AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಡ್ಲಘಟ್ಟ ತಾಲ್ಲೂಕಿನ ರಾಮಲಿಂಗೇಶ್ವರ ಬೆಟ್ಟದಲ್ಲಿದೆ ರಾಮ, ಲಕ್ಷ್ಮಣ, ಸೀತೆಯ ಹೆಜ್ಜೆ ಗುರುತುಗಳು

ಲಕ್ಷ್ಮಣ, ಸೀತೆ, ಶ್ರೀರಾಮ, ಆಂಜನೇಯ ಬಂದು ಹೋದ ಕುರುಹುಗಳಾಗಿ ಲಕ್ಷ್ಮಣ, ಸೀತೆ ಹಾಗೂ ಶ್ರೀರಾಮನ ತೀರ್ಥಹೊಂಡಗಳಿವೆ, ಈಗಲೂ ನೀರಿನಿಂದ ನಳನಳಿಸುತ್ತಿವೆ. ಅನಾದಿ ಕಾಲದಿಂದಲೂ ತೀರ್ಥಹೊಂಡಗಳು ಬತ್ತಿಲ್ಲವಂತೆ, ಇವುಗಳ ಆಳ ಇದುವರೆಗೂ ಯಾರಿಗೂ ಗೊತ್ತಿಲ್ಲವೆಂದು ಸ್ಥಳೀಯರು ಹೇಳಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ರಾಮಲಿಂಗೇಶ್ವರ ಬೆಟ್ಟದಲ್ಲಿದೆ ರಾಮ, ಲಕ್ಷ್ಮಣ, ಸೀತೆಯ ಹೆಜ್ಜೆ ಗುರುತುಗಳು
ಶಿಡ್ಲಘಟ್ಟ: ರಾಮಲಿಂಗೇಶ್ವರ ಬೆಟ್ಟದಲ್ಲಿದೆ ರಾಮ, ಲಕ್ಷ್ಮಣ, ಸೀತೆ ಹೆಜ್ಜೆಗಳು
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on:Jan 08, 2024 | 6:10 PM

ಅಯೋಧ್ಯೆಯ (Ayodhya) ಶ್ರೀರಾಮನಿಗೂ ನಮ್ಮದೇ ರಾಜ್ಯದ ಅದೊಂದು ಸ್ಥಳಕ್ಕೆ ನಂಟು ಇದೆ. ಅದೊಂದು ಸ್ಥಳದಲ್ಲಿ ಶ್ರೀರಾಮ ಬಾಣ ಬಿಟ್ಟು 3 ತೀರ್ಥೋದ್ಬವಗಳನ್ನು ಸೃಷ್ಟಿಸಿದ್ದು ಒಂದಡೆಯಾದರೆ ರಾಮ ಪ್ರತಿಷ್ಠಾಪಿಸಿದ ಲಿಂಗ ಹಾಗೂ ಆಂಜನೇಯ ಪ್ರತಿಷ್ಠಾಪಿಸಿದ ಲಿಂಗಗಳಿದ್ದು, ರಾಮನ ಹೆಜ್ಜೆ ಗುರುತನ್ನು ಸಾರಿಸಾರಿ ಹೇಳುತ್ತಿವೆ.

ರಾಮಲಿಂಗೇಶ್ವರ ಬೆಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ (Sidlaghatta) ತಾಲ್ಲೂಕಿನ ನಲ್ಲರಾಳ್ಳಹಳ್ಳಿ ಗ್ರಾಮದ ಬಳಿ ಶ್ರೀರಾಮಲಿಂಗೇಶ್ವರ ಬೆಟ್ಟ ಇದೆ. ಸುಮಾರು 200 ಎಕರೆ ಪ್ರದೇಶದಲ್ಲಿ ಹರಡಿರುವ ಏಕಶಿಲೆ ಕಲ್ಲಿನ ಬಂಡೆ. ಇದೇ ಬಂಡೆಯ ಮೇಲೆ ತ್ರೇತಾಯುಗದಲ್ಲಿ ಅಯೋಧ್ಯೆಯ ಶ್ರೀರಾಮ, ಸೀತೆ, ರಾಮ, ಲಕ್ಷ್ಮಣರು ಆಗಮಿಸಿದ್ದರಂತೆ. ರಾವಣನನ್ನು ಸಂಹರಿಸಿ ಹೋಗುವಾಗ ಇದೇ ಬಂಡೆಯ ಮೇಲೆ ಬಂದಾಗ ಸೀತೆಗೆ ನೀರಿನ ತೀವ್ರ ದಾಹವಾಯಿತಂತೆ. ನೀರಿಗಾಗಿ ಬಂಡೆಯ ಮೇಲೆ ಶ್ರೀರಾಮ 3 ಬಾಣಗಳನ್ನು ಬಿಟ್ಟನಂತೆ. ಆಗ ನೀರು ಉದ್ಭವಿಸಿ, ಅದು ಇಂದಿಗೂ ಬತ್ತಿಲ್ಲವಂತೆ.

ಲಕ್ಷ್ಮಣ, ಸೀತೆ, ಶ್ರೀರಾಮನ ತೀರ್ಥಹೊಂಡಗಳು: ಲಕ್ಷ್ಮಣ, ಸೀತೆ, ಶ್ರೀರಾಮ, ಆಂಜನೇಯ ಬಂದು ಹೋದ ಕುರುಹುಗಳಾಗಿ ಲಕ್ಷ್ಮಣ, ಸೀತೆ ಹಾಗೂ ಶ್ರೀರಾಮನ ತೀರ್ಥಹೊಂಡಗಳಿವೆ, ಈಗಲೂ ನೀರಿನಿಂದ ನಳನಳಿಸುತ್ತಿವೆ. ಅನಾದಿ ಕಾಲದಿಂದಲೂ ತೀರ್ಥಹೊಂಡಗಳು ಬತ್ತಿಲ್ಲವಂತೆ, ಇವುಗಳ ಆಳ ಇದುವರೆಗೂ ಯಾರಿಗೂ ಗೊತ್ತಿಲ್ಲವೆಂದು ಸ್ಥಳೀಯರು ಹೇಳಿದ್ದಾರೆ.

ಶ್ರೀರಾಮನಿಂದ ರಾಮಲಿಂಗ : ಬಂಡೆಯ ಮೇಲೆ ಶ್ರೀರಾಮ ಲಿಂಗ ಪ್ರತಿಷ್ಠಾಪನೆಗೆ ಮುಂದಾಗಿದ್ದನಂತೆ. ಆಗ ಲಿಂಗ ತರಲು ಆಂಜನೇಯನನ್ನು ಕಳುಹಿಸುತ್ತಾನೆ. ಆಂಜನೇಯ ಬರುವುದು ತಡವಾದ ಕಾರಣ ರಾಮ ಮರಳಿನಲ್ಲೇ ಲಿಂಗವನ್ನು ಪ್ರತಿಷ್ಠಾಪಿಸಿದ ಕಾರಣ ಅದಕ್ಕೆ ರಾಮಲಿಂಗೇಶ್ವರ ಎಂದು ಹೆಸರು ಬಂದಿದೆ.

ಆಂಜನೇಯನಿಂದ ಆಂಜನೇಯಲಿಂಗ: ಲಿಂಗ ತರಲು ಹೋಗಿದ್ದ ಆಂಜನೇಯ ತಡವಾಗಿ, ಲಿಂಗ ಸಮೇತ ಬಂದನಂತೆ. ಅಷ್ಟರಲ್ಲಿ ಶ್ರೀರಾಮ ಮರಳಿನಲ್ಲಿ ಲಿಂಗ ಸ್ಥಾಪನೆ ಮಾಡಿದ್ದರು. ಇದ್ರಿಂದ ಕುಪಿತಗೊಂಡ ಆಂಜನೇಯ ಶ್ರೀರಾಮನ ಮೇಲೆ ಕೋಪಗೊಂಡ ಕಾರಣ ಶ್ರೀರಾಮ ಆಂಜನೇಯನ ಸಂಧಾನಕ್ಕಾಗಿ ತಾವು ಪ್ರತಿಷ್ಠಾಪಿಸಿದ್ದ ಲಿಂಗದ ಪಕ್ಕದಲ್ಲೆ ಆಂಜನೇಯ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರಂತೆ, ರಾಮಲಿಂಗದ ಜೊತೆ ಜೊತೆಗೆ ಎರಡಕ್ಕೂ ಪೂಜೆಯಾಗಲಿ ಎಂದು ಆಶೀರ್ವದಿಸಿದ್ದನಂತೆ. ಇದರಿಂದ ಬೆಟ್ಟದಲ್ಲಿ ಒಂದೆಡೆ ರಾಮಲಿಂಗ, ಮತ್ತೊಂದು ಆಂಜನೇಯ ಲಿಂಗ ದೇವಸ್ಥಾನಗಳು ಇರುವುದನ್ನು ಕಾಣಬಹುದಾಗಿದೆ.

ಒಟ್ಟಿನಲ್ಲಿ ಅಯೋದ್ಯೆಯ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯನ ಹೆಜ್ಜೆ ಗುರುತುಗಳು ಎದ್ದು ಕಾಣುತ್ತಿವೆ. ಇದರಿಂದ ಶಿವ, ರಾಮ, ಆಂಜನೇಯ ಭಕ್ತರು ಬೆಟ್ಟದ ಮೇಲೆ ಅಂದಿನಿಂದ ಇಂದಿನವರೆಗೂ ಪೂಜೆ, ಪುನಸ್ಕಾರಗಳನ್ನು ಮಾಡಿ ಇಷ್ಟಾರ್ಥ ನೆರೆವೇರಿಸಿಕೊಳ್ಳುತ್ತಿದ್ದಾರೆ.

ಶ್ರೀರಾಮನ ಕುರಿತು ಮತ್ತಷ್ಟು ವಿಚಾರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Mon, 8 January 24