Alok Kumar: ಶಾರೀಕ್ ಕೃತ್ಯ ಸಮರ್ಥಿಸಿಕೊಂಡ ಐಆರ್​ಸಿ ಹೇಳಿಕೆ ಬಗ್ಗೆ ಪ್ರತ್ಯೇಕ ತನಿಖೆ; ಅಲೋಕ್ ಕುಮಾರ್

’ಈ ರೀತಿಯ ಹೇಳಿಕೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯತೆ ಎಷ್ಟಿದೆಯೋ ಗೊತ್ತಿಲ್ಲ’ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

Alok Kumar: ಶಾರೀಕ್ ಕೃತ್ಯ ಸಮರ್ಥಿಸಿಕೊಂಡ ಐಆರ್​ಸಿ ಹೇಳಿಕೆ ಬಗ್ಗೆ ಪ್ರತ್ಯೇಕ ತನಿಖೆ; ಅಲೋಕ್ ಕುಮಾರ್
ಅಲೋಕ್ ಕುಮಾರ್, ಎಡಿಜಿಪಿ
Edited By:

Updated on: Nov 24, 2022 | 1:34 PM

ಮಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್’ (IRC) ಮಾಧ್ಯಮ ಹೇಳಿಕೆ ಕುರಿತು ಪ್ರತ್ಯೇಕ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಕೃತ್ಯದ ಹೊಣೆ ಹೊತ್ತು ಸಂಘಟನೆಯೊಂದು ಹೇಳಿಕೆ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ‘ಈ ರೀತಿಯ ಹೇಳಿಕೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯತೆ ಎಷ್ಟಿದೆಯೋ ಗೊತ್ತಿಲ್ಲ’ ಎಂದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿ ಸಾಗಿದೆ. ಇಂಥ ಸಂದರ್ಭದಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಇಂಥ ಹೇಳಿಕೆ ಬಿಡುಗಡೆ ಮಾಡಿರಬಹುದು. ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತ್ತೊಂದು ತನಿಖೆ ನಡೆಸುತ್ತೇವೆ. ಈ ಪೋಸ್ಟ್ ಎಲ್ಲಿಂದ ಪ್ರಸಾರವಾಯಿತು. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆಯೂ ತನಿಖೆ ಮಾಡುತ್ತೇವೆ’ ಎಂದು ಅವರು ತಿಳಿಸಿದರು. ಐಆರ್​ಸಿ ಹೇಳಿಕೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೆಸರು ಸಹ ಉಲ್ಲೇಖವಾಗಿತ್ತು. ‘ಅಲೋಕ್ ಕುಮಾರ್ ನಿಮ್ಮ ಸಂತೋಷ ಅಲ್ಪಕಾಲಿಕವಾಗಿರುತ್ತದೆ. ನಿಮ್ಮ ದಬ್ಬಾಳಿಕೆಯನ್ನು ಫಲವನ್ನು ನೀವು ಶೀಘ್ರದಲ್ಲಿ ಅನುಭವಿಸುತ್ತೀರಿ’ ಎಂದು ಎಚ್ಚರಿಸಲಾಗಿತ್ತು.

ಕೇಂದ್ರ ಸಂಸ್ಥೆಗಳಿಂದ ತನಿಖೆ

ಸ್ಫೋಟದ ಹೊಣೆ ಹೊತ್ತುಕೊಂಡ ಇಸ್ಲಾಮಿಕ್​ ರೆಸಿಸ್ಟೆನ್ಸ್ ​ಕೌನ್ಸಿಲ್ ಡಾರ್ಕ್​​ವೆಬ್​​ನಲ್ಲಿ ಸ್ಫೋಟದ ರೂವಾರಿ ನಾವೇ ಎಂದು ಹೇಳಿಕೊಂಡಿವೆ. ಪೋಸ್ಟ್​ಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯಿಂದ ಕರ್ನಾಟಕ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆ ಆರಂಭಿಸಿವೆ ಎಂದು ಪೊಲೀಸರು ತಿಳಿಸಿವೆ.

3 ಪ್ರಸಿದ್ಧ ದೇವಾಲಯಗಳು ಟಾರ್ಗೆಟ್ ಮಾಡಿದ್ದ ಶಂಕೆ

ಶಂಕಿತ ಉಗ್ರ ಶಾರಿಕ್​, ಕರಾವಳಿ ಭಾಗದ 3 ದೇಗುಲಗಳನ್ನು ಟಾರ್ಗೆಟ್​ ಮಾಡಿದ್ದ ಎಂದು ಟಿವಿ9ಗೆ ಪೊಲೀಸ್​ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಮಂಗಳೂರಿನ ಕದ್ರಿಯ ಮಂಜುನಾಥಸ್ವಾಮಿ ದೇವಸ್ಥಾನದ ಲಕ್ಷ ದೀಪೋತ್ಸವದಲ್ಲಿ ಬಾಂಬ್ ಸ್ಫೋಟಿಸಲು ಶಾರಿಕ್ ಪ್ಲ್ಯಾನ್ ಮಾಡಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಕುದ್ರೋಳಿಯಲ್ಲಿರುವ ಗೋಕರ್ಣನಾಥೇಶ್ವರ ದೇಗುಲ ಹಾಗೂ ಮಂಗಳಾದೇವಿ ದೇವಾಲಯಕ್ಕೂ ಸ್ಕೆಚ್ ಹಾಕಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಶಿವನ ಡಿಪಿ ಬೆನ್ನತ್ತಿದಾಗ ಶಂಕಿತ ಉಗ್ರ ಶಾರಿಕ್ ಸಂಚು ಬಯಲಾಗಿದ್ದು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Published On - 1:32 pm, Thu, 24 November 22

Follow Us