ್ದೇವೆ. ನಾವು ಎಷ್ಟು ಹಣ ಕೊಟ್ಟಿದ್ದೇವೆಂದು ಬಿಜೆಪಿಯವರು ಕೇಳಲಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರ ಪರಿಸ್ಥಿತಿ ಹೇಗಿತ್ತು? ಈಗ ಜನರ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿಕೊಳ್ಳಲಿ. ಬಿಜೆಪಿಯವರು ಸಮಾಜ ಒಡೆಯುವ ಕೆಲಸ ಮಾಡಿದರು. ಕಾಂಗ್ರೆಸ್ ಸೂಜಿ ರೀತಿ, ಬಿಜೆಪಿ ಕತ್ತರಿ ರೀತಿ ಎಂದು ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. ಬಿಜೆಪಿಯವರು ಸಮಾಜವನ್ನ ಕತ್ತರಿಸುವ ಕೆಲಸ ಮಾಡ್ತಿದ್ದಾರೆ‌. ನಾವು ಸಮಾಜ ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ‌ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನೀರಿಗಾಗಿ ಮನೆಗೊಬ್ಬರಂತೆ ಚಳವಳಿಗೆ ಬನ್ನಿ: ಮೇಕೆದಾಟು ಹೋರಾಟ ಸಭೆಯಲ್ಲಿ ಸಿದ್ದರಾಮಯ್ಯ ಕರೆ

ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆಗೆ ಕಾಂಗ್ರೆಸ್ ಭರದ ಸಿದ್ಧತೆ: ಕಾಂಗ್ರೆಸ್​​ ರಾಜಕೀಯ ಮಾಡುತ್ತಿದೆ ಎಂದ ಎಸ್​ ಮುನಿಸ್ವಾಮಿ