ಸಿಬಿಐ ನಿವೃತ್ತ ಎಸ್​ಪಿಯ 97ಲಕ್ಷ ರೂ. ಸಮೇತ ಬಾಡಿಗೆ ಕಾರು ಚಾಲಕ ಪರಾರಿ: ಕೆಲವೇ ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂಧನ

ಅವರು ಸಿಬಿಐನ ನಿವೃತ್ತ ಎಸ್​​ಪಿ. ಅವರಿಗೆ ಸೇರಿದ 97 ಲಕ್ಷ ರೂಪಾಯಿ ಸಮೇತ ಬಾಡಿಗೆ ಕಾರು ಚಾಲಕ ಪರಾರಿ ಆಗಿದ್ದ ಪ್ರಕರಣ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಚಳ್ಳಕೆರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆ ಹೇಗಿತ್ತೆಂಬ ವಿವರ ಇಲ್ಲಿದೆ.

ಸಿಬಿಐ ನಿವೃತ್ತ ಎಸ್​ಪಿಯ 97ಲಕ್ಷ ರೂ. ಸಮೇತ ಬಾಡಿಗೆ ಕಾರು ಚಾಲಕ ಪರಾರಿ: ಕೆಲವೇ ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂಧನ
ಆರೋಪಿ ರಮೇಶ್ ಹಾಗೂ ನಗದಿನ ಜತೆ ಚಳ್ಳಕೆರೆ ಪೊಲೀಸರು
Edited By:

Updated on: Aug 28, 2025 | 1:04 PM

ಚಿತ್ರದುರ್ಗ, ಆಗಸ್ಟ್ 28: ಸಿಬಿಐ (CBI) ನಿವೃತ್ತ ಎಸ್​​ಪಿಯನ್ನೇ ಯಾಮಾರಿಸಿ 97 ಲಕ್ಷ ರೂ. ಸಮೇತ ಬಾಡಿಕೆ ಕಾರು ಚಾಲಕನೊಬ್ಬ ಪರಾರಿಯಾಗಿದ್ದು, ಅದಾದ ಕೆಲವೇ ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂಧನಕ್ಕೊಳಗಾದ ಘಟನೆ ಚಿತ್ರದುರ್ಗದ (Chitradurga) ಚಳ್ಳಕೆರೆಯಲ್ಲಿ ನಡೆದಿದೆ. ಇದೀಗ ಚಳ್ಳಕೆರೆ ಪೊಲೀಸರ (Challakere Police) ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಬೆಂಗಳೂರು ಮೂಲದ ಸಿಬಿಐನ ನಿವೃತ್ತ ಎಸ್​​ಪಿ ಗುರುಪ್ರಸಾದ್ ಪತ್ನಿ ಲಲಿತಾ ಜತೆ ಬಾಡಿಗೆ ಕಾರಿನಲ್ಲಿ ಮಂಗಳವಾರ ಬಳ್ಳಾರಿಗೆ ತೆರಳಿದ್ದರು. ಬಳ್ಳಾರಿಯಲ್ಲಿದ್ದ ಜಮೀನು ಮಾರಾಟ ಮಾಡಿ 97ಲಕ್ಷ ರೂ. ಪಡೆದಿದ್ದರು. ಬಳಿಕ ಅದೇ ಕಾರಲ್ಲಿ ವಾಪಸ್ ಬೆಂಗಳೂರಿಗೆ ಹೊರಟಿದ್ದರು.

ಮಧ್ಯಾಹ್ನದ ವೇಳೆಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಹೋಟೆಲ್ ಒಂದರ ಬಳಿ ಊಟಕ್ಕೆ ನಿಂತಿದ್ದರು. ಬೇಗನೆ ಊಟ ಮುಗಿಸಿದ ಕಾರು ಚಾಲಕ, ಗುರುಪ್ರಸಾದ್ ಅವರನ್ನು ಯಾಮಾರಿಸಿ ಕಾರಲ್ಲಿದ್ದ ಹಣದ ಸಮೇತ ಪರಾರಿ ಆಗಿದ್ದಾನೆ. ಗುರುಪ್ರಸಾದ್ ತಕ್ಷಣ ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು ಡಿವೈಎಸ್ಪಿ ರಾಜಣ್ಣ, ಸಿಪಿಐ ಕುಮಾರ್, ಪಿಎಸ್​ಐ ಈರೇಶ್ ಹಾಗೂ ತಂಡ ಸಿನಿಮೀಯ‌ ರೀತಿಯಲ್ಲಿ ಬೆನ್ನತ್ತಿದೆ. ಪಾವಗಡ ಬಳಿ, ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಚಾಲಕ ರಮೇಶ್ ವೇಗವಾಗಿ ಚಾಲನೆ ಮಾಡಿದಾಗ ಮರಕ್ಕೆ ಕಾರು ಡಿಕ್ಕಿಯಾಗಿದೆ. ಪೊಲೀಸರು ಆರೋಪಿ ರಮೇಶನನ್ನು ಬಂಧಿಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗದಲ್ಲಿ ಕಾಂಗ್ರೆಸ್​ ಶಾಸಕ ಕೆಸಿ ವೀರೇಂದ್ರ ಮನೆ ಮೇಲೆ ಇ.ಡಿ ದಾಳಿ

ಇದನ್ನೂ ಓದಿ
ಶಾಸಕ ವೀರೇಂದ್ರ ಪಪ್ಪಿ ಬಂಧನ: ಇಡಿ ದಾಳಿ ವೇಳೆ ಕೋಟ್ಯಂತರ ರೂ ನಗದು ಪತ್ತೆ
ವಿರೇಂದ್ರ ಪಪ್ಪಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ
ಕರ್ನಾಟಕದಲ್ಲಿ ಇಡಿ ದಾಳಿ, ಸಿಕ್ಕಿಂನಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕ?
ಗೇಮಿಂಗ್​ ಆ್ಯಪ್​ಗಳಿಗೆ ಹಣ ವರ್ಗಾವಣೆ? ಕೈ​ ಶಾಸಕನ ಮನೆ ಮೇಲೆ ಇಡಿ ದಾಳಿ

ಆಂಧ್ರ ಪ್ರದೇಶದ ಹಿಂದೂಪುರ ಮೂಲದ‌ ರಮೇಶ್, ಬೆಂಗಳೂರಿನಿಂದ‌ ಗುರುಪ್ರಸಾದ್ ಜತೆಗೆ ಕಾರು ಚಾಲನೆ ಮಾಡಿಕೊಂಡು ಬರುತ್ತಲೇ‌ ಎಲ್ಲಾ ವಿಷಯ ತಿಳಿದುಕೊಂಡಿದ್ದಾನೆ. ಬಳ್ಳಾರಿಯಲ್ಲಿ ಜಮೀನು ಮಾರಾಟ‌ ಮಾಡಿ 97 ಲಕ್ಷ‌ ರೂ. ಪಡೆದು ಕಾರಲ್ಲಿಟ್ಟಾಗಲೇ ಕದಿಯಲು ಹೊಂಚು ಹಾಕಿದ್ದಾನೆ. ಚಳ್ಳಕೆರೆ ಬಳಿ ಊಟಕ್ಕೆ‌ ಕಾರು ನಿಲ್ಲಿಸುತ್ತಿದ್ದಂತೆಯೇ ಹೋಟೆಲ್‌ಗೆ ತೆರಳಿ ಬೇಗ ಊಟ ಮುಗಿಸಿ ಎದ್ದಿದ್ದಾನೆ. ಕಾರಿನಲ್ಲಿ ಹಣದ ಸಮೇತ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಸದ್ಯ, ಘಟನೆ ನಡೆದ ನಾಲ್ಕು ತಾಸುಗಳಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಮತ್ತೊಂದೆಡೆ, ನದಗು ವಹಿವಾಟಿಗೆ ಹೆಚ್ಚಿನ ನಿರ್ಬಂಧ ಹಾಗೂ ಮಿತಿಗಳಿರುವುದರಿಂದ ಅಪಾರ ಪ್ರಮಾಣದ ಕರೆನ್ಸಿಯೊಂದಿಗೆ ಸಿಬಿಐ ನಿವೃತ್ತ ಎಸ್​​ಪಿ ಕಾರಿನಲ್ಲಿ ಹೇಗೆ ಪ್ರಯಾಣಿಸಿದರು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಆದರೆ, ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆಸ್ತಿ ಮಾರಾಟ ಮಾಡಿದ್ದು ಮತ್ತು ನಗದಿನೊಂದಿಗೆ ತೆರಳುವುದಕ್ಕೆ ಸಂಬಂಧಿಸಿ ಸೂಕ್ತ ದಾಖಲೆಯನ್ನು ಅವರು ಹೊಂದಿದ್ದರು ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 am, Thu, 28 August 25

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us