ದಾವಣಗೆರೆ: ಪಾಳುಕೊಂಪೆಯಂತಾದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಓದಿದ ಶಾಲೆ

ನಗರದ ಕೆ.ಆರ್.ಮಾರ್ಕೆಟ್​ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆ ಇದೀಗ ಪಾಳುಕೊಂಪೆಯ ರೀತಿಯಾಗಿದೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಓದಿದ ಸರ್ಕಾರಿ ಶಾಲೆ ಇಂದು ಪಾಳುಬಿದ್ದಿದ್ದು, ಸೂಕ್ತ ವ್ಯವಸ್ಥೆ ಇಲ್ಲದೆ ಮಕ್ಕಳು ಶಾಲೆಗೆ ಬರಲು ಹಿಂದೇಟು‌ ಹಾಕುತ್ತಿದ್ದಾರೆ.

ದಾವಣಗೆರೆ: ಪಾಳುಕೊಂಪೆಯಂತಾದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಓದಿದ ಶಾಲೆ
ಪಾಳುಕೊಂಪೆಯಂತಾದ ಸರ್ಕಾರಿ ಮಾಧ್ಯಮಿಕ ಶಾಲೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Jan 30, 2023 | 6:45 PM

ದಾವಣಗೆರೆ: ನಗರದ ಕೆ.ಆರ್.ಮಾರ್ಕೆಟ್​ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆ ಇದೀಗ  ಪಾಳುಕೊಂಪೆಯಾಗಿದೆ. 1902 ರಲ್ಲಿ ಆರಂಭವಾಗಿದ್ದ ಅತ್ಯಂತ ಹಳೆಯ ಶಾಲೆಗೆ ಕಾಯಕಲ್ಪ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮಾಜಿ ಸಿಎಂ ದಿವಂಗತ ಎಸ್.ನಿಜಲಿಂಗಪ್ಪ ಕೂಡ ಇದೇ ಶಾಲೆಯಲ್ಲಿ ಓದಿದ್ದರು. ಅಲ್ಲದೇ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಹೊರ ರಾಜ್ಯ, ಹೊರ ದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. 2006-07 ರ ಸಾಲಿನಲ್ಲಿ 94 ಮಕ್ಕಳಿದ್ದ ಶಾಲೆಯಲ್ಲಿ ಪ್ರಸಕ್ತ ವರ್ಷ ಕೇವಲ 50 ಮಕ್ಕಳಿದ್ದಾರೆ. ಶಾಲೆಯ ದುಸ್ಥಿತಿ ನೋಡಿ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಶಾಲೆಯನ್ನ ಖಾಯಂ ಆಗಿ ಬಾಗಿಲು ಹಾಕಬೇಕಾಗುತ್ತದೆ. ನಾವು ಓದುವಾಗ ಅರಮನೆ ರೀತಿ ಇದ್ದ ಶಾಲೆ, ಈಗ ನೋಡಿದರೆ ಸಂಕಟವಾಗುತ್ತದೆ ಎನ್ನುತ್ತಾರೆ ಹಳೇ ವಿದ್ಯಾರ್ಥಿಗಳು.

ಈ ಶಾಲೆಗೆ ಸೇರಿದ ಜಾಗದಲ್ಲೇ 250 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ನಿರ್ಮಿಸಿ ಬಾಡಿಗೆಗೆ ಕೊಟ್ಟಿದ್ದು, ಕೋಟ್ಯಾಂತರ ರೂಪಾಯಿ ಬಾಡಿಗೆ ಸಂಗ್ರಹ ಆಗಿದೆ. ಆದರೆ ಅದರಲ್ಲಿ ನಯಾಪೈಸೆ ಶಾಲೆಗೆ ನೀಡುತ್ತಿಲ್ಲ. ಆಜಾದ್ ‌ನಗರ, ಬಾಷಾ ನಗರ, ಬಸವರಾಜ್ ಪೇಟೆ, ಗಾಂಧಿನಗರ, ವಡ್ಡರಕೇರಿ ಹೀಗೆ ವಿವಿಧ ಬಡಾವಣೆಗಳ ಬಡ ಕೂಲಿ ಕಾರ್ಮಿಕರ ಮಕ್ಕಳು ಈ ಶಾಲೆಗೆ ಬರ್ತಾರೆ. ಇಂತಹ ಶಾಲೆ ಮುಚ್ಚಿದರೆ ಬಡ ಕೂಲಿ ಕಾರ್ಮಿಕರ ಮಕ್ಕಳು ಎಲ್ಲಿಗೆ ಹೋಗಬೇಕು. ಇದರ ಜೊತೆಗ ಮಾಜಿ ಸಿಎಂ ಆಗಿದ್ದ ಎಸ್.ನಿಜಲಿಂಗಪ್ಪ ಓದಿದ ಶಾಲೆ ಇದಾಗಿದ್ದು, ಕೊಡಲೇ ದುರಸ್ತಿ ಮಾಡಿಸಬೇಕು, ಮತ್ತೆ ಹಳೇ ವೈಭವ ಮರುಕಳಿಸಬೇಕು. ಹೀಗಾಗಿ ಶಾಲೆ ಅಭಿವೃದ್ಧಿ ಪಡಿಸಲು ಸಿಎಂಗೆ ಮನವಿ ಮಾಡುತ್ತೆವೆ ಎನ್ನುತ್ತಾರೆ ಹಳೇ ವಿದ್ಯಾರ್ಥಿಗಳು.

ಇದನ್ನೂ ಓದಿ:ಉಡುಪಿ: ಬುದ್ದಿವಂತರ ಜಿಲ್ಲೆಯಲ್ಲಿಯೇ ಶಿಕ್ಷಕರ ಕೊರತೆ; ಬಾಗಿಲು ಮುಚ್ಚಿವೆ ಅನೇಕ ಶಾಲೆಗಳು

ಈಗಾಗಲೇ ಅನೇಕ ಸರಕಾರಿ ಶಾಲೆಗಳು ಮುಚ್ಚಲಾಗುತ್ತಿದೆ. ಹೀಗಾಗಿ ಈ ಶಾಲೆಯಲ್ಲಿ‌ ಓದಿದ ಹಿರಿಯ ವಿದ್ಯಾರ್ಥಿಗಳು ಒಂದಾಗಿ ಶಾಲೆ ಅಭಿವೃದ್ಧಿಗೆ ಪಣತೊಡಬೇಕಿದೆ. ಅಲ್ಲದೆ ಸರ್ಕಾರವು ಕೂಡ ಸರ್ಕಾರಿ ಶಾಲೆಗಳ ಬಗ್ಗೆ ಗಮನ ಹರಿಸಬೇಕು ಎನ್ನುವುದು ನಮ್ಮ ಕಳಕಳಿಯಾಗಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us