ಸಾರಿಗೆ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಗಳೇ ಇಲ್ಲ! ಬಣಗುಡುತ್ತಿದೆ ಚಿಕ್ಕಬಳ್ಳಾಪುರ RTO
ರಾಜ್ಯ ಸರ್ಕಾರದಲ್ಲಿ ಅದೊಂದು ಇಲಾಖೆಗೆ ಮಹತ್ವದ ಪಾತ್ರವಿದೆ. ಆ ಇಲಾಖೆ ರಾಜ್ಯ ಸರ್ಕಾರಕ್ಕೆ ಚಿನ್ನದ ಮೊಟ್ಟೆಯಿದ್ದಂತೆ. ಆದರೆ, ಅದೇ ಇಲಾಖೆಯಲ್ಲಿ ಬಹುತೇಕ ಅಧಿಕಾರಿ ಸಿಬ್ಬಂದಿಗಳಿಲ್ಲದೇ ಬಣಗುಡುತ್ತಿದೆ. ಇದರಿಂದ ಒಂದೆಡೆ ಸಾರ್ವಜನಿಕರ ಕೆಲಸ-ಕಾರ್ಯಗಳು ಆಗುತ್ತಿಲ್ಲ. ಮತ್ತೊಂದಡೆ ಸರ್ಕಾರಕ್ಕೆ ಬರಬೇಕಾದ ರಾಜಧನ ಸೋರಿಕೆಯಾಗುತ್ತಿದೆ. ಅಷ್ಟಕ್ಕೂ ಆ ಇಲಾಖೆ ಯಾವುದು ಅಂತೀರಾ? ಇಲ್ಲಿದೆ ನೋಡಿ.

ಚಿಕ್ಕಬಳ್ಳಾಪುರ, ನ.14: ಚಿಕ್ಕಬಳ್ಳಾಪುರ(Chikkaballapur)ದಲ್ಲಿರುವ ಆರ್ಟಿಒ(RTO) ಕಛೇರಿಯಲ್ಲಿ 6 ಜನ ಆರ್ಟಿಒ ಇನ್ಸ್ಪೆಕ್ಟರ್ಗಳು ಇರಬೇಕಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಕೇವಲ ಒಬ್ಬನೆ ಆರ್ಟಿಒ ಇನ್ಸ್ಪೆಕ್ಟರ್(RTO Inspector) ಮಾತ್ರ ಇದ್ದು, ಎಲ್ಲವನ್ನು ನೋಡಿಕೊಳ್ಳುತ್ತಿದ್ದಾರೆ. ಹೌದು, ಸದ್ಯ ವಿವೇಕಾನಂದ ಎನ್ನುವ ಓರ್ವ ಆರ್ಟಿಒ ಇದ್ದು, ಅವರೂ ಸಹ ಸಹಾಯಕರಾಗಿದ್ದಾರೆ. ಇದರಿಂದ ಕಛೇರಿಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳಾಗದೇ ಪರದಾಡುತ್ತಿದ್ದಾರೆ.
ಇದು ಅಧಿಕಾರಿಗಳ ಕಥೆಯಾದರೆ, ಇನ್ನು ಆ ಕಛೇರಿಯಲ್ಲಿ ಶೇ.75% ರಷ್ಟು ಕ್ಲರಿಕಲ್ ಸ್ಟಾಪ್ ಹಾಗೂ ಇತರ ಅಧಿಕಾರಿಗಳು ಕೂಡ ಇಲ್ಲವಾಗಿದೆ. ಇದರಿಂದ ಸಕಾಲಕ್ಕೆ ಕಡತಗಳ ವಿಲೇವಾರಿ ಮಾಡಲಾಗುತ್ತಿಲ್ಲ. ತುರ್ತು ಕೆಲಸಗಳಿಗೆಂದು ಕೋಲಾರ, ಬಂಗಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಆರ್ಟಿಒ ಕಛೇರಿಗಳಿಂದ ಸರದಿಯಂತೆ ಆರ್ಟಿಒ ಇನ್ಸ್ಪೆಕ್ಟರ್ಗಳನ್ನು ನಿಯೋಜನೆ ಮಾಡುತ್ತಿದ್ದಾರೆ. ಅದರಂತೆ ಒಬ್ಬರಂತೆ ಒಬ್ಬರು ಪಾಳಿಯಲ್ಲಿ ಬಂದು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಹಿನ್ನಲೆ ಯಾವುದು ಸಹ, ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ.
ಅಸಲಿಗೆ ರಾಜ್ಯಾದ್ಯಂತ ಸಾರಿಗೆ ಇಲಾಖೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕೊರತೆ ಇದೆ. ಪ್ರಸ್ತುತ ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿ ಇಲಾಖೆಯಲ್ಲಿ ಖಾಲಿ ಇರುವ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಾರ? ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸುಗಮಗೊಳಿಸುತ್ತಾರೆಯೇ ಎನ್ನುವುದನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರೇ ತಿಳಿಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ