ಚಿಕ್ಕಬಳ್ಳಾಪುರ: 360 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿ; 48 ಮನೆ ಸಂಪೂರ್ಣ ಕುಸಿತ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಸ್​ಡಿಆರ್​​ಎಫ್ ತಂಡ ನಿಯೋಜನೆ ಮಾಡಲಾಗಿದೆ. ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟದಲ್ಲಿ ಎಸ್​ಡಿಆರ್​ಎಫ್ ನಿಯೋಜನೆ ಮಾಡಿರುವ ಬಗ್ಗೆ​ ತಿಳಿಸಲಾಗಿದೆ.

ಚಿಕ್ಕಬಳ್ಳಾಪುರ: 360 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿ; 48 ಮನೆ ಸಂಪೂರ್ಣ ಕುಸಿತ
ಮಳೆ
Follow us
| Updated By: ganapathi bhat

Updated on:Nov 20, 2021 | 3:19 PM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾ ಮಳೆಯಿಂದ ಅವಾಂತರ ಉಂಟಾಗಿದೆ. 360 ಕೋಟಿ ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,253 ಕೆರೆಗಳು ತುಂಬಿವೆ. 24 ಸೇತುವೆಗಳ ಮೇಲೆ ನೀರು ನೀರು ಹರಿಯುತ್ತಿದೆ. ಹರಿಯುವ ನೀರಿನಲ್ಲಿ ಯಾರೂ ಸಂಚಾರ ಮಾಡಬೇಡಿ. ಗೌರಿಬಿದನೂರಿನಲ್ಲಿ 1015 ಜನರನ್ನು ಸ್ಥಳಾಂತರಿಸಿದ್ದೇವೆ. ಉತ್ತರ ಪಿನಾಕಿನಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಿನ್ನೆ ಮೇಳ್ಯಾ ಕೆರೆ, ಇಂದು ಕಲ್ಲೊಡಿ ಕೆರೆ ಏರಿ ಒಡೆದಿವೆ ಎಂದು ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ​​ ಮಾಹಿತಿ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 48 ಮನೆ ಸಂಪೂರ್ಣ ಕುಸಿತಗೊಂಡಿದೆ. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದೆ. ಜಿಲ್ಲೆಯಲ್ಲಿ 33,000 ಹೆಕ್ಟೇರ್​​ನಷ್ಟು ರಾಗಿ ಬೆಳೆ ಹಾಳಾಗಿದೆ. 30 ಸಾವಿರ ಹೆಕ್ಟೇರ್​​ನಷ್ಟು ಜೋಳದ ಬೆಳೆ ಹಾನಿಯಾಗಿದೆ. 5000 ಹೆಕ್ಟೇರ್​​ನಲ್ಲಿದ್ದ ಹೂ, ಹಣ್ಣು, ತರಕಾರಿ ಹಾಳಾಗಿದೆ ಎಂದು ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ​​ ಮಾಹಿತಿ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಸ್​ಡಿಆರ್​​ಎಫ್ ತಂಡ ನಿಯೋಜನೆ ಮಾಡಲಾಗಿದೆ. ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟದಲ್ಲಿ ಎಸ್​ಡಿಆರ್​ಎಫ್ ನಿಯೋಜನೆ ಮಾಡಿರುವ ಬಗ್ಗೆ ಲತಾ​​ ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸಮ್ಮುಖದಲ್ಲೆ ಆಕ್ರೋಶ ಭುಗಿಲೆದ್ದಿದೆ. ಕೆರೆಯನ್ನು ದುರಸ್ಥಿ ಮಾಡಿಸುವಂತೆ ಸಾಕಷ್ಟು ಭಾರಿ ಮನವಿ ಮಾಡಿದ್ರು ಮಾಡಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೇಳ್ಯಾ ಕೆರೆ ಹೊಡೆದು ಅವಾಂತರವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮಸ್ಥರಿಂದ ಆಕ್ರೋಶ ಕೇಳಿಬಂದಿದೆ. ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರೂಪಾ ವಿರುದ್ದ ಆಕ್ರೋಶ ಹೆಚ್ಚಾಗಿದೆ. ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆಗೆ ಹೋದಾಗ, ರೂಪಾ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಕೆರೆ ಹೊಡೆದು ರೈತರ ಬೆಳೆಗಳು ಕೊಚ್ಚಿ ಹೋದವು ಎಂದು ಆಕ್ರೋಶ ಕೇಳಿಬಂದಿದೆ.

ಕೋಲಾರ: ಆರ್.ಟಿ.ಓ ಕಚೇರಿ ಜಲಾವೃತ ಕೋಲಾರದಲ್ಲಿ ನಿರಂತರ ಮಳೆಯ ಹಿನ್ನೆಲೆ ಜಿಲ್ಲೆಯಾದ್ಯಂತ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ಬೇತಮಂಗಲ ಕೆರಯಿಂದ ನೀರು ಹೊರಕ್ಕೆ ಬಂದಿದೆ. ಹತ್ತೊಂಬತ್ತು ಗೇಟ್ ಗಳನ್ನು ತೆರೆದು ನೀರು ಹೊರ ಬಿಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಕೆರೆಗೆ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆ ಗೇಟ್ ಗಳ ಮೂಲಕ ನೀರು ಹೊರಕ್ಕೆ‌ ಬಿಡಲಾಗುತ್ತಿದೆ.

ಮಳೆಯ ಅಬ್ಬರಕ್ಕೆ ಕೋಲಾರದ ಆರ್.ಟಿ.ಓ ಕಚೇರಿ ಜಲಾವೃತವಾಗಿದೆ. ಕಚೇರಿ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ನೀರಿನಲ್ಲಿ ಮುಳುಗಿದ ಕಚೇರಿ ಆವರಣದಲ್ಲೇ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕಚೇರಿಗೆ ತೆರಳಲಾಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಚೇರಿಯ ಆವರಣದಲ್ಲಿದ್ದ ವಾಹನಗಳು ನೀರಿನಲ್ಲಿ ಮುಳುಗಡೆ ಆಗಿವೆ. ನೀರು ತುಂಬಿದ ಆವರಣದಲ್ಲೇ ಅಧಿಕಾರಿಗಳು ಕೆಲಸಕ್ಕೆ ಹೊರಟಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಉಂಟಾಗಿದೆ. 7 ಸಾವಿರ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿದ್ದ ಬೆಳೆ ನಾಶ ಆಗಿದೆ. ಟೊಮ್ಯಾಟೊ, ತರಕಾರಿ ಜಮೀನಿನಲ್ಲೇ ಕೊಳೆಯುತ್ತಿದೆ.

ಬಳ್ಳಾರಿ: ಸಂಪೂರ್ಣ ನೆಲಕಚ್ಚಿದೆ ಭತ್ತದ ಬೆಳ ಬಳ್ಳಾರಿ ವಿಜಯನಗರದಲ್ಲಿ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಸರಿಸುಮಾರು 10 ಸಾವಿರ ಹೆಕ್ಟೇರ್ ಭತ್ತ ನೆಲಕಚ್ಚಿದೆ. ಎಕರೆಗೆ 25 ಸಾವಿರ ರೂಪಾಯಿ ಹಣ ಖರ್ಚು ಮಾಡಿದ ರೈತರಿಗೆ ಐದು ಸಾವಿರ ವಾಪಸ್ ಬರೋದು ಕಷ್ಟ ಎಂಬ ಪರಿಸ್ಥಿತಿ ಇದೆ. ಎಕರೆಗೆ ಮೂವತ್ತು ಚೀಲ ಬರೋ ಭತ್ತ ಇದೀಗ ಕಾಳು ಉದುರಿದ ಹಿನ್ನೆಲೆ ಕೇವಲ ಐದು ಚೀಲ‌ ಬರುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಮೆಣಸಿನಕಾಯಿ, ಹತ್ತಿ ನಷ್ಟ ಹೊಂದಿದ ರೈತರಿಗೆ ಈ ಬಾರಿ ಅಕಾಲಿಕ ಮಳೆಯಿಂದ ಭತ್ತ ಕೂಡ ನಷ್ಟವಾಗಿದೆ.

ಚಿತ್ರದುರ್ಗ, ದಾವಣಗೆರೆ ಮಳೆಯಿಂದಾಗಿ ಅವಾಂತರ ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅವಾಂತರ ಉಂಟಾಗಿದೆ. ಜಿಲ್ಲೆಯ ವಿವಿಧೆಡೆ ನೂರಾರು ಎಕರೆ ಜಮೀನು ಜಲಾವೃತ ಆಗಿದೆ. ಚಿಕ್ಕಬ್ಬಿಗೆರೆ ಗ್ರಾಮದ ಬಳಿ ಜಮೀನು, ತೋಟ ಜಲಾವೃತವಾಗಿದೆ. ಮೆಕ್ಕೆಜೋಳ, ಅವರೆ, ಕಡಲೆ, ಅಲಸಂದಿ ನೀರುಪಾಲು ಆಗಿದೆ. ನೀರು ನಿಂತು ಕೊಳೆ, ಕೆಂಪುರೋಗದಿಂದ ಅಡಿಕೆಗೆ ಹಾನಿ ಉಂಟಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ‌ ಇರುವ ಹಳ್ಳದಲ್ಲಿ ವೃದ್ಧ ಒಬ್ಬರು ಕೊಚ್ಚಿಕೊಂಡು ಹೋದ ದುರ್ಘಟನೆ ನಡೆದಿದೆ. ಹರಿಯುತ್ತಿರುವ ಹಳ್ಳದಾಟಲು ಹೋದ ರೈತ ನೀರು ಪಾಲಾಗಿದ್ದಾರೆ. ಸುಮಾರು 60 ವರ್ಷದ ವೃದ್ಧ, ಚನ್ನಗಿರಿ ತಾಲೂಕಿನ ಗುರುರಾಜಪುರದ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳೀಯ ಯುವಕರು ರಕ್ಷಣೆಗೆ ಮುಂದಾಗಿದ್ದಾರೆ. ಸ್ವಲ್ಪ ದೂರ ಕೊಚ್ಚಿಕೊಂಡು ಹೋದ ವೃದ್ಧ ಸಾವನ್ನಪ್ಪಿದ್ದಾರೆ. ಸ್ಥಳೀಯ ಯುವಕರು ಶವ ಹೊರತೆಗೆದಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ನಿರಂತರ ಮಳೆಗೆ ಗಗನಕ್ಕೇರಿದ ತರಕಾರಿ ಬೆಲೆ; ಯಾವ ಯಾವ ತರಕಾರಿಗಳಿಗೆ ದರ ಎಷ್ಟಿದೆ ನೋಡಿ

ಇದನ್ನೂ ಓದಿ: 50 ವರ್ಷದಲ್ಲಿ ಇಂತಹ ಮಳೆ ನೋಡಿಲ್ಲ, ಮನೆ ದುರಸ್ತಿಗೆ ತಲಾ 5 ಲಕ್ಷ ಪರಿಹಾರ: ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸುಧಾಕರ್

Published On - 3:17 pm, Sat, 20 November 21