
ಚಿಕ್ಕಬಳ್ಳಾಪುರ, ಡಿಸೆಂಬರ್ 26: ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ಸಂಬಂಧ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಪೈಕಿ ನರಸಿಂಹ ಅವರ ವಿವಾಹ ಕೆಲ ತಿಂಗಳ ಹಿಂದೆಯಷ್ಟೇ ನಡೆದಿತ್ತು. ಪ್ರೀತಿಸಿ ಹಠಕ್ಕೆ ಬಿದ್ದು ನರಸಿಂಹರನ್ನು ಮದುವೆಯಾಗಿದ್ದ ಯುವತಿ 6 ತಿಂಗಳ ಒಳಗೆಯೇ ವಿಧಿಯಾಟಕ್ಕೆ ಗಂಡನನ್ನು ಕಳೆದುಕೊಂಡಿದ್ದಾರೆ.
ಅಪಘಾತದಲ್ಲಿ ಅಣ್ಣ ನರಸಿಂಹ, ತಮ್ಮ ನಂದೀಶ್ ಅಗಲುವಿಕೆ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಕಳೆದ ಐದು ವರ್ಷಗಳ ಹಿಂದೆ ಮೃತರ ತಂದೆಯೂ ಕ್ರಿಸ್ಮಸ್ ಹಬ್ಬದ ದಿನವೇ ಮೃತಪಟ್ಟಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಇಬ್ಬರು ಗಂಡು ಮಕ್ಕಳೂ ಈಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ಕಾರಣ ತಾಯಿಯ ಗೋಳಾಟ ನೆರೆದಿದ್ದವರ ಕಣ್ಣಲ್ಲೂ ನೀರು ತರಿಸಿದೆ.
ಇದನ್ನೂ ಓದಿ: ಮದುವೆಯಾಗು ಎಂದಿದ್ದಕ್ಕೆ ಕತ್ತು ಸೀಳಿ ಕೊಂದ ಪ್ರಿಯಕರ; ನರ್ಸ್ ಮನೆಯಲ್ಲಿ ಹರಿದಿದ್ದು ರಕ್ತದೋಕುಳಿ!
ರಸ್ತೆ ಅಪಗಾತದಲ್ಲಿ ಮೃತಪಟ್ಟಿರುವ ಯುವಕರ ಕುಟುಂಬಸ್ಥರ ಮನೆಗಳಿಗೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಂತ್ಯಕ್ರಿಯೆಗೂ ಆರ್ಥಿಕ ಸಹಾಯ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಮೃತಪಟ್ಟ ಯುವಕರೆಲ್ಲರೂ ಕಡು ಬಡವರು. ಕುಟುಂಬಸ್ಥರು ಇವರ ಮೇಲೆಯೇ ಅವಲಂಬಿತವಾಗಿದ್ರು. ಹೀಗಾಗಿ ಅವರ ಕುಟುಂಬದವರಿಗೆ ಕೆಲಸ ಕೊಡಿಸುವ ಬಗ್ಗೆ ಪ್ರಯತ್ನಿಸೋದಾಗಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಬೈಕ್ಗೆ ಟಿಪ್ಪರ್ ಡಿಕ್ಕಿಹೊಡೆದ ಪರಿಣಾಮ ಬೈಕ್ನಲ್ಲಿದ್ದ ನಾಲ್ವರು ನಿನ್ನೆ ದಾರುಣವಾಗಿ ಮೃತಪಟ್ಟಿದ್ದರು. ಮನೋಜ್, ನರಸಿಂಹ, ನಂದೀಶ್ ಹಾಗೂ ಅರುಣ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಆ ಪೈಕಿ ನರಸಿಂಹ ಮತ್ತು ನಂದೀಶ್ ಸಹೋದರರು. ಚಿಕ್ಕಬಳ್ಳಾಪುರದಿಂದ ಬೈಕ್ನಲ್ಲಿ ಬರುತ್ತಿದ್ದ ಯುವಕರು, ಅಜ್ಜವಾರ ಕ್ರಾಸ್ನಲ್ಲಿ ತಿರುವು ಪಡೆಯಲು ಯತ್ನಿಸಿದ್ದಾರೆ. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಬೈಕ್ಗೆ ಗುದ್ದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.