
ಬೆಂಗಳೂರು, ಅಕ್ಟೋಬರ್ 05: ಕೋಲ್ಡ್ರಿಫ್ ಔಷಧಿ (Cough Syrup) ಸೇವನೆಯಿಂದ 11 ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ಬೆನಲ್ಲೇ ದೇಶದೆಲ್ಲೆಡೆ ಕೆಮ್ಮಿನ ಸಿರಪ್ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ ಈಗಾಗಲೇ ಎಲ್ಲಾ ರಾಜ್ಯಗಳಿಗೆ ಅಡ್ವೈಸರಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲೂ ಕೋಲ್ಡ್ರಿಫ್ ಔಷಧಿ ಬ್ಯಾನ್ ಮಾಡಲಾಗಿದೆ. ಇನ್ನು ಟಿವಿ9 ನಡೆಸಿದ ರಿಯಾಲಿಟಿ ಚೆಕ್ನಲ್ಲಿ (Reality check) ಕೋಲ್ಡ್ರಿಫ್ ಕಾಫ್ ಸಿರಪ್ ಮಾರಟ ಮಾಡದಿರುವುದು ಕಂಡುಬಂದಿದೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಮಕ್ಕಳ ಸಾವು ಹಿನ್ನಲೆ ಇತ್ತ ಕರ್ನಾಟಕದಲ್ಲೂ ಕೋಲ್ಡ್ರಿಫ್ ಔಷಧಿ ಬ್ಯಾನ್ ಮಾಡಲಾಗಿದೆ. ಕರ್ನಾಟಕ ಫಾರ್ಮಾ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ ಕೋಲ್ಡ್ ಡ್ರೀಫ್ ಸಿರಫ್ ಹಾಗೂ ಡೈಎಥಿಲೀನ್ ಗ್ಲೈಕಾಲ್ ಕಂಟೇಟ್ ಕಾಫ್ ಸಿರಪ್ ಕೂಡ ನಿಯಂತ್ರಣ ಮಾಡುವಂತೆ ಸೂಚನೆ ನೀಡಿದೆ.
ರಾಜ್ಯದಲ್ಲಿಯೂ ಕೋಲ್ಡ್ರಿಫ್ ಆತಂಕ ಹೆಚ್ಚಾಗುತ್ತಿದ್ದಂತೆ ಟಿವಿ9 ಪರಶೀಲನೆಗೆ ಮುಂದಾಗಿತ್ತು. ಕೋಲ್ಡ್ರಿಫ್ ಕಾಫ್ ಸಿರಪ್ ನಮ್ಮ ರಾಜ್ಯದಲ್ಲಿ ಲಭ್ಯ ಇಲ್ಲ ಅಂತ ಆರೋಗ್ಯ ಸಚಿವರು ಹೇಳುತ್ತಿದ್ದಂತೆ ಟಿವಿ9 ರಾಜಧಾನಿಯಲ್ಲಿ ರಿಯಾಲಿಟಿ ಚೆಕ್ ಮಾಡಿದ್ದು, ಕೋಲ್ಡ್ರಿಫ್ ಕಾಫ್ ಸಿರಪ್ ಮಾರಟ ಮಾಡದೇ ಇರುವುದು ಕಂಡುಬಂತ್ತು.
ಇದನ್ನೂ ಓದಿ: Coldrif Syrup Ban: ಮಕ್ಕಳ ಸರಣಿ ಸಾವು; ಕರ್ನಾಟಕದಲ್ಲೂ ಕೋಲ್ಡ್ರಿಫ್ ಸಿರಪ್ ನಿಷೇಧ!
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಾರಕ ಔಷಧಗಳ ಮಾರಾಟದ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು, ಬಹುತೇಕ ಕಡೆ ನಿಷೇಧ ಮಾಡಿರುವ ಕೇಸನ್ಸ್ ಕಂಪನಿಯ ಔಷಧಿ ಬಳಕೆ ಇಲ್ಲ. ಆದರೆ ಇದೇ ಡ್ರಗ್ಸ್ ಕಂಟೆಂಟ್ ಇರುವ ಅನೇಕ ಕಂಪನಿಗಳ ಸಿರಪ್ ಇವೆ ಅನ್ನೋದು ಬಯಲಾಗಿದೆ.
ಇನ್ನು ಈ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ನಮ್ಮ ರಾಜ್ಯದಲ್ಲಿ ಯಾವುದೇ ರೀತಿ ಕೋಲ್ಡ್ರಿಫ್ ಕಾಫ್ ಸಿರಪ್ ಸರಬರಾಜು ಆಗಿಲ್ಲ. ತಮಿಳುನಾಡು, ಪಾಂಡಿಚೇರಿ ಸೇರಿದಂತೆ ಬೇರೆಬೇರೆ ರಾಜ್ಯಗಳಲ್ಲಿ ಸರಬರಾಜು ಆಗಿ ತೊಂದರೆಯಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ರೀತಿ ಈ ಕಂಪನಿಯ ಔಷಧಿ ಸರಬರಾಜು ಆಗಿಲ್ಲ. ಹೀಗಾಗಿ ಜನರು ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಈಗಾಗಲೇ ರಾಜ್ಯ ಡ್ರಗ್ ಕಂಟ್ರೋಲ್ ಬೋರ್ಡ್ ಹಾಗೂ ಆರೋಗ್ಯ ಇಲಾಖೆಯಿಂದ ಬೇರೆ ಕಂಪನಿಗಳ ಔಷಧಿಯನ್ನ ಪರೀಕ್ಷೆ ಮಾಡಲಾಗಿತ್ತಿದ್ದು, ಶೀಘ್ರದಲ್ಲೇ ಅದರ ವರದಿ ಬರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಕ್ಕಳಿಗೆ ಕೆಮ್ಮು ಹಾಗೂ ಶೀತದ ಔಷಧಿಗಳನ್ನ ನೀಡುವುದು ಬಹಳ ಅಪಾಯಕಾರಿಯಾಗಿದ್ದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅತಿಯಾಗಿ ಈ ಸಿರಪ್ಗಳನ್ನ ಮಕ್ಕಳಿಗೆ ನೀಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಜೊತೆಗೆ ಮಕ್ಕಳು ಕೋಮಾಗೂ ಹೋಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪೋಷಕರು ವೈದ್ಯರ ಸಲಹೆ ಇಲ್ಲದೇ ಕಾಫ್ ಸಿರಪ್ ಅನ್ನು ಮಕ್ಕಳಿಗೆ ನೀಡದಂತೆ ಕೆ ಸಿ ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಲಕ್ಷ್ಮಿಪತಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೆಮ್ಮಿನ ಸಿರಪ್ಗೆ 11 ಮಕ್ಕಳ ಬಲಿ, ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಕೇಂದ್ರ ಆದೇಶ
ಒಟ್ಟಿನಲ್ಲಿ ಹಣದ ಆಸೆಗಾಗಿಯೋ ಅಥವಾ ಇನ್ಯಾವುದೋ ಉದ್ದೇಶದಿಂದಾಗಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ 11 ಮುಗ್ದ ಜೀವಗಳು ಬಲಿಯಾಗಿದ್ದು ದುರಂತವೇ ಸರಿ. ಇನ್ನಾದರೂ ಔಷಧಿಗಳನ್ನ ವಿತರಿಸುವ ಮುನ್ನ ಸಂಬಂಧ ಪಟ್ಟ ಇಲಾಖೆಯವರು ಸೂಕ್ತ ಕ್ರಮವಹಿಸಿ ಪರಿಶೀಲಿಸಿ ವಿತರಿಸುವುದು ಅತ್ಯಗತ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:34 pm, Sun, 5 October 25