
ಮೂಡಿಗೆರೆ, ಮಾ.24: ಚಿಕ್ಕಮಗಳೂರಿನ ಬಿಳುಗುಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಅನ್ಯಕೋಮಿನ ಅಪ್ರಾಪ್ತ ಬಾಲಕನ ನಡುವಿನ ವಿಚಾರವು ಈಗ ಸಂಘರ್ಷಕ್ಕೆ ಕಾರಣವಾಗಿದ್ದು, ಪೊಲೀಸರು ಎರಡು ಗುಂಪುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತಾಂತರದ ಒತ್ತಾಯ ಮತ್ತು ಅಶ್ಲೀಲ ಫೋಟೋಗಳ ಮೂಲಕ ಬ್ಲಾಕ್ಮೇಲ್ ಮಾಡಿದ ಆರೋಪ ಒಂದೆಡೆಯಾದರೆ, ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪ ಮತ್ತೊಂದೆಡೆ ಕೇಳಿಬಂದಿದೆ. ಬಾಲಕಿಯ ತಂದೆ ನೀಡಿದ ದೂರಿನನ್ವಯ, ಅಪ್ರಾಪ್ತ ಬಾಲಕ ಮತ್ತು ಆತನ ತಂದೆ ಇಲಿಯಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಕಿಯು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ವಿವಾಹವಾಗಬೇಕು ಎಂದು ಬಾಲಕ ಒತ್ತಾಯಿಸುತ್ತಿದ್ದ, ಬಾಲಕಿ ಒಪ್ಪದಿದ್ದಾಗ ಆಕೆಯ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿ ಬ್ಲಾಕ್ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್ಎಸ್ (BNS) 329(4), ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ 2022 (ಮತಾಂತರ ನಿಷೇಧ ಕಾಯ್ದೆ), ಐಟಿ ಆಕ್ಟ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಬಿಜೆಪಿಗೆ ಮುಸ್ಲಿಂ ಸಾಥ್! ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮಹಿಳೆಯರು
ಅಪ್ರಾಪ್ತ ಬಾಲಕ ನೀಡಿದ ದೂರಿನನ್ವಯ, ಆತನ ಮೇಲೆ ಹಲ್ಲೆ ನಡೆಸಿದ ಆರೋಪದಡಿ 6 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ದಿನಾಂಕ 23-03-2026ರಂದು ಸಂಜೆ ಕಬಾಬ್ ಅಂಗಡಿ ಬಳಿ ಕರೆಸಿಕೊಂಡ ಆರೋಪಿಗಳಾದ ಪ್ರಶಾಂತ್, ಸುದೇವ್, ಪ್ರಣೀತ್, ಚಂದ್ರು, ಪುಷ್ಪ ಮತ್ತು ವಿನೋದ್ ಎಂಬುವವರು ಬಾಲಕನಿಗೆ ಮುತ್ತಿಗೆ ಹಾಕಿ, ಕೆನ್ನೆಗೆ ಹೊಡೆದು, ಕುತ್ತಿಗೆ ಹಿಸುಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತಾವಿಬ್ಬರೂ ಈ ಹಿಂದೆ ಪ್ರೀತಿಸುತ್ತಿದ್ದು, ಪೋಷಕರು ಬುದ್ಧಿವಾದ ಹೇಳಿದ ಮೇಲೆ ಓದಿನ ಕಡೆ ಗಮನ ಹರಿಸಿದ್ದೆವು. ಆದರೆ ಹಳೆಯ ವಿಚಾರಕ್ಕೆ ಈಗ ಹಲ್ಲೆ ನಡೆಸಲಾಗಿದೆ ಎಂದು ಬಾಲಕ ದೂರಿದ್ದಾನೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ