ನಕಲಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ; ಎಂ‌.ಪಿ‌.ರೇಣುಕಾಚಾರ್ಯ ಕುಟುಂಬಕ್ಕೆ ಸಂಕಷ್ಟ

ಬೇಡ ಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನ ತಕ್ಷಣಕ್ಕೆ ಸೇವೆಯಿಂದ ಅಮಾನತು ಅಥವಾ ವಾರ್ಷಿಕ ವೇತನ ಕಡಿತಗೊಳಿಸಿ ಸೇವಾ ಪುಸ್ತಕದಲ್ಲಿ ದಾಖಲು ಮಾಡಲು ನಿರ್ಧಾರ ಮಾಡಿದೆ. ಪ್ರಾದೇಶಿಕ ಆಯುಕ್ತರ ಮೂಲಕ ಆಯಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಕ್ಕೆ ಕಂದಾಯ ಇಲಾಖೆ ನಿರ್ಧಾರ ಮಾಡಿದೆ.

ನಕಲಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ; ಎಂ‌.ಪಿ‌.ರೇಣುಕಾಚಾರ್ಯ ಕುಟುಂಬಕ್ಕೆ ಸಂಕಷ್ಟ
ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ
Edited By:

Updated on: Apr 24, 2022 | 9:49 AM

ದಾವಣಗೆರೆ: ಬೇಡ ಜಂಗಮ ಜಾತಿ ಹೆಸರಿನಲ್ಲಿ ಎಸ್ಸಿ ಜಾತಿ‌ ಪ್ರಮಾಣ ಪತ್ರ ಪಡೆದವರಿಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ಎಂ‌.ಪಿ‌.ರೇಣುಕಾಚಾರ್ಯ ಕುಟುಂಬ ಸಂಕಷ್ಟದಲ್ಲಿದೆ. ರಾಜ್ಯದಲ್ಲಿ 2010ರಿಂದ ಬೇಡ ಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದವರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಯಿಂದ ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನಿಸಲಾಗಿದೆ.

ಸುಳ್ಳು ಬೇಡ ಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನ ತಕ್ಷಣಕ್ಕೆ ಸೇವೆಯಿಂದ ಅಮಾನತು ಅಥವಾ ವಾರ್ಷಿಕ ವೇತನ ಕಡಿತಗೊಳಿಸಿ ಸೇವಾ ಪುಸ್ತಕದಲ್ಲಿ ದಾಖಲು ಮಾಡಲು ನಿರ್ಧಾರ ಮಾಡಿದೆ. ಪ್ರಾದೇಶಿಕ ಆಯುಕ್ತರ ಮೂಲಕ ಆಯಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಕ್ಕೆ ಕಂದಾಯ ಇಲಾಖೆ ನಿರ್ಧಾರ ಮಾಡಿದೆ. ರಾಜ್ಯದಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದವರು ಹಾಗೂ ಅವರ ಮೂಲ ಶಾಲಾ ದಾಖಲಾತಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳಿಂದ ಪ್ರಾದೇಶಿಕ ಅಸಯುಕ್ತರಿಗೆ ಪತ್ರ ಬರೆಯಲಾಗಿದೆ. ಹೀಗಾಗಿ ಸರ್ಕಾರದ ನಿರ್ಧಾರದಿಂದಾಗಿ ರೇಣುಕಾಚಾರ್ಯ ಕುಟುಂಬಕ್ಕೆ ಸಂಕಷ್ಟಕ್ಕೆ ಸಿಲುಕಿದೆ.

ರೇಣುಕಾಚಾರ್ಯ ಸಹೋದರ ಎಂ.ಪಿ‌.ದ್ವಾರಕೇಶ್ವರಯ್ಯ, ರೇಣುಕಾಚಾರ್ಯ ಪುತ್ರಿ ಚೇತನಾ ಬೇಡ ಜಂಗಮ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆ. ಮೂಲ ಶಾಲಾ ದಾಖಲಾತಿಗಳಲ್ಲಿ ಹಿಂದು ಲಿಂಗಾಯತ ಜಾತಿ. ರಾಜ್ಯದ ಬಹುತೇಕ ಕಡೆ ದಲಿತ ಸಂಘಟನೆಗಳ ಹೋರಾಟದ ಹಿನ್ನೆಲೆ ಕಂದಾಯ ಇಲಾಖೆ ದಿಟ್ಟ ನಿರ್ಧಾರಕ್ಕೆ ಮುಂದಾಗಿದೆ.

ಶಾಸಕ ರೇಣುಕಾಚಾರ್ಯ ಪುತ್ರಿ ಚೇತನಾ ವಿರುದ್ಧ ದೂರು ದಾಖಲು
ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪದಲ್ಲಿ ಶಾಸಕ ರೇಣುಕಾಚಾರ್ಯ ಪುತ್ರಿ ಚೇತನಾ ವಿರುದ್ಧ ದೂರು ದಾಖಲಾಗಿದೆ. ವಕೀಲರಾದ ಎ.ಹರಿರಾಂ, ಜಗನ್ನಾಥ್‌ರಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಚೇತನಾ ವಿರುದ್ಧ ದೂರು ಸಲ್ಲಿಸಲಾಗಿದೆ.

ನಕಲಿ ಜಾತಿ ಪ್ರಮಾಣ ಪತ್ರ ಆರೋಪ ಹಿನ್ನಲೆಯಲ್ಲಿ ಶಾಸಕ‌ ಎಂಪಿ ರೇಣುಕಾಚಾರ್ಯ ಪುತ್ರಿ ಚೇತನಾ ವಿರುದ್ದ ದೂರು ದಾಖಲಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಕಾಲಂ 4 ಎಸ್ಸಿ ಎಸ್ಟಿ ಒಬಿಸಿ ಕಾಯ್ದೆ 1990 ಅಡಿ ದೂರು ನೀಡಲಾಗಿದೆ. ವಕೀಲ ಎ ಹರಿರಾಂ ಅರ್ಜಿದಾರರಾಗಿದ್ದು, ವಕೀಲರಾದ ಜಗನ್ನಾಥ್, ದಾವಣಗೆರೆಯ ಅನೀಸ್ ಪಾಷ ರಿವಿಜನ್ ಅರ್ಜಿ ಸಲ್ಲಿಸಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ರೇಣುಕಾಚಾರ್ಯ ರಾಜಕೀಯ ಪ್ರಭಾವ ಬಳಸಿ ಎಸ್ಸಿ ಸರ್ಟಿಫಿಕೇಟ್ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಯಲ್ಲಿ ವಾಸವಿದ್ದರೂ ಬೆಂಗಳೂರಿನಲ್ಲಿ ನಕಲಿ ಪ್ರಮಾಣ ಪತ್ರ ಪಡೆದಿದ್ದಾರೆ. ಹೀಗಾಗಿ ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ಪುತ್ರಿ ಎಂಆರ್ ಚೇತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿ ದೂರು ದಾಖಲಿಸಲಾಗಿದೆ.

ಇನ್ನು ಮತ್ತೊಂದೆಡೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ 40 ಶಾಲಾ ಮಕ್ಕಳ‌ ದಾಖಲಾತಿಯಲ್ಲಿ ಬೇಡ ಜಂಗಮ ಜಾತಿ ಪತ್ತೆಯಾಗಿದೆ. 2015 ರಿಂದ ಈವರೆಗೆ ಹೊನ್ನಾಳಿ ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ ಬೇಡ ಜಂಗಮ ಜಾತಿ ಹೆಸರಿನಲ್ಲಿ ಶಾಲಾ ದಾಖಲಾತಿ ಲಭ್ಯವಾಗಿದೆ. ಪೋಷಕರ ಜಾತಿ ಹಿಂದೂ ಲಿಂಗಾಯತ, ಹಿಂದೂ ವೀರಶೈವ ಲಿಂಗಾಯತ ಇದ್ದರೂ ಮಕ್ಕಳ ಜಾತಿ ಕಾಲಂ ನಲ್ಲಿ ಬೇಡ ಜಂಗಮ‌ ಪರಿಶಿಷ್ಟ ಜಾತಿ ಎಂದು ಸೇರ್ಪಡೆ ಮಾಡಲಾಗಿದೆ. ರೈತ ಮುಖಂಡ ಶೇಖರ ನಾಯ್ಕ ಮಾಹಿತಿ ಹಕ್ಕಿನಡಿ ಡಿಡಿಪಿಐ ಕಚೇರಿಯಿಂದ ಪಡೆದ ದಾಖಲಾತಿಯಿಂದ ಪತ್ತೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಪ್ರಕರಣ ದಿಢೀರ್ ಹೆಚ್ಚಳ; ನಿನ್ನೆ ಒಂದೇ ದಿನ 132 ಜನರಿಗೆ ಸೋಂಕು

ನವ ದಂಪತಿಗೆ ಧಾರೆ ಎರೆದು, ಅಕ್ಷತೆ ಹಾಕಿದ ಸಾಕು ನಾಯಿ; ವೈರಲ್ ವಿಡಿಯೋ ಇಲ್ಲಿದೆ

Published On - 9:47 am, Sun, 24 April 22

Web contact

TV9 Kannada

Read More
Follow Us