AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಗಣ್ಣು ಕಾಯಿಲೆಗೆ ಹೈರಾಣಾದ ಕಡಲನಗರಿ ಮಂಗಳೂರು: ಕಣ್ಣಿನ ಆಸ್ಪತ್ತೆಯಲ್ಲಿ ಹೆಚ್ಚಾಗುತ್ತಿದೆ ರೋಗಿಗಳ ಸಂಖ್ಯೆ

ಕಡಲನಗರಿ ಮಂಗಳೂರಿನಲ್ಲಿ ಕೆಂಗಣ್ಣು ಕಾಯಿಲೆಯ ಹಾವಳಿಯು ಜಾಸ್ತಿಯಾಗಿದೆ. ಒಬ್ಬರಿಂದ ಒಬ್ಬರಿಗೆ ಬಹಳ ವೇಗವಾಗಿ ಹರಡುವ ಈ ರೋಗದಿಂದ ಜನ ಗಾಬರಿಯಾಗಿದ್ದಾರೆ.

ಕೆಂಗಣ್ಣು ಕಾಯಿಲೆಗೆ ಹೈರಾಣಾದ ಕಡಲನಗರಿ ಮಂಗಳೂರು: ಕಣ್ಣಿನ ಆಸ್ಪತ್ತೆಯಲ್ಲಿ ಹೆಚ್ಚಾಗುತ್ತಿದೆ ರೋಗಿಗಳ ಸಂಖ್ಯೆ
ಕೆಂಗಣ್ಣು ಕಾಯಿಲೆ
TV9 Web
| Edited By: |

Updated on: Nov 15, 2022 | 3:27 PM

Share

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಂಗಣ್ಣು ಕಾಯಿಲೆ ಸಮಸ್ಯೆ ಜನರನ್ನು ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಮಂಗಳೂರು ನಗರ ಹೊರವಲಯದ ಬಜಪೆ, ಎಕ್ಕಾರು ಮತ್ತು ಬಂಟ್ವಾಳ, ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಜನ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇಡೀ ಊರಿನಲ್ಲಿ ಕಪ್ಪು ಕನ್ನಡಕ ಧರಿಸಿ ಓಡಾಡುತ್ತಿರುವವರ ಸಂಖ್ಯೆ ಏರುತ್ತಿದೆ. ಇನ್ನು ಈ ರೋಗಿಗಳಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳು ಹೆಚ್ಚಾಗಿದ್ದಾರೆ. ಇವರ ಮೂಲಕ ಈ ವೈರಸ್ ಇತರರಿಗೆ ವೇಗವಾಗಿ ಹರಡುತ್ತಿದೆ. ಹೀಗಾಗಿ ಒಂದು ದಿನದಲ್ಲಿ 100ಕ್ಕಿಂತ ಹೆಚ್ಚು ಜನ ಈ ಕೆಂಗಣ್ಣು ಕಾಯಿಲಿಗೆ ತುತ್ತಾಗಿದ್ದಾರೆ.

ಕಾಯಿಲೆ ಕುರಿತು ವಿವರಿಸಿದ ಜಿಲ್ಲಾ ಆರೋಗ್ಯಧಿಕಾರಿ ಡಾ.ಕಿಶೋರ್ ಕುಮಾರ್, ಇದನ್ನು ಮದ್ರಾಸ್ ಐ ಎಂದು ಕರೆಯುತ್ತೇವೆ. ಈ ರೋಗವು ವೈರಾಣು ಅಥವಾ ಬ್ಯಾಕ್ಟೀರಿಯಾಗಳಿಂದ ಬರುವಂತದ್ದು, ಇದು ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕು ರೋಗವಾಗಿದೆ. ಇದು ಬಂದು ಒಂದು ವಾರದೊಳಗೆ ತನ್ನಷ್ಟಕ್ಕೆ ತಾನೆ ಗುಣಮುಖವಾಗುತ್ತದೆ. ಕೆಲವೊಂದು ಬಾರಿ ಕಣ್ಣಿನ ಕಪ್ಪು ಗುಡ್ಡೆ ಪ್ರದೇಶಕ್ಕೆ ಹರಡುವ ಸಾಧ್ಯತೆ ಇದ್ದು, ಹೀಗಾಗಿ ಕೆಂಗಣ್ಣು ರೋಗ ಬಂದಾಗ ಕಣ್ಣನ್ನು ಮುಟ್ಟಿಕೊಳ್ಳಬಾರದು, ಆಗಾಗ ಕೈ ಸ್ವಚ್ಚಗೊಳಿಸುತ್ತಿರುವುದು, ವೈರಸ್‌ಗೆ ತುತ್ತಾದವರಿಂದ ದೂರವಿರುವುದರಿಂದ ರೋಗ ಹರಡದಂತೆ ತಡೆಯಬಹುದು ಎಂದು ಹೇಳಿದರು.

ರೋಗ ಭಾದೆಯಿಂದಾಗಿ ಈಗಾಗಲೇ ಬೆಳ್ತಂಗಡಿಯ ಖಾಸಗಿ ಶಾಲೆಯೊಂದಕ್ಕೆ ರಜೆ ನೀಡಲಾಗಿದೆ. ರೋಗಭಾದೆಗೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಕೆಂಗಣ್ಣು ಕಾಯಿಲೆಯಿಂದ ಯಾವುದೇ ದೃಷ್ಟಿ ದೋಷ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ವರದಿ: ಅಶೋಕ್ ಟಿ.ವಿ 9 ಮಂಗಳೂರು

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ