ಡೆಡ್ಲಿ ರೋಡ್ರೇಜ್, ಕಾರು ಬಾನೆಟ್ನಲ್ಲಿ ನೇತಾಡಿದ ಪೊಲೀಸ್! ಭಯಾನಕ ವಿಡಿಯೋ ವೈರಲ್
ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಭಯಾನಕ ರೋಡ್ರೇಜ್ ಘಟನೆ ವರದಿಯಾಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಹೊಸೂರು, ಆನೇಕಲ್ ಮತ್ತು ಕರ್ನಾಟಕ-ತಮಿಳುನಾಡು ಗಡಿಯ ಸಮೀಪದಲ್ಲಿ ಸಂಭವಿಸಿದ ಈ ಭೀಕರ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹೊಸೂರು ಪೊಲೀಸರು ಈ ಸಂಬಂಧ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಆನೇಕಲ್, ಮಾರ್ಚ್ 16: ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ರೋಡ್ ರೇಜ್ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ತಮಿಳುನಾಡು ಗಡಿಯ ಸಮೀಪದ ಜೂಜುವಾಡಿ ಚೆಕ್ಪೋಸ್ಟ್ ಬಳಿ ಪೊಲೀಸರು ತಡೆದಾಗ ಕಾರು ನಿಲ್ಲಿಸದ ಚಾಲಕ ಎದುರಿದ್ದ ಪೊಲೀಸ್ ಸಿಬ್ಬಂದಿಯನ್ನೇ ಬಾನೆಟ್ ಮೇಲೆ ಹಾರಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ತಮಿಳುನಾಡಿನಲ್ಲಿ ಗುಟ್ಕಾ ನಿಷೇಧ ಇರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಅಕ್ರಮವಾಗಿ ಗುಟ್ಕಾ ಮತ್ತು ಮದ್ಯವನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನಕ್ಕೆ ಪೊಲೀಸರು ಕಾರನ್ನು ತಡೆದು ಪರಿಶೀಲಿಸಲು ಮುಂದಾದರು. ಈ ವೇಳೆ ಕಾರು ಚಾಲಕ ಯಾರಬ್ ಪಾಷ (34) ಎಂಬಾತ ವಾಹನವನ್ನು ನಿಲ್ಲಿಸದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಹೆಡ್ ಕಾನ್ಸ್ಟೇಬಲ್ ರಾಜೀವ್ ಗಾಂಧಿ ಕಾರಿನ ಮುಂದೆ ಅಡ್ಡವಾಗಿ ನಿಂತಾಗ, ಲೆಕ್ಕಿಸದೇ ಚಾಲಕ ಕಾರನ್ನು ಮುನ್ನಡೆಸಿದ್ದಾನೆ. ಪರಿಣಾಮವಾಗಿ ಪೊಲೀಸ್ ಸಿಬ್ಬಂದಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಬಾನೆಟ್ ಮೇಲೆ ನೇತಾಡುತ್ತಿದ್ದಾಗಲೇ ಕೆಲದೂರ ಕಾರು ಚಲಾಯಿಸಿದ್ದಾನೆ. ಅದೃಷ್ಟವಶಾತ್ ಹೆಡ್ ಕಾನ್ಸ್ಟೇಬಲ್ ರಾಜೀವ್ ಗಾಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ನಂತರ ಹೊಸೂರು ಸಿಪ್ಕಾಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 390 ಕೆಜಿ ಗುಟ್ಕಾ ಹಾಗೂ ಮದ್ಯವನ್ನು ವಶಕ್ಕೆ ಪಡೆದಿದ್ದು, ಇದರ ಅಂದಾಜು ಮೌಲ್ಯ ಸುಮಾರು 2.20 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಪ್ರಸ್ತುತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೌದೆ ಒಲೆ ಬಳಸುವ ಮುನ್ನ ಹುಷಾರ್: ಕ್ಯಾನ್ಸರ್ ಬರಬಹುದು ಎಂದ ಡಾಕ್ಟರ್ಸ್
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್ಗಾಗಿ ಹೈಕಮಾಂಡ್ ಮಟ್ಟದಲ್ಲಿ ಲಾಭಿ
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
