Siddaramaiah Speech: ಗ್ಯಾರಂಟಿ ಯೋಜನೆಗಳನ್ನು ದೇಶಕ್ಕೆ ತಿಳಿಸುವ ಕೆಲಸ ಮಾಡಲಾಗುತ್ತಿದೆ: ಸಿದ್ದರಾಮಯ್ಯ

ಸಿದ್ದರಾಮಯ್ಯ, ಕನಸಿನ ಕರುನಾಡು ಟಿವಿ9 ಸಮ್ಮಿಟ್​ 2023: ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿಗಳನ್ನು ದೇಶಕ್ಕೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳಲ್ಲಿ ಜಾರಿ ಮಾಡಲಾಗಿದೆ. ಯುವ ನಿಧಿ ಯೋಜನೆ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ ಎಂದರು.

Siddaramaiah Speech: ಗ್ಯಾರಂಟಿ ಯೋಜನೆಗಳನ್ನು ದೇಶಕ್ಕೆ ತಿಳಿಸುವ ಕೆಲಸ ಮಾಡಲಾಗುತ್ತಿದೆ: ಸಿದ್ದರಾಮಯ್ಯ
ಕನಸಿನ ಕರುನಾಡು ಟಿವಿ9 ಸಮ್ಮಿಟ್​ 2023 ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Follow us
| Updated By: Rakesh Nayak Manchi

Updated on:Sep 15, 2023 | 12:07 PM

ಬೆಂಗಳೂರು, ಸೆ.15: ಗ್ಯಾರಂಟಿ ಯೋಜನೆಗಳನ್ನು (Guarantee Schemes) ಇಡೀ ದೇಶಕ್ಕೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಹೇಳಿದರು. ಕನಸಿನ ಕರುನಾಡು ಟಿವಿ9 ಸಮ್ಮಿಟ್​ 2023 (TV9 Karnataka Summit 2023) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳಲ್ಲಿ ಜಾರಿ ಮಾಡಲಾಗಿದೆ. ಯುವ ನಿಧಿ ಯೋಜನೆ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ ಎಂದರು.

ಟಿವಿ9 ಸಮ್ಮಿಟ್​ ಮೂಲಕ ವಿಶ್ವದ ಜನರಿಗೆ ವಿಶ್ವ ಪ್ರಜಾಪ್ರಭುತ್ವ ದಿನದ ಶುಭಾಶಯಗಳನ್ನು ತಿಳಿಸಿದ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವದ ತಿರುಳನ್ನು ವಿವರಿಸಿದರು.

ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಗಳ ಮೂಲಕ ಮುಂದಿನ ಅಭಿವೃದ್ಧಿಯ ಪಕ್ಷಿನೋಟವನ್ನು ಜನರ ಮುಂದಿಡುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ಮಾಡುತ್ತವೆ. ಅದರಂತೆ, ಕಾಂಗ್ರೆಸ್ ಪಕ್ಷ ಕೂಡ ಪ್ರಣಾಳಿಕೆಯನ್ನು ಮುಂದಿಟ್ಟಿತ್ತು. ನಮಗೆ ಅವಕಾಶ ಕಲ್ಪಿಸಿಕೊಟ್ಟರೆ ಮುಂದಿನ ಐದು ವರ್ಷಗಳಲ್ಲಿ ನಾವು ಹೇಗೆ ಈ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇವೆ ಎಂಬುದನ್ನು ಪ್ರಸ್ತಾಪ ಮಾಡಿದ್ದೇವು. ಈ ರಾಜ್ಯದ ಜನರು ಎಲ್ಲಾ ಪಕ್ಷಗಳ ಪ್ರಣಾಳಿಕೆಯನ್ನು ನೋಡಿ ಕಾಂಗ್ರೆಸ್​ಗೆ ಅಧಿಕಾರ ನೀಡಿದರು ಎಂದರು.

ಮೇ 20 ರಂದು ನಾನು ಮತ್ತು ಡಿಕೆ ಶಿವಕುಮಾರ್ ಸಹಿತ ಎಂಟು ಮಂದಿ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿ ನೇರವಾಗಿ ವಿಧಾನಸೌಧಕ್ಕೆ ಹೋಗಿ ಮೊದಲ ಸಂಪುಟ ಸಭೆ ನಡೆಸಿದ್ದೆವು. ಜನರಿಗೆ ಕೊಟ್ಟ ವಚನಗಳನ್ನು ಈಡೇರಿಸಬೇಕು, ವಿಶೇಷವಾಗಿ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಅಂದು ತೀರ್ಮಾನಿಸಿದ್ದೆವು. ಜೂನ್ 11 ರಿಂದ ಒಂದೊಂದೇ ಭರವಸೆಯನ್ನು ಜಾರಿಗೆ ತರಲು ಆರಂಭಿಸಿದ್ದೆವು. ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯನ್ನು ಜಾರಿ ತಂದೆವು. ಆ ಮೂಲಕ ರಾಜ್ಯದ ಎಲ್ಲಾ ಮಹಿಳೆಯರು ಸಾರಿಗೆ ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಿದೆವು. ಸದ್ಯ ದಿನನಿತ್ಯ 50 ಲಕ್ಷ ಮಂದಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಒಬ್ಬೊಬ್ಬ ಸಚಿವರನ್ನೇ ಭೇಟಿಯಾಗುತ್ತಿರುವ ಸಿಎಂ ಸಿದ್ದರಾಮಯ್ಯ; ಕುತೂಹಲ ಮೂಡಿಸಿದ ಭೇಟಿ

ಇದಾದ ಮೇಲೆ ಅನ್ನಭಾಗ್ಯ ಕಾರ್ಯಕ್ರಮ ಜಾರಿ ಬಗ್ಗೆ ಭರವಸೆ ನೀಡಿದ್ದೆವು. ಕೇಂದ್ರ ಸರ್ಕಾರ ಕೊಡುವ ಐದು ಕೆಜಿ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ಸೇರಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದೆವು. ನಾವು ಅದನ್ನು ಈಡೇರಿಸಲು ಕೇಂದ್ರ ಸರ್ಕಾರದ ಅಡಿಯಲ್ಲಿರುವ ಫುಡ್ ಕಾರ್ಪರೇಷನ್ ಆಫ್ ಇಂಡಿಯಾ​ಗೆ ಮನವಿ ಮಾಡಿದ್ದೆವು. ಆರಂಭದಲ್ಲಿ ಕೊಡುತ್ತೇವೆ ಎಂದು ಹೇಳಿತ್ತು. ನಂತರ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಅಕ್ಕಿ ಕೊಡಲು ನಿರಾಕರಿಸಿತು. ನಾವು ಹಣ ಕೊಡುತ್ತೇವೆ ಎಂದು ಲಿಖಿತ ಭರವಸೆ ನೀಡಿದ್ದರೂ ಅಕ್ಕಿ ಕೊಡಲಿಲ್ಲ. ಆ ಮೂಲಕ ಬಡವರ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಿತು ಎಂದರು.

ಪಂಜಾಬ್, ಛತ್ತಿಸ್​​ಗಢ, ತೆಲಂಗಾಣ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮಾತನಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾವು ಬಿಪಿಎಲ್ ಕಾರ್ಡ್​ದಾರರಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಹಣವನ್ನು ಪಾವತಿಸಲು ಆರಂಭಿಸಿದೆವು ಎಂದರು.

ಜುಲೈ 1 ರಿಂದ ಗೃಹಜ್ಯೋತಿ ಯೋಜನೆಯನ್ನು ಆರಂಭಿಸಿದ್ದೆವು. ವಿರೋಧ ಪಕ್ಷಗಳು ಜನರಲ್ಲಿ ಗೊಂದಲ ಉಂಟು ಮಾಡಲು ಯತ್ನಿಸಿದ್ದವು. ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ ತಿಂಗಳಲ್ಲಿ ಜಾರಿ ಮಾಡಲಾಯಿತು. ಇಡೀ ದೇಶದಲ್ಲಿ ಕರ್ನಾಟಕ ಹೊರತುಪಡಿಸಿ ಇಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ಜಾರಿ ಮಾಡಿದ ಯಾವ ರಾಜ್ಯವೂ ಇಲ್ಲ ಎಂದರು.

2022-23 ರ ಅವಧಿಯಲ್ಲಿ ಉತ್ತೀರ್ಣರಾಗಿ ಆರು ತಿಂಗಳಿನಿಂದ ಉದ್ಯೋಗ ಇಲ್ಲದೆ ಇರುವ ಯುವಕ-ಯುವತಿಯರಿಗೆ ಯುವ ನಿಧಿ ಯೋಜನೆ ಜಾರಿಗೆ ತರಲು ಮುಂದಾಗಿದ್ದೇವೆ. ಬಹುಶಃ ಜನವರಿಯಲ್ಲಿ ಇದು ಜಾರಿಯಾಗಬಹುದು ಎಂದರು.

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದನ್ನು ನೋಡಿ ಈ ದೇಶದ ಹಣಕಾಸು ಮಂತ್ರಿಗಳೇ ಅಚ್ಚರಿಗೊಂಡಿದ್ದರು. ಅಷ್ಟೇ ಅಲ್ಲದೆ, ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ಈ ರಾಜ್ಯವನ್ನು ದಿವಾಳಿ ಮಾಡುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ, ನಾವು ರಾಜ್ಯವನ್ನು ದಿವಾಳಿಯನ್ನಾಗಿಸದೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ. ಜೊತೆಗೆ ಅಭಿವೃದ್ಧಿಯನ್ನೂ ಮಾಡುತ್ತೇವೆ ಎಂದರು.

ಗ್ಯಾರಂಟಿಗಳ ಜಾರಿ ಮಾಡಲು ಬದ್ಧತೆ, ಪ್ರಾಮಾಣಿಕತೆ ಇರಬೇಕು: ಸಿದ್ದರಾಮಯ್ಯ

ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಜನಪ್ರಿಯ ಕಾರ್ಯಕ್ರಮ ಬೇರೆ, ರಾಜಕೀಯ ಯೋಜನೆಗಳೇ ಬೇರೆ. ನಾವು ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬುವ ಯೋಜನೆ ಜಾರಿ ಮಾಡಿದ್ದೇವೆ. ಇದರಿಂದ ಆರ್ಥಿಕ ಚಟುವಟಿಕೆಗೆ ನೆರವಾಗಲಿದೆ. ಎಲ್ಲ ರಾಜ್ಯಗಳಲ್ಲೂ ಗ್ಯಾರಂಟಿ ಯೋಜನೆ ಜಾರಿ ಮಾಡಬಹುದು. ಗ್ಯಾರಂಟಿಗಳ ಜಾರಿ ಮಾಡಲು ಬದ್ಧತೆ, ಪ್ರಾಮಾಣಿಕತೆ ಇರಬೇಕು. ಇಂದು ಬೇರೆ ರಾಜ್ಯಗಳಿಗೆ ಕರ್ನಾಟಕ ಮಾದರಿಯಾಗಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲ: ಸಿದ್ದರಾಮಯ್ಯ

ರಾಜ್ಯದ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯ, ಯಾರ ಜೊತೆಯೂ ಹೊಂದಾಣಿಕೆ, ಮೈತ್ರಿ ಮಾಡಿಕೊಳ್ಳಲ್ಲ. ಬಿಜೆಪಿ, ಜೆಡಿಎಸ್​ ಪಕ್ಷಕ್ಕೆ ಅನಾಥ ಭಾವ ಕಾಡುತ್ತಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:56 am, Fri, 15 September 23