ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ ಸಾವು ಸಂಭವಿಸಿ ತಿಂಗಳಾದರೂ ಬಂದಿಲ್ಲ ಶವ ಪರೀಕ್ಷೆ ವರದಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 07, 2022 | 9:45 AM

ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ ಸಾವನ್ನಪ್ಪಿದ್ದು, ಒಂದು ತಿಂಗಳಾದರು ಸಾವಿನ ಸತ್ಯ ಗೊತ್ತಾಗುತ್ತಿಲ್ಲ. ಇದರ ಹಿಂದೆ ಜಾಣ ಕಿವುಡತನ ಅಡಗಿದ ಸಂಶಯ ಇದೀಗ ಶುರುವಾಗಿದೆ.

ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ ಸಾವು ಸಂಭವಿಸಿ ತಿಂಗಳಾದರೂ ಬಂದಿಲ್ಲ ಶವ ಪರೀಕ್ಷೆ ವರದಿ
ದಾವಣಗೆರೆ
Follow us on

ದಾವಣಗೆರೆ: ಅಕ್ಟೋಬರ್ 30 ರಂದು ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ ಕಾಣೆಯಾಗಿದ್ದು, ನವೆಂಬರ್ 3 ರ ಸಂಜೆ ರೆಣುಕಾಚಾರ್ಯ ಮನೆಯಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರದ ಕಡದಕಟ್ಟಿ ಬಳಿಯ ತುಂಗಾ ನಾಲೆಯಲ್ಲಿ ಚಂದ್ರಶೇಖರ್​ ಶವ ಸಿಕ್ಕಿತ್ತು. ಈಗಾಗಲೇ ಈ ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳು ಮುಕ್ತಾಯವಾಗಿದೆ. ಇದಾದ ಮೇಲೆ ರೇಣುಕಾಚಾರ್ಯ ಅದು ರಸ್ತೆ ದುರಂತವಲ್ಲ. ನನ್ನ ಮಗನ ಕೊಲೆಯಾಗಿದೆ. ನಾನು ಹಿಜಾಬ್, ಹಲಾಲ್​ ಬಗ್ಗೆ ಮಾತನಾಡುತ್ತಿದ್ದೆ. ನನಗೆ, ಮಗನಿಗೆ ಬೇದರಿಕೆ ಕರೆಗಳು ಬಂದಿದ್ದವು. ಇದೊಂದು ವ್ಯವಸ್ಥಿತ ಕಿಡ್ನಾಪ್ ಹಾಗೂ ಕೊಲೆ ಎಂದು ರೇಣುಕಾಚಾರ್ಯ ಹೇಳಿದ್ದರು.

ಇದಾದ ಬಳಿಕ ಖುದ್ದು ಸಿಎಂ ಅವರೇ ಮನೆಗೆ ಬಂದು ರೇಣುಕಾಚಾರ್ಯ ಅವರಿಗೆ ಸಮಾಧಾನ ಮಾಡಿದ್ದರು. ಇದು ಕೊಲೆಯೋ ಅಥವಾ ಅಪಘಾತವೋ ಶವ ಪರೀಕ್ಷೆ ವರದಿ ಹಾಗೂ ಎಫ್.ಎಸ್.ಎಲ್ ವರದಿ ಬರಲಿ ಎಂದು ಹೇಳಿ ಸಿಎಂ ಅವರು ಹೋದರು. ಪೊಲೀಸರು ಹೇಳುವ ಪ್ರಕಾರ ಶವ ಐದು ದಿನ ನೀರಿನಲ್ಲಿ ಇತ್ತು. ಹೀಗಾಗಿ ವೈದ್ಯಕೀಯ ವರದಿ ನೀಡುವುದು ಕಷ್ಟವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದು ಉದ್ದೇಶಪೂರ್ವಕ ವಿಳಂಭವೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗ ಸ್ಥಳೀಯ ಪೊಲೀಸರ ವಿರುದ್ಧ ವಾಗ್ದಾಳಿ ಎದ್ದಿದ್ದು. ಸಿಐಡಿ, ಸಿಓಡಿ ತನಿಖೆಗೆ ಆಗ್ರಹಗಳು ಕೇಳು ಬರುತ್ತಿವೆ.

ಇನ್ನು ಚಂದ್ರಶೇಖರ್​ ಸಾವು ಅನೇಕ ಅನುಮಾನಗಳಿಂದ ಕೂಡಿದೆ. ಕಾರ್ ಹಿಂದಿನ ಸೀಟ್​ನಲ್ಲಿ ಶವ ಇತ್ತು. ಚಂದ್ರಶೇಖರ ಶವ ಪರೀಕ್ಷೆ ವೇಳೆ ಒಳ ಉಡುಪು ಇರಲಿಲ್ಲ. ಮರ್ಮಾಂಗಗಳು ಬಾತುಕೊಂಡಿದ್ದವು. ಸೀಟ್ ಬೆಲ್ಟ್ ಹಾಕದೇ ಎರ್ ಬ್ಯಾಗ್ ಹೇಗೆ ಓಪನ್ ಆಯಿತು. ಕಾರ್ ಹೇಗೆ ಬಿತ್ತು. ಮೇಲಾಗಿ ಈ ಕಾರ್ ಇಲ್ಲಿ ಬಿದ್ದಿದ್ದು ಪೊಲೀಸರಿಗೆ ಕೊನೆಗೂ ಗೊತ್ತಾಗಲೇ ಇಲ್ಲ. ರೇಣುಕಾಚಾರ್ಯ ಅವರ ಕಾರ್ಯಕರ್ತರೇ ಈ ಕಾರ್ ಹುಡುಕಿದ್ದರು. ಪೊಲೀಸರಿಗಿಂತ ಮೊದಲು ಸ್ಥಳಕ್ಕೆ ಹೋಗಿದ್ದು ರೇಣುಕಾಚಾರ್ಯ. ಹೀಗೆ ಹತ್ತಾರು ಸಂಶಯಗಳು ರೇಣುಕಾಚಾರ್ಯ ಅವರನ್ನು ಕಾಡುತ್ತಿದೆ.

ಇದನ್ನೂ ಓದಿ:ರೇಣುಕಾಚಾರ್ಯ ಹಠಾತ್ ಮೌನಕ್ಕೆ ಹತ್ತಾರು ಅರ್ಥ: ಬಗೆ ಹರಿಯುತ್ತಿಲ್ಲ ಚಂದ್ರಶೇಖರ್ ಸಾವಿನ ಅನುಮಾನ

ಘಟನೆ ನಡೆದು ತಿಂಗಳಾದರೂ ಇನ್ನು ಶವ ಪರೀಕ್ಷೆಯ ವರದಿಯೇ ಬಂದಿಲ್ಲವಂತೆ. ಬಹುತೇಕರು ಇದೊಂದು ರಸ್ತೆ ದುರಂತ. 100 ಕಿಲೋ ಮೀಟರ್ ಸ್ಪೀಡ್​ನಲ್ಲಿ ಬಂದು ತುಂಗಾ ಚಾನಲ್ ಸೇತುವೆಗೆ ಹೊಡೆದು ನೀರಿನಲ್ಲಿ ಚಂದ್ರಶೇಖರ ಬಿದ್ದಿದ್ದಾನೆ ಎನ್ನುತ್ತಾರೆ. ಆದರೆ ಆತ ಗೌರಿಗದ್ದೆಗೆ ಹೋಗಿದ್ದು, ವಿನಯಗುರೂಜಿ ಅವರನ್ನು ಭೇಟಿ ಮಾಡಿದ್ದು, ಶಿವಮೊಗ್ಗದ್ದ ಸ್ನೇಹಿತ ಕಿರಣ್​ನನ್ನ ಭೇಟಿ ಮಾಡಿದ್ದು ಹೀಗೆ ಹತ್ತಾರು ಸಂಶಯಗಳು ಕೇಳಿ ಬರುತ್ತಿವೆ. ಇನ್ನಷ್ಟು ದಿನ ಚಂದ್ರು ಪ್ರಕರಣ ಉತ್ತರವಿಲ್ಲದೇ ಸುತ್ತಾಡುವುದು ಖಚಿತವಾಗಿದೆ. ಇದು ರಸ್ತೆ ದುರಂತ ಅಲ್ಲವೇ ಅಲ್ಲ. ಇದೊಂದು ಕೊಲೆ ಎಂಬ ಖಚಿತ ನಿರ್ಧಾರದಿಂದ ರೇಣುಕಾಚಾರ್ಯ ಹೊರ ಬರುತ್ತಲೇ ಇಲ್ಲ ಎಂಬುದೇ ವಿಶೇಷ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:43 am, Wed, 7 December 22