Dharawad News: ಪಿಎಂಎಸ್ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾಕ್ಕೆ 60 ಸಾವಿರ ದಂಡ; ವಿಮೆ ಹಣ 2 ಲಕ್ಷ ಪಾವತಿಗೆ ಆದೇಶ

ಯಲ್ಲವ್ವ ನೀರಿನಲ್ಲಿ ಮುಳುಗಿ ಆಕಸ್ಮಿಕವಾಗಿ ಆಗಿ ಸತ್ತಿಲ್ಲ ಎಂದು ವಿಮಾ ಕಂಪನಿಯವರು ಮಹಾಂತೇಶ ಅವರ ಅರ್ಜಿಯನ್ನು ತಿರಸ್ಕರಿಸಿದ್ದರು. ಇದರ ವಿರುದ್ಧ ಮಹಾಂತೇಶ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

Dharawad News: ಪಿಎಂಎಸ್ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾಕ್ಕೆ 60 ಸಾವಿರ ದಂಡ; ವಿಮೆ ಹಣ 2 ಲಕ್ಷ ಪಾವತಿಗೆ ಆದೇಶ
ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ (ಸಂಗ್ರಹ ಚಿತ್ರ)
Follow us
| Updated By: ಗಣಪತಿ ಶರ್ಮ

Updated on: Jul 12, 2023 | 6:12 PM

ಧಾರವಾಡ: ಅರ್ಹ ವ್ಯಕ್ತಿಗೆ ಪ್ರಧಾನ ಮಂತ್ರಿ ಸುರಕ್ಷಾ ವಿಮೆ ನೀಡದೆ ಸತಾಯಿಸಿದ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ (United India Insurance) ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು (Dharawad Consumer Disputes Redressal Commission) 60,000 ರೂ. ದಂಡ ಹಾಗೂ ವಿಮೆಯ ಮೊತ್ತ 2 ಲಕ್ಷ ರೂ. ನೀಡುವಂತೆ ಆದೇಶಿಸಿದೆ. ಧಾರವಾಡ‌ ನಗರದ ಶೀಲವಂತರ ಓಣಿ ನಿವಾಸಿ ಮಹಾಂತೇಶ ತುರಮರಿ ಅವರ ತಾಯಿ ಯಲ್ಲವ್ವ ಜಯನಗರದ ಕೆವಿಜಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಕೆವಿಜಿ ಬ್ಯಾಂಕ್ ಮತ್ತು ಯುನೈಟೆಡ್ ಇನ್ಶುರೆನ್ಸ್ ಕಂಪನಿಯ ಒಡಂಬಡಿಕೆಯಂತೆ ಖಾತೆದಾರರನ್ನು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ 2 ಲಕ್ಷ ರೂಪಾಯಿಗೆ ವಿಮೆ ಮಾಡಿಸಿದ್ದರು. ಖಾತೆದಾರರ ಉಳಿತಾಯ ಖಾತೆಯಿಂದ ಪ್ರತಿ ವರ್ಷ 12 ರೂ. ಪ್ರಿಮಿಯಮ್ ಹಣ ವಿಮಾ ಕಂಪನಿಗೆ ವರ್ಗಾವಣೆಯಾಗುತ್ತಿತ್ತು.

2021 ರ ಏಪ್ರಿಲ್ 27 ರಂದು ಯಲ್ಲವ್ವ, ನಗರದ ಕೆಲಗೇರಿಯ ಕೆರೆಗೆ ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಸಾವು ವಿಮಾ ಪಾಲಿಸಿ ನಿಯಮಕ್ಕೆ ಒಳಪಟ್ಟಿದ್ದರಿಂದ ರೂ. 2 ಲಕ್ಷ ಪರಿಹಾರ ಕೊಡುವಂತೆ ಮೃತರ ಮಗ ಮಹಾಂತೇಶ ವಿಮಾ ಕಂಪನಿಗೆ ಮತ್ತು ಕೆವಿಜಿ ಬ್ಯಾಂಕಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.

ಯಲ್ಲವ್ವ ನೀರಿನಲ್ಲಿ ಮುಳುಗಿ ಆಕಸ್ಮಿಕವಾಗಿ ಆಗಿ ಸತ್ತಿಲ್ಲ ಎಂದು ವಿಮಾ ಕಂಪನಿಯವರು ಮಹಾಂತೇಶ ಅವರ ಅರ್ಜಿಯನ್ನು ತಿರಸ್ಕರಿಸಿದ್ದರು. ಇದರ ವಿರುದ್ಧ ಮಹಾಂತೇಶ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಗೆ ನಾನೇ ಡಾನ್ ಎಂದು ರೀಲ್ಸ್ ಮಾಡುತ್ತಿದ್ದ ಯುವಕನ ಅಪಹರಣ, ಬೆತ್ತಲೆ ಮಾಡಿ ಹಲ್ಲೆ

ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಮೃತ ಯಲ್ಲವ್ವ ಹೆಸರಿನಲ್ಲಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯ ವಿಮಾ ಪಾಲಿಸಿ ಆಕೆ ಮೃತಳಾಗುವ ಕಾಲಕ್ಕೆ ಚಾಲ್ತಿಯಲ್ಲಿತ್ತು. ಯಲ್ಲವ್ವ ಬಟ್ಟೆ ತೊಳೆಯುವಾಗ ಕೆಲಗೇರಿಯ ಕೆರೆ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದರಿಂದ ಆಕೆಯ ಸಾವು ಆಕಸ್ಮಿಕವಾಗಿದೆ. ಅದು ಆತ್ಮಹತ್ಯೆ ಅನ್ನುವ ವಿಮಾ ಕಂಪನಿಯ ಆಕ್ಷೇಪಣೆಯನ್ನು ಒಪ್ಪಲಾಗದು. ಹೀಗಾಗಿ ವಿಮೆ ತಿರಸ್ಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ. ಹೀಗಾಗಿ ಮೃತಳ ವಾರಸುದಾರನಾದ ಅವರ ಮಗನಿಗೆ 2 ಲಕ್ಷ ರೂಪಾಯಿ ವಿಮಾ ಹಣ ಹಾಗೂ ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆಗೆ 50 ಸಾವಿರ ರೂ. ಪರಿಹಾರ ಮತ್ತು ಪ್ರಕರಣದ ಖರ್ಚು 10 ಸಾವಿರ ರೂಪಾಯಿಯನ್ನು ತೀರ್ಪು ನೀಡಿದ ಒಂದು ತಿಂಗಳೊಗಾಗಿ ಕೊಡುವಂತೆ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ