ಚುನಾವಣೆ ವೇಳೆ ಅಂಗೈಯಲ್ಲೇ ಚಿತ್ರದುರ್ಗಕ್ಕೆ ನೇರ ರೈಲು ಮಾರ್ಗ ತೋರಿಸುವ ಜನಪ್ರತಿನಿಧಿಗಳು ಆಮೇಲೆ ಹಳಿ ತಪ್ಪುತ್ತಿದ್ದಾರೆ!

| Updated By: ಸಾಧು ಶ್ರೀನಾಥ್​

Updated on: Feb 01, 2024 | 11:50 AM

Chitradurga Railway: ಹೀಗಾಗಿ, ರೈಲ್ವೆ ಕನೆಕ್ಟಿವಿಟಿ ಇಲ್ಲದ ಕಾರಣಕ್ಕೆ ಚಿತ್ರದುರ್ಗದಲ್ಲಿ ವ್ಯಾಪಾರ ವ್ಯವಹಾರಗಳು ಅಭಿವೃದ್ಧಿ ಕಂಡಿಲ್ಲ. ಉದ್ಯಮಗಳ ಸ್ಥಾಪನೆಗೆ ಉದ್ಯಮಿಗಳು ಹಿಂದೇಟು ಹಾಕುತ್ತಾರೆ. ಐತಿಹಾಸಿಕ ನಾಡಾಗಿದ್ದರೂ ಪ್ರವಾಸೋದ್ಯಮವೂ ಅಭಿವೃದ್ಧಿ ಕಂಡಿಲ್ಲ.

ಚುನಾವಣೆ ವೇಳೆ ಅಂಗೈಯಲ್ಲೇ ಚಿತ್ರದುರ್ಗಕ್ಕೆ ನೇರ ರೈಲು ಮಾರ್ಗ ತೋರಿಸುವ ಜನಪ್ರತಿನಿಧಿಗಳು ಆಮೇಲೆ ಹಳಿ ತಪ್ಪುತ್ತಿದ್ದಾರೆ!
ಚಿತ್ರದುರ್ಗಕ್ಕೆ ನೇರ ರೈಲು ಮಾರ್ಗ ಹಾಕಿಸದೆ ಜನಪ್ರತಿನಿಧಿಗಳು ಹಳಿ ತಪ್ಪುತ್ತಿದ್ದಾರೆ!
Follow us on

ಮಧ್ಯ ಕರ್ನಾಟಕದ ಚಿತ್ರದುರ್ಗ ನಗರದಲ್ಲಿ (Chitradurga) ರೈಲ್ವೆ ನಿಲ್ದಾಣವೇನೋ ಇದೆ. ಆದ್ರೆ, ರಾಜ್ಯದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ನೇರ ರೈಲು ಮಾರ್ಗ ಮಾತ್ರ ಈವರೆಗೆ ನಿರ್ಮಾಣ ಆಗಿಲ್ಲ. ಬದಲಾಗಿ ನೇರ ರೈಲು ಮಾರ್ಗ  (Chitradurga Railway) ಎಂಬುದು ಕೇವಲ ಚುನಾವಣಾ ದಾಳವಾಗುತ್ತಿದೆ ಎಂದು ದುರ್ಗದ ಜನ ಕಿಡಿ ಕಾರುವಂತಾಗಿದೆ. ಈ ಕುರಿತು ವರದಿ ಇಲ್ಲಿದೆ.

ಎರಡು ದಶಕಗಳಿಂದ ನೇರ ರೈಲು ಮಾರ್ಗಕ್ಕಾಗಿ ಕೋಟೆನಾಡಿನ ಜನರ ಹೋರಾಟ. ಕೇವಲ ಚುನಾವಣೆ ದಾಳವಾಗಿ ಬಳಕೆ ಆಗುತ್ತಿರುವ ನೇರ ರೈಲು ಮಾರ್ಗ. ಘೋಷಣೆಗೆ ಸೀಮಿತವಾಗಿ ನೆನೆಗುದಿಗೆ ಬಿದ್ದಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ. ಹೌದು, ಚಿತ್ರದುರ್ಗ ನಗರದಿಂದ ರಾಜ್ಯದ ರಾಜಧಾನಿ ಬೆಂಗಳೂರಿಗೆ ಈವರೆಗೆ ನೇರ ರೈಲು ಮಾರ್ಗ ನಿರ್ಮಾಣ ಆಗಿಲ್ಲ. ಕಳೆದೆರಡು ದಶಕಗಳಿಂದ ದುರ್ಗದ ಜನರು ಹೋರಾಟ ಮಾಡುತ್ತ ಬಂದಿದ್ದಾರೆ. ಆದ್ರೆ, ಚುನಾವಣೆ ಸಂದರ್ಭಗಳಲ್ಲಿ ಮಾತ್ರ ನೇರ ರೈಲು ಮಾರ್ಗವನ್ನು ಅಂಗೈಯಲ್ಲೇ ತೋರಿಸುವ ರಾಜಕಾರಣಿಗಳು ಬಳಿಕ ಮರೆತೇ ಬಿಡುತ್ತಾರೆ.

ಮೂರು ವರ್ಷದ ಹಿಂದೆಯೇ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿರುವುದಾಗಿ ಹೇಳಿದೆ. ಆದ್ರೆ, ಚಿತ್ರದುರ್ಗ ಮತ್ತು ಹಿರಿಯೂರು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಹೀಗಾಗಿ, ರೈಲ್ವೆ ಯೋಜನೆಗೆ ಇನ್ನೆಷ್ಟು ವರ್ಷಗಳು ಬೇಕೆಂದು ಸ್ಥಳೀಯರು ಕಿಡಿ ಕಾರುತ್ತಿದ್ದಾರೆ.

ಇನ್ನು ಈ ಬಗ್ಗೆ ಒಂದು ವರ್ಷದ ಹಿಂದೆಯೇ ದಾವಣಗೆರೆಯಿಂದ ಭರಮಸಾಗರದವರೆಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿಗೂ ಚಾಲನೆ ಸಿಕ್ಕಿದೆ. ಚಿತ್ರದುರ್ಗ ಮತ್ತು ಹಿರಿಯೂರು ಭಾಗದಲ್ಲಿ ಮಾತ್ರ ಇನ್ನೂ ಹಲವೆಡೆ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ. 1,900 ಕೋಟಿ ವೆಚ್ಚದಲ್ಲಿ ರೈಲ್ವೆ ಕಾಮಗಾರಿ ನಡೆಯಬೇಕಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಕಾಫಿ ಬೆಳೆ-ಬೆಲೆ ಬಂಪರ್! ಆದರೆ ಕಳ್ಳಕಾಕರ ಕಾಟ, ಸಿಸಿಟಿವಿ ಖರೀದಿಗೆ ಮುಗಿಬಿದ್ದ ಮಾಲೀಕರು

ಆದ್ರೆ, ಕಳೆದ ಚುನಾವಣೆಯಲ್ಲಿ ನೇರ ರೈಲು ಮಾರ್ಗ, ಭದ್ರಾ ಮೇಲ್ದಂಡೆ ಯೋಜನೆ ಪೂರೈಸುವ ಭರವಸೆಯನ್ನೇ ಮುಖ್ಯ ದಾಳವಾಗಿಸಿಕೊಂಡು ಗೆದ್ದ ಬಿಜೆಪಿ ಸಂಸದ ಎ. ನಾರಾಯಣ ಸ್ವಾಮಿ ಗೆದ್ದ ಬಳಿಕ ನಿರ್ಲಕ್ಷ್ಯ ತೋರಿದ್ದಾರೆ. ಈಗ ಮತ್ತೆ ಚುನಾವಣೆ ಬಂದಿದ್ದು ದುರ್ಗದ ಜನರು ಪಾಠ ಕಲಿಸಬೇಕಿದೆ ಅಂತಾರೆ ರೈಲ್ವೆ ಹೋರಾಟ ಸಮಿತಿ ಮುಖಂಡ ಶಿವು ಯಾದವ್.

ಒಟ್ಟಾರೆಯಾಗಿ ಚಿತ್ರದುರ್ಗದಿಂದ ನೇರವಾಗಿ ರಾಜಧಾನಿ ಬೆಂಗಳೂರು ಸಂಪರ್ಕ ಕಲ್ಪಿಸಲಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಆಮೆಗತಿಯಲ್ಲಿ ಸಾಗಿದ್ದಂತು ಓಪನ್ ಸೀಕ್ರೇಟ್. ಚಿತ್ರದುರ್ಗ ಮತ್ತು ಹಿರಿಯೂರು ಭಾಗದಲ್ಲಿ ಇನ್ನೂ ಭೂಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಇನ್ನು ಕಾಮಗಾರಿ ಪೂರ್ಣಗೊಳ್ಳುವುದು ಯಾವ ಕಾಲದಲ್ಲೋ ಎಂಬ ಅನುಮಾನ ಜನರಲ್ಲಿ ಮೂಡಿದೆ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ನೇರ ರೈಲು ಮಾರ್ಗ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ