ಟಿವಿ9 ವರದಿ ಬೆನ್ನಲ್ಲೇ ಮಠದಕುರುಬರಹಟ್ಟಿ ಬಳಿಯ ಕೆರೆಯಲ್ಲಿರುವ ವಿದ್ಯುತ್ ಕಂಬಗಳ ತೆರವಿಗೆ ಪತ್ರ ಬರೆದ ಬೆಸ್ಕಾಂ ಇಲಾಖೆ EE

ಚಿತ್ರದುರ್ಗ ತಾಲೂಕಿನ ಮಠದಕುರುಬರಹಟ್ಟಿ ಬಳಿಯ ಮುರುಘಾಮಠದ ಮುಂಭಾಗದಲ್ಲಿರುವ ಕೆರೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿದ್ದು ವಿದ್ಯುತ್ ತಂತಿಗಳು ನೀರಿಗೆ ತಾಗುವಂತಿದ್ದವು. ಈ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾದ ಕೆಲ ಹೊತ್ತಿನಲ್ಲೇ ಬೆಸ್ಕಾಂ ಇಲಾಖೆ EE ಜಯಣ್ಣ ಅವರು ಕೇಂದ್ರ ಕಚೇರಿಗೆ ಪತ್ರ ಬರೆದು ವಾರದೊಳಗೆ ಕೆರೆಯಲ್ಲಿರುವ ವಿದ್ಯುತ್ ಕಂಬ ತೆರವಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಟಿವಿ9 ವರದಿ ಬೆನ್ನಲ್ಲೇ ಮಠದಕುರುಬರಹಟ್ಟಿ ಬಳಿಯ ಕೆರೆಯಲ್ಲಿರುವ ವಿದ್ಯುತ್ ಕಂಬಗಳ ತೆರವಿಗೆ ಪತ್ರ ಬರೆದ ಬೆಸ್ಕಾಂ ಇಲಾಖೆ EE
ಮಠದಕುರುಬರಹಟ್ಟಿ ಬಳಿಯ ಕೆರೆಯಲ್ಲಿರುವ ವಿದ್ಯುತ್ ಕಂಬ
Edited By: ಆಯೇಷಾ ಬಾನು

Updated on: Dec 03, 2023 | 7:59 AM

ಚಿತ್ರದುರ್ಗ, ಡಿ.03: ವಿದ್ಯುತ್ ಅವಘಡ ಪ್ರಕರಣಗಳ ತಡೆಗೆ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಮಾತ್ರ ಬೆಸ್ಕಾಂ ಅಧಿಕಾರಿಗಳು ತೀವ್ರ ನಿರ್ಲಕ್ಷ ತೋರಿದ್ದಾರೆ. ಕೆರೆಯಲ್ಲೇ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಕ್ಯಾರೆ ಅಂದಿಲ್ಲ ಎಂಬ ಬಗ್ಗೆ ನಿನ್ನೆ ಟಿವಿ9 ವರದಿ ಮಾಡಿತ್ತು (TV9 Impact). ಈ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಬೆಸ್ಕಾಂ ಇಲಾಖೆ EE ಜಯಣ್ಣ (BESCOM EE) ಅವರು ಟಿವಿ9 ವರದಿ ಉಲ್ಲೇಖಿಸಿ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದಾರೆ. ಬೆವಿಕಂ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ವಾರದೊಳಗೆ ಕೆರೆಯಲ್ಲಿರುವ ವಿದ್ಯುತ್ ಕಂಬ ತೆರವಿಗೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಚಿತ್ರದುರ್ಗ ತಾಲೂಕಿನ ಮಠದಕುರುಬರಹಟ್ಟಿ ಬಳಿಯ ಮುರುಘಾಮಠದ ಮುಂಭಾಗದಲ್ಲಿರುವ ಐತಿಹಾಸಿಕ ಕೆರೆಗೆ ಅರಸನ ಕೆರೆ ಎಂದೇ ಕರೆಯಲಾಗುತ್ತದೆ. ಕೆಲ ವರ್ಷಗಳ ಹಿಂದೆ ಬರಿದಾಗಿದ್ದ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆ ಕೆರೆ ಅಂಗಳದಲ್ಲೇ ವಿದ್ಯುತ್ ಕಂಬಗಳನ್ನು ನೆಟ್ಟು ವಿದ್ಯುತ್ ಸಂಪರ್ಕ ಕಲ್ಪಿಸಿತ್ತು. ಆದರೆ, ಇತ್ತೀಚೆಗೆ ಕೆರೆ ಭರ್ತಿ ಆಗಿದ್ದು ನೀರಿನಲ್ಲಿ ಮುಳುಗಿರುವ ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿವೆ. ಅಲ್ಲದೆ ವಿದ್ಯುತ್ ತಂತಿಗಳು ನೀರಿಗೆ ತಾಗುವಂತಿವೆ. ಹೀಗಾಗಿ, ಕೆರೆಗೆ ಬರುವ ಮೀನುಗಾರರು, ಜನ-ಜಾನುವಾರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದ್ದು ಜನರಲ್ಲಿ ಭೀತಿ ಸೃಷ್ಟಿ ಆಗಿತ್ತು. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ ತೋರಿದ್ದಾರೆಂದು ಸ್ಥಳೀಯರು ಆರೋಪ ಮಾಡಿದ್ದರು. ಸದ್ಯ ಈ ಸಂಬಂಧ ಟಿವಿ9 ವರದಿ ಬಿತ್ತರಿಸಿದ್ದು ವಾರದೊಳಗೆ ಕೆರೆಯಲ್ಲಿನ ವಿದ್ಯುತ್ ಕಂಬ ತೆರವಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಮಠದಕುರುಬರಹಟ್ಟಿ ಬಳಿಯ ಕೆರೆಯಲ್ಲಿರುವ ವಿದ್ಯುತ್ ಕಂಬ

ಟಿವಿ9ನಲ್ಲಿ ವರದಿ ಪ್ರಸಾರವಾದ ಕೆಲ ಹೊತ್ತಿನಲ್ಲೇ ಬೆಸ್ಕಾಂ ಇಲಾಖೆ EE ಜಯಣ್ಣ ಅವರು ಕೇಂದ್ರ ಕಚೇರಿಗೆ ಪತ್ರ ಬರೆದು ವಾರದೊಳಗೆ ಕೆರೆಯಲ್ಲಿರುವ ವಿದ್ಯುತ್ ಕಂಬ ತೆರವಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us