Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಕಳ್ಳಸಾಗಣೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ 58 ಲಕ್ಷ ರೂ. ಮೌಲ್ಯದ ಬಂಗಾರ ವಶ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆಯ ಮತ್ತೊಂದು ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಗುದ ದ್ವಾರದಲ್ಲಿ ಚಿನ್ನ ಸಾಗಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯ ಇನ್ನೂ ಕೆಲವು ಅಪರಾಧ ಸುದ್ದಿಗಳು ಇಲ್ಲಿವೆ.

ಚಿನ್ನ ಕಳ್ಳಸಾಗಣೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ 58 ಲಕ್ಷ ರೂ. ಮೌಲ್ಯದ ಬಂಗಾರ ವಶ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Apr 12, 2024 | 9:34 AM

ಮಂಗಳೂರು, ಏಪ್ರಿಲ್ 12: ದಮ್ಮಾಮ್‌ನಿಂದ ಆಗಮಿಸುತ್ತಿದ್ದ ಪ್ರಯಾಣಿಕರೊಬ್ಬರಿಂದ 58,78,880 ರೂಪಾಯಿ ಮೌಲ್ಯದ 812 ಗ್ರಾಂ ಚಿನ್ನವನ್ನು (Gold) ಕಸ್ಟಮ್ಸ್ ಅಧಿಕಾರಿಗಳು ಏಪ್ರಿಲ್ 11 ರ ಗುರುವಾರದಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mangalore International Airport) ವಶಪಡಿಸಿಕೊಂಡಿದ್ದಾರೆ. ಮೆಟಲ್ ಡಿಟೆಕ್ಟರ್ ಪರೀಕ್ಷೆಯ ಸಮಯದಲ್ಲಿ, ಪ್ರಯಾಣಿಕರ ಸೊಂಟದ ಬಳಿ ಬೀಪ್ ಶಬ್ದ ಹೊರಹೊಮ್ಮಿದೆ. ನಂತರ ಮತ್ತಷ್ಟು ತಪಾಸಣೆಗೆ ಒಳಪಡಿಸಲಾಯಿತು. ಈ ದೇಳೆ ಪ್ರಯಾಣಿಕನ ಗುದನಾಳದಲ್ಲಿ ಮೂರು ಸುತ್ತಿನ ಆಕಾರದ ವಸ್ತುಗಳೊಳಗೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ನಂತರ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಹೊರತೆಗೆಯಲಾಯಿತು. ಈ ವೇಳೆ, 24-ಕ್ಯಾರೆಟ್​ನ 812 ಗ್ರಾಂ ಚಿನ್ನ ಇರುವುದು ತಿಳಿದುಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೆಳ್ತಂಗಡಿಯ ಬಳಿ ಬೈಹುಲ್ಲಿನ ಲಾರಿಗೆ ಬೆಂಕಿ

ಬೆಳ್ತಂಗಡಿಯ ಕಾಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಾರ್ ಎಂಬಲ್ಲಿ ಸಕಲೇಶಪುರ ಮೂಲದ ಒಣಹುಲ್ಲಿನ ವ್ಯಾಪಾರಿಯೊಬ್ಬರು ಹೈನುಗಾರನ ಮನೆಗೆ ಮಿನಿ ಲಾರಿಯಲ್ಲಿ ಹುಲ್ಲು ಸಾಗಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿಹೊತ್ತಿಕೊಂಡ ಘಟನೆ ನಡೆದಿದೆ. ಸ್ಥಳೀಯ ರೈತ ಪುರಂದರ ನಾಯ್ಕ ಅವರ ನಿವಾಸದ ಬಳಿ ಮಿನಿ ಲಾರಿ ಚಾಲಕ ವಾಹನವನ್ನು ನಿಲ್ಲಿಸಿ ಕೊಳವೆ ಬಾವಿಯ ಪೈಪ್ ಮೂಲಕ ನೀರು ಸಿಂಪಡಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಇದೇ ವೇಳೆ ಬಟ್ಟೆಮಾರ್ ಎಸ್ಎಸ್​ಎಫ್ ಕೆಎಂಜೆಎಸ್ ವೈಎಸ್ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ಮನೆಯಿಂದ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದರು. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೂ ಈ ಪ್ರಯತ್ನಕ್ಕೆ ಕೈಜೋಡಿಸಿದರು. ಬಿಸಿಲಿನ ತಾಪಕ್ಕೆ ಬೆಂಕಿ ಹೆಚ್ಚಿದೆ. ಆದರೆ ಯುವಕರು ಅದನ್ನು ನಿರ್ಲಕ್ಷಿಸಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದರು.

ಇದನ್ನೂ ಓದಿ:  ಮಂಗಳೂರು: ಅಡ್ಯಾರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಈ ವೇಳೆ ಮಾಹಿತಿ ಪಡೆದ ಸ್ಥಳೀಯ ವಾರ್ಡ್ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ ಸ್ಥಳೀಯ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ.

ಬ್ರಹ್ಮಾವರದಲ್ಲಿ ಮಹಿಳೆ ನಾಪತ್ತೆ

ಬ್ರಹ್ಮಾವರ ತಾಲೂಕಿನ ಬಾರ್ಕೂರಿನ ನಿವಾಸಿ ಸಲ್ಮಾಭಾನು (38) ಮಾರ್ಚ್ 10ರಿಂದ ನಾಪತ್ತೆಯಾಗಿದ್ದಾರೆ. ಮಧ್ಯಮ ಮೈಕಟ್ಟು ಹೊಂದಿರುವ ಆಕೆ 122 ಸೆಂ.ಮೀ ಎತ್ತರವಿದ್ದಾರೆ. ಅವರು ಕನ್ನಡ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಈಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಕೋರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ