ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್‌ಗೆ ಧಾರವಾಡ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ

ಖರೀದಿಸಿದ ಪ್ಲಾಟ್ ಅಭಿವೃದ್ಧಿ ಹಾಗೂ ನೋಂದಣಿ ಮಾಡಿಸಿಕೊಡದೇ ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್‌ಗೆ ಧಾರವಾಡ ಜಿಲ್ಲಾ ಗ್ರಾಹಕರ ನ್ಯಾಯಾಲಯ ದಂಡ ಹಾಗೂ ಪರಿಹಾರ ನೀಡಲು ಆದೇಶಿಸಿದೆ.

ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್‌ಗೆ ಧಾರವಾಡ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ
ಪ್ರಾತಿನಿಧಿಕ ಚಿತ್ರ
Edited By:

Updated on: Jul 17, 2023 | 7:08 PM

ಧಾರವಾಡ, ಜುಲೈ 17: ಖರೀದಿಸಿದ ಪ್ಲಾಟ್ ಅಭಿವೃದ್ಧಿ ಹಾಗೂ ನೋಂದಣಿ ಮಾಡಿಸಿಕೊಡದೇ ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್‌ಗೆ (builder) ಇಲ್ಲಿಯ ಜಿಲ್ಲಾ ಗ್ರಾಹಕರ ನ್ಯಾಯಾಲಯ ದಂಡ ಹಾಗೂ ಪರಿಹಾರ ನೀಡಲು ಆದೇಶಿಸಿದೆ. ಮ್ಯಾಕ್ಸ್‌ವರ್ತ್ ರಿಯಾಲಿಟಿ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೇಶವ ಕೆ. ಎಂಬುವರು ಬೆಂಗಳೂರಿನಲ್ಲಿ ಅಭಿವೃದ್ಧಿಗೊಳಿಸುತ್ತಿರುವ ಬಡಾವಣೆಯಲ್ಲಿ ಧಾರವಾಡ ನಗರದ ಮಹಿಷಿ ಪ್ಲಾಟ ನಿವಾಸಿ ರಘುನಾಥ ಜೋಶಿ ಅವರು ನಿವೃತ್ತಿ ಹೊಂದಿದ ನಂತರ ಪ್ಲಾಟ್ ನಂ. 11 ನ್ನು 2011 ರಂದು ರೂ. 6.67 ಲಕ್ಷಕ್ಕೆ ಖರೀದಿಸಿದ್ದರು.

ಆ ಪೈಕಿ ರೂ. 2 ಲಕ್ಷಗಳನ್ನು ಚೆಕ್ ಮೂಲಕ ಮುಂಗಡವಾಗಿ ನೀಡಿ, ಖರೀದಿ ಕರಾರು ಪತ್ರ ಮಾಡಿಸಿಕೊಂಡಿದ್ದರು. ಬಾಕಿ ಮೊತ್ತವನ್ನು ನೋಂದಣಿ ಕಾಲಕ್ಕೆ ಕೊಡುವ ಕರಾರು ಮಾಡಿಕೊಳ್ಳಲಾಗಿತ್ತು. ನಂತರ ಆರು ತಿಂಗಳಾದರೂ ಬಿಲ್ಡರ್ ಕೇಶವ ಅವರು ಪ್ಲಾಟ್ ಅಭಿವೃದ್ಧಿ ಮಾಡಲಿಲ್ಲ. ಸಾಕಷ್ಟು ಕಾಲಾವಕಾಶ ಕಳೆದರೂ ಪ್ಲಾಟ್ ನೋಂದಣಿ ಸಹ ಮಾಡಿಕೊಡಲಿಲ್ಲ. ಮುಂಗಡ ಹಣವನ್ನು ವಾಪಸ್ಸು ಕೊಡಲಿಲ್ಲ. ಸೇವೆಯಿಂದ ನಿವೃತ್ತಿ ಹೊಂದಿ ಆರ್ಥಿಕ ತೊಂದರೆ ಅನುಭವಿಸಿದ ರಘುನಾಥ ಅವರು ಬಿಲ್ಡರ್ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ತಡವಾಗಿ ಕ್ಲೇಮ್ ಎಂದು ಅಪಘಾತ ವಿಮೆ ತಿರಸ್ಕಾರ: ಪರಿಹಾರ ಕೊಡಲು ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಆದೇಶ

ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಪ್ಲಾಟ್ ನಿರ್ಮಾಣ ಮಾಡದೇ ಪಡೆದುಕೊಂಡ ಮುಂಗಡ ಹಣವನ್ನು ಬಳಸಿಕೊಂಡು ಬಿಲ್ಡರ್ ಮೋಸ ಮಾಡಿದ್ದಾರೆ.

ಇದನ್ನೂ ಓದಿ: ಅಂತರಾಷ್ಟ್ರೀಯ ಐರನ್ ಮ್ಯಾನ್​ ಇವರೇ ನೋಡಿ: ಈ ಸಾಧನೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರದ ಮೊದಲ ಅಧಿಕಾರಿ

ರಘುನಾಥ ಅವರು ಸಂದಾಯ ಮಾಡಿದ ರೂ. 2 ಲಕ್ಷ ಮತ್ತು ಅದರ ಮೇಲೆ 2011 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಣ ವಾಪಸ್ಸು ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ಇದರೊಂದಿಗೆ ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 50,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚವೆಂದು ರೂ. 10 ಸಾವಿರ ನೀಡುವಂತೆ ಮ್ಯಾಕ್ಸ್‌ವರ್ತ್ ರಿಯಾಲಿಟಿ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೇಶವ ಕೆ. ಅವರಿಗೆ ಆಯೋಗ ತನ್ನತೀರ್ಪಿನಲ್ಲಿ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us