ಕುಖ್ಯಾತ ಬ್ಯಾಂಡ್ ಬಜಾ ಗ್ಯಾಂಗ್ ಬಂಧನಕ್ಕೆ ಖಾಕಿ ಸರ್ಕಸ್: ಅರ್ಧ ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ
ಮದುವೆ ಸಮಾರಂಭಗಳನ್ನೇ ಟಾರ್ಗೆಟ್ ಮಾಡಿ ಕೈಚಳಕ ತೋರುತ್ತಿದ್ದ ಮಧ್ಯಪ್ರದೇಶದ ಕುಖ್ಯಾತ 'ಬ್ಯಾಂಡ್ ಬಜಾ ಗ್ಯಾಂಗ್'ನ ರಾಬರಿ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಕಳ್ಳತನ ನಡೆಸಿರೋದು ಕಡಿಯಾಸಾಂಸಿ ಮತ್ತು ಗುಲ್ಖೇಡಾ ಗ್ರಾಮದ ಗ್ಯಾಂಗ್ ಎಂಬುದು ಗೊತ್ತಾಗಿದ್ದು, ತಲತಲಾಂತರದಿಂದ ಕಳ್ಳತನವನ್ನೇ ಇಲ್ಲಿನ ಕೆಲವು ಜನರು ವೃತ್ತಿ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ದಾವಣಗೆರೆ, ಡಿಸೆಂಬರ್ 10: ಪ್ರತಿಷ್ಠಿತ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ಜನರ ಗಮನ ಬೇರೆಡೆ ಸೆಳೆದು ಕೈಚಳಕ ತೋರುತ್ತಿದ್ದ ಮಧ್ಯಪ್ರದೇಶದ ಕುಖ್ಯಾತ ಬ್ಯಾಂಡ್ ಬಜಾ ಗ್ಯಾಂಗ್ನ ರಾಬರಿ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಆರೋಪಿಗಳಿಂದ 51.49 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದಾವಣಗೆರೆ ಗ್ರಾಮಾಂತರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದು, ದಾಳಿ ವೇಳೆ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಪ್ರತಿಷ್ಠಿತರ ಮದುವೆ ಸಮಾರಂಭಗಳಲ್ಲಿ ನೆರೆದಿದ್ದವರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡೋದು ಈ ಗ್ಯಾಂಗ್ನ ಕಾಯಕವಾಗಿತ್ತು. ನ.14ರಂದು ಅಪೂರ್ವ ರೆಸಾರ್ಟ್ನಲ್ಲಿಯೂ ಆರೋಪಿಗಳು ಕೈಚಳಕ ತೋರಿದ್ದರು. ಮದುವೆ ಸಮಾರಂಭದಲ್ಲಿ ಬಾಲಕಿ ನೃತ್ಯ ಮಾಡುತ್ತಿದ್ದ ವೇಳೆ ಚಿನ್ನಾಭರಣವಿದ್ದ ಬ್ಯಾಗ್ ಕೆಳಗಿಟ್ಟು ಚಪ್ಪಾಳೆ ತಟ್ಟುವಷ್ಟರಲ್ಲಿ ಅದನ್ನು ಗ್ಯಾಂಗ್ ಎಸ್ಕೇಪ್ ಮಾಡಿತ್ತು. 535 ಗ್ರಾಂ ಆಭರಣವಿದ್ದ ಬ್ಯಾಗ್ನ ಬ್ಯಾಂಡ್ ಬಜಾ ಗ್ಯಾಂಗ್ ಸದಸ್ಯರಾದ ಕರಣ್ ವರ್ಮಾ, ವಿನಿತ್ ಸಿಸೋಡಿಯಾ ಕದ್ದು ಪರಾರಿಯಾಗಿದ್ದರು.
ಇದನ್ನೂ ಓದಿ: ಅತ್ಯಾಚಾರ ಯತ್ನ ವಿಫಲ, ಕೋಪದಲ್ಲಿ ಬಾಲಕಿಯ ಖಾಸಗಿ ಭಾಗಕ್ಕೆ ರಾಡ್ ಹಾಕಿದ ವ್ಯಕ್ತಿ
ಖಚಿತ ಮಾಹಿತಿ ಆಧರಿಸಿ ದಾಳಿ
ಪ್ರಕರಣ ಸಂಬಂಧ ಮಧ್ಯಪ್ರದೇಶದ ಪರೋರಿನಗರಕ್ಕೆ ತೆರಳಿದ್ದ ದಾವಣಗೆರೆ ಪೊಲೀಸರು ವೇಷ ಬದಲಿಸಿ ಕಳ್ಳರಿಗಾಗಿ ಶೋಧ ನಡೆಸಿದ್ದಾರೆ. ಆರೋಪಿಗಳು ಮಧ್ಯವರ್ತಿಗೆ ಚಿನ್ನಾಭರಣವಿದ್ದ ಬ್ಯಾಗ್ ಬಗ್ಗೆ ಮಾಹಿತಿ ನೀಡಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದ್ದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ನರಸಿಂಗ್ ತಾಲೂಕಿನ ಕಡಿಯಾಸಾಂಸಿ, ಗುಲ್ಖೇಡಾ ಗ್ರಾಮದ ಗ್ಯಾಂಗ್ ಕಳ್ಳತನ ನಡೆಸಿದ್ದು ಈ ವೇಳೆ ಗೊತ್ತಾಗಿದ್ದು, ತಲತಲಾಂತರದಿಂದ ಕಳ್ಳತನವನ್ನೇ ಇಲ್ಲಿನ ಕೆಲವು ಜನರು ವೃತ್ತಿ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ಆರೋಪಿಗಳಿಗಾಗಿ ಮುಂದುವರಿದ ಶೋಧ
ನ.14ರಂದು 200 ಗ್ರಾಂ ಚಿನ್ನದ ಡಾಬು, 50 ಗ್ರಾಂ ಅವಲಕ್ಕಿ ಸರ, 60 ಗ್ರಾಂ ಲಾಂಗ್ ಚೈನ್, ತಲಾ 20 ಗ್ರಾಂ ತೂಕದ 4 ನೆಕ್ಲೆಸ್, 30 ಗ್ರಾಂ ತೂಕದ 2 ಸರ ಸೇರಿ 16 ಆಭರಣವಿದ್ದ ಬ್ಯಾಗ್ನ ಗ್ಯಾಂಗ್ ಎಗರಿಸಿತ್ತು. ಕಳುವಾಗಿದ್ದ ಬ್ಯಾಗ್ನಲ್ಲಿದ್ದಚಿನ್ನಾಭರಣಗಳ ಪೈಕಿ ಬಹುತೇಕ ಆಭರಣಗಣ್ನು ಈಗ ಜಪ್ತಿ ಮಾಡಲಾಗಿದೆ. ಆರೋಪಿಗಳಾದ ಕರಣ್ ವರ್ಮಾ, ವಿನಿತ್ ಸಿಸೋಡಿಯಾಗಾಗಿ ಶೋಧ ಮುಂದುವರಿದಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



