ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್​ಗೆ ಐಸೀಸ್​ ನಂಟಿನ ಶಂಕೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಪಾಕಿಸ್ತಾನದ ಐಎಸ್ಐ ಲಿಂಕ್ ಇರುವ ಶಂಕೆ ಇದೀಗ ವ್ಯಕ್ತವಾಗಿದೆ. ಒಡಿಸ್ಸಾದ ಸ್ಟೆಷಲ್ ಟಾಸ್ಕ್ ಫೋರ್ಸ್​​ನಿಂದ ಪ್ರೀತಂಕಾರ್ ಬಂಧನದ ಬೆನ್ನಲ್ಲೇ ಸತ್ಯ ಬಯಲಾಗಿದೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್​ಗೆ ಐಸೀಸ್​ ನಂಟಿನ ಶಂಕೆ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್​ಗೆ ಐಸೀಸ್​ ನಂಟಿನ ಶಂಕೆ
Rakesh Nayak Manchi

Updated on: Jun 13, 2023 | 10:27 PM

ಮಂಗಳೂರು: ದಕ್ಷೀಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ (Mangaluru cooker bomb blast) ಪ್ರಕರಣದ ಹಿಂದೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಒಡಿಸ್ಸಾದ ಸ್ಟೆಷಲ್ ಟಾಸ್ಕ್ ಫೋರ್ಸ್​ನಿಂದ ಪ್ರೀತಂಕಾರ್ ಬಂಧನದ ಬೆನ್ನಲ್ಲೇ ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಶಾರೀರ್​ಗೆ ಐಸೀಸ್​ (ISIS) ಏಜೆಂಟ್​​ಗಳ ಜೊತೆ ನಂಟು ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಉಗ್ರ ಶಾರೀಕ್ ಬಳಿಯಿದ್ದ ಸಿಮ್ ಕಾರ್ಡ್​​ಗೆ ಒಡಿಸ್ಸಾ ನಂಟು ಬೆಸೆದಿತ್ತು. ಒಡಿಸ್ಸಾ ಮೂಲದ ಪ್ರೀತಂಕಾರ್ (31) ಎಂಬಾತನೇ ಶಾರೀಕ್​ಗೆ ಸಿಮ್ ಪೂರೈಕೆ ಮಾಡಿದ್ದ. ಮಾಹಿತಿ ತಿಳಿದ ಒಡಿಸ್ಸಾದ ಸ್ಟೆಷಲ್ ಟಾಸ್ಕ್ ಫೋರ್ಸ್, ಪ್ರೀತಂಕಾರ್​ನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದರು. ಈ ವೇಳೆ, ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಪ್ರೀತಂಕಾರ್ ಸಿಮ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪೂರೈಸಿದ್ದ. ನಂತರ ಆ ಸಿಮ್ ಕಾರ್ಡ್ ಅನ್ನು ಐಎಸ್ಐ ಏಜೆಂಟ್ ಉಗ್ರ ಶಾರೀಕ್​ಗೆ ನೀಡಿದ ವಿಚಾರ ತಿಳಿದುಬಂದಿದೆ.

ಈ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಒಡಿಸ್ಸಾ ಎಸ್​ಟಿಎಫ್ ತಂಡ ಮಾಹಿತಿ ನೀಡಿದೆ. ಪ್ರೀತಂಕಾರ್ ದೇಶವಿರೋಧಿ ಕೃತ್ಯ, ಸೈಬರ್ ವಂಚನೆಗಳಿಗೆ ಒಟಿಪಿ ಮಾರಾಟ ಮಾಡುತ್ತಿದ್ದ. ಬ್ಯಾಂಕ್ ಅಕೌಂಟ್ ಹ್ಯಾಕ್, ನಕಲಿ ಸಿಮ್ ಕಾರ್ಡ್ ಮಾರಾಟ ಕೃತ್ಯದಲ್ಲಿ ತೊಡಗಿಕೊಂಡಿರುವ ಆರೋಪಿ ಪ್ರೀತಂಕಾರ್​ನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಡಿಬಿಒ ಕಂಪನಿಗೆ ಬಾಂಬ್ ಬೆದರಿಕೆ: ಸ್ಥಳಕ್ಕೆ ಶ್ವಾನ, ಬಾಂಬ್​ ನಿಷ್ಕ್ರಿಯ ದಳ ದೌಡು

ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್​ಐಎಸ್ ಉಗ್ರ ಸಂಘಟನೆ ಕೊನೆಗೂ ಸ್ಫೋಟದ ಹೊಣೆ ಹೊತ್ತಿತ್ತು. ಐಸಿಸ್​ ಸಂಘಟನೆಯ ವಕ್ತಾರ ಐಎಸ್​​ಕೆಪಿ (ಇಸ್ಲಾಮಿಕ್ ಸ್ಟೇಟ್ಸ್ ಕೊರಸನ್ ಪ್ರಾವಿನ್ಸ್​​) ನಡೆಸುವ ವಾಯ್ಸ್ ಆಫ್ ಕೂರಸ ನಿಯತಕಾಲಿಕೆಯಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಪೋಟದ ಹೊಣೆ ಹೊತ್ತಿರುವ ಕುರಿತಾಗಿ ಪ್ರಕಟಿಸಲಾಗಿತ್ತು.

ತ್ತೀಚೆಗೆ ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil-IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ಣುತಪ್ಪಿಸಿ ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು ಎಂದು ಉಗ್ರರು ಎಚ್ಚರಿಕೆ ನೀಡಿದ್ದರು.

ವಿವಾದಕ್ಕೆ ಕಾರಣವಾಗಿದ್ದ ಡಿಕೆ ಶಿವಕುಮಾರ್ ಹೇಳಿಕೆ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆಗಿನ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು, ಇದು ಭಯೋತ್ಪಾದಕ ಕೃತ್ಯ ಅಂತ ಹೇಳಿದ್ದರು. ಆದರೆ ಇದನ್ನು ಪ್ರಶ್ನಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಲ್ಲಿಂದ ಭಯೋತ್ಪಾದಕರು ಬಂದು ಬ್ಲಾಸ್ಟ್ ಮಾಡಿದರು? ಡಿಜಿ ಆತುರದಲ್ಲಿ ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ. ಕೇವಲ ವಿಚಾರ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಅಂತ ಹೇಳಿ ವಿವಾದದ ಸುಳಿಯಲ್ಲಿ ಸಿಲುಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us