ಹಮಾಸ್​ಗೆ ಬೆಂಬಲ ಆರೋಪ: ಆರೋಪಿ ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ ಮಂಗಳೂರು ಪೊಲೀಸ್​

Israel-Hamas conflict: ಇಸ್ರೇಲ್​ನಲ್ಲಿ‌ ನರಮೇಧ ನಡೆಸಿದ ಹಮಾಸ್ ಉಗ್ರರಿಗೆ ಬೆಂಬಲ ನೀಡಿದ ಆರೋಪಿ ಜಾಕೀರ್ ವಿರುದ್ಧ ಮಂಗಳೂರು ಉತ್ತರ ಪೊಲೀಸರು ಸ್ವಯಂ ದೂರು ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಹಮಾಸ್​ಗೆ ಬೆಂಬಲ ಆರೋಪ: ಆರೋಪಿ ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ ಮಂಗಳೂರು ಪೊಲೀಸ್​
ಜಾಕೀರ್ ಬಂಧಿತ ವ್ಯಕ್ತಿ
Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2023 | 6:24 PM

ಮಂಗಳೂರು, ಅಕ್ಟೋಬರ್​​​​ 14: ಇಸ್ರೇಲ್​ನಲ್ಲಿ‌ (isrel) ನರಮೇಧ ನಡೆಸಿದ ಹಮಾಸ್ ಉಗ್ರರಿಗೆ ಬೆಂಬಲ ನೀಡಿದ ಆರೋಪಿ ಜಾಕೀರ್ ವಿರುದ್ಧ ಮಂಗಳೂರು ಉತ್ತರ ಪೊಲೀಸರು ಸ್ವಯಂ ದೂರು ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಮಾಹಿತಿ ನೀಡಿದ್ದಾರೆ.

ಆರೋಪಿ ವಿರುದ್ಧ ಈ ಹಿಂದೆಯೇ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಏಳು ಪ್ರಕರಣ ದಾಖಲಾಗಿವೆ. ಮಂಗಳೂರಿನ ಬಂದರಿನ ಜಿ.ಎಂ ರಸ್ತೆಯ ನಿವಾಸಿಯಾಗಿರುವ ಜಾಕೀರ್​​, ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ. ಹಮಾಸ್ ಉಗ್ರರರನ್ನು ದೇಶ ಪ್ರೇಮಿಗಳೆಂದು ಕರೆದಿದ್ದ. ಪ್ಯಾಲೆಸ್ತೀನ್, ಗಾಜಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರ ವಿಜಯಕ್ಕೆ ಪ್ರಾರ್ಥನೆ ಸಲ್ಲಿಸುವಂತೆ ಕರೆ‌ ನೀಡಿದ್ದ.

ಇದನ್ನೂ ಓದಿ: ವಿಜಯನಗರ: ಪ್ಯಾಲೆಸ್ಟೀನ್​ ಬೆಂಬಲಿಸಿ ಸ್ಟೇಟಸ್​ ಹಾಕಿದ್ದ ಯುವಕನನ್ನು ವಶಕ್ಕೆ ಪಡೆದ ಪೊಲೀಸ್​​

ಹಮಾಸ್ ಉಗ್ರರನ್ನು ದೇಶ ಪ್ರೇಮಿ ಯೋಧರೆಂದು ಬಣ್ಣಿಸಿದ್ದ. ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ‌ ಸಲ್ಲಿಸುವಂತೆ ಕರೆ ನೀಡಿದ್ದ. ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬಾನ್ ಎಂಬ ಹೆಸರಿನಲ್ಲಿ  ಜಾಕಿರ್ ಗುರುತಿಸಿಕೊಂಡಿದ್ದ. ​​​ಜಾಕೀರ್ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಿಂದೂ‌ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್​ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು

ಪ್ಯಾಲೆಸ್ತೀನ್​ ಬೆಂಬಲಿಸಿ ವಿಡಿಯೋ ಹಂಚಿಕೊಂಡಿದ್ದ ಮುಸ್ಲಿಂ ಯುವಕನ ವಿರುದ್ಧ ನಿನ್ನೆ ಸುಮುಟೋ ಪ್ರಕರಣ ದಾಖಲು ಮಾಡಲಾಗಿತ್ತು. ಆಲಂ ಬಾಷಾ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದ ಯುವಕ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ PSI ಮುನಿರತ್ನ ನೀಡಿದ ದೂರಿನ ಆಧಾರದ ಮೇಲೆ CRPC 108-151 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಯುವಕನನ್ಮು ಪೊಲೀಸರು ವಶಕ್ಕೆ ಪಡೆದಿದ್ದರು.

ಆಲಂ ಬಾಷಾ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಯ ನಿವಾಸಿ ಆಗಿದ್ದು, ಅಲ್ಪಸಂಖ್ಯಾತ ಇಲಾಖೆ ಕಚೇರಿಯಲ್ಲಿ ಅಟೆಂಡರ್​ ಕೆಲಸ ಮಾಡುತ್ತಿದ್ದ. ವಾಟ್ಸಾಪ್​​​ ಸ್ಟೇಟಸ್​ನಲ್ಲಿ ಯುದ್ಧ ಪೀಡಿತ ಪ್ಯಾಲೆಸ್ತೀನ್ ಭಾವಚಿತ್ರ ಹಾಕಿ ವಿಡಿಯೋ ಹಂಚಿಕೊಂಡಿದ್ದು, ನಾವು ಪ್ಯಾಲೆಸ್ತೀನ್ ಪರವಾಗಿದ್ದೇವೆ. ಪ್ಯಾಲೆಸ್ತೀನ್ ಜಿಂದಾಬಾದ್ ಅಂತ ಬರೆಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.