Modi in Mangaluru: ನರೇಂದ್ರ ಮೋದಿಗೆ ಮಡಿಕೇರಿ ಪೇಟ, ಮಂಗಳೂರು ಮಲ್ಲಿಗೆ, ಪರಶುರಾಮ ಪ್ರತಿಮೆಯ ಸ್ವಾಗತ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರಾವಳಿಯ ಪ್ರಸಿದ್ಧ ಮಲ್ಲಿಗೆ ಹಾರ ಹಾಕಿ ಮೋದಿ ಅವರನ್ನು ಅಭಿನಂದಿಸಿದರು.

Modi in Mangaluru: ನರೇಂದ್ರ ಮೋದಿಗೆ ಮಡಿಕೇರಿ ಪೇಟ, ಮಂಗಳೂರು ಮಲ್ಲಿಗೆ, ಪರಶುರಾಮ ಪ್ರತಿಮೆಯ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಶುರಾಮನ ವಿಗ್ರಹ ನೀಡಿ ಗೌರವಿಸಲಾಯಿತು.
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 02, 2022 | 3:09 PM

ಮಂಗಳೂರು: ನಗರದಲ್ಲಿ ಶುಕ್ರವಾರ ಎಲ್ಲೆಲ್ಲೂ ಸಡಗರ ಸಂಭ್ರಮ ಮನೆ ಮಾಡಿದೆ. ಬಂಗ್ರಕೂಳೂರಿನಲ್ಲಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ನವ ಮಂಗಳೂರು ಬಂದರು ಪ್ರಾಧಿಕಾರ, ಪೆಟ್ರೋ ಕೆಮಿಕಲ್ಸ್​ ಲಿಮಿಟೆಡ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಯೋಜನೆಗಳ ಒಟ್ಟು ಮೊತ್ತ ಸುಮಾರು ₹ 4,000 ಕೋಟಿಗಳಷ್ಟಾಗುತ್ತವೆ.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ ಅವರು ಮಡಿಕೇರಿ ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕುವ ಮೂಲಕ ಸ್ವಾಗತಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರಾವಳಿಯ ಪ್ರಸಿದ್ಧ ಮಲ್ಲಿಗೆ ಹಾರ ಹಾಕಿ ಮೋದಿ ಅವರನ್ನು ಅಭಿನಂದಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪರಶುರಾಮನ ವಿಗ್ರಹ ನೀಡಿ ಸ್ವಾಗತಿಸಿದರು. ಈ ವೇಳೆ ನೆರೆದಿದ್ದ ಕಾರ್ಯಕರ್ತರು ಮೋದಿ ಮೋದಿ ಎಂದು ಹರ್ಷೋದ್ಗಾರದಿಂದ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ ಸೋನಾವಲ್, ‘ಮಂಗಳೂರು ಬಂದರು ಇಂದು ಸಂಪೂರ್ಣವಾಗಿ ಸೌರಶಕ್ತಿಯಿಂದ ನಡೆಯುತ್ತಿದೆ. ಸೌರ ವಿದ್ಯುತ್ ಮತ್ತು ಮಳೆ ನೀರು ಸಂಗ್ರಹ, ಉಪಯೋಗಕ್ಕಾಗಿ ಮಂಗಳೂರು ಬಂದರಿಗೆ ಹಲವು ಪುರಸ್ಕಾರಗಳು ಸಂದಿವೆ’ ಎಂದು ಹೇಳಿದರು.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವು ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿವೆ’ ಎಂದು ಹೇಳಿದರು.