ಧಾರವಾಡ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೊಬೈಲ್ ಟವರ್ ಏರಿದ ನೌಕರ; ಮುಂದೇನಾಯ್ತು ನೋಡಿ
ಧಾರವಾಡದಲ್ಲಿ ನಡೆಯುತ್ತಿರುವ ನೀರು ಸರಬರಾಜು ನೌಕರರ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಈ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರನೊಬ್ಬ ಭಿತ್ತಿ ಪತ್ರದೊಂದಿಗೆ ಟವರ್ ಏರಿ ಹೈಡ್ರಾಮ ನಡೆಸಿದ್ದಾನೆ.

ಧಾರವಾಡ: ನೀರು ಸರಬರಾಜು ನೌಕರರ ಮುಷ್ಕರ (Water supply workers strike) 13ನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾಲಿಕೆ ಕಚೇರಿ ಮುಂದೆ ನಡೆಸುತ್ತಿರುವ ಈ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರನೊಬ್ಬ ಭಿತ್ತಿ ಪತ್ರದೊಂದಿಗೆ ಟವರ್ ಏರಿ (Man climbs mobile tower) ಹೈಡ್ರಾಮ ನಡೆಸಿದ್ದಾನೆ. ನಗರದ ಆಲೂರು ವೆಂಕಟರಾವ್ ವೃತ್ತದ ಬಳಿ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ನೌಕರನಾಗಿರುವ ಮಲ್ಲಿಕಾರ್ಜುನ ಗುಮ್ಮಗೋಳ ಎಂಬಾತ ಟವರ್ ಏರಿ ಕುಳಿತಿದ್ದಾನೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತು. ಕೈಯಲ್ಲಿ ಬೇಡಿಕೆ ಫಲಕ ಸಹಿತ ಟವರ್ ಏರಿದ ಮಲ್ಲಿಕಾರ್ಜುನ ಗುಮ್ಮಗೋಳ, ತುತ್ತ ತುದಿಯಲ್ಲಿ ಕುಳಿತು ಪ್ರದರ್ಶನ ಮಾಡಿದ್ದಾನೆ. ಅಲ್ಲದೆ, ಕಳೆದ ಏಳು ತಿಂಗಳಿನಿಂದ ನಮಗೆ ವೇತನ ನೀಡದೆ ಬಾಕಿ ಉಳಿಸಿದ್ದಾರೆ. ಕೂಡಲೇ ಬಾಕಿ ವೇತನ ನೀಡುವಂತೆ ಆಗ್ರಹಿಸಿದ್ದಾನೆ.
ಇತ್ತೀಚೆಗೆ ಇದೇ ಟವರ್ ಏರಿದ್ದ ಕಳ್ಳ
ಮಲ್ಲಿಕಾರ್ಜುನ ಏರಿದ್ದ ಟವರ್ಗೆ ಇತ್ತೀಚೆಗೆ ಇತ್ತೀಚೆಗೆ ಕಳ್ಳನೊಬ್ಬ ಏರಿ ಕುಳಿತಿದ್ದನು. ಕಳ್ಳತನ ಪ್ರಕರಣ ಸಂಬಂಧ ಜನವರಿ 17ರಂದು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆದರೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಇಲ್ಲದೆ ದಿಕ್ಕುತೋಚದಂತಾದಾಗ ಕಳ್ಳ ಜಾವೀದ್ ಕಣ್ಣಿಗೆ ಬಿದ್ದಿದ್ದು ಟವರ್. ಕೂಡಲೇ ಕಳ್ಳ ಟವರ್ ಏರಿದ್ದನು. ಸುಮಾರು ಎರಡು ಗಂಟೆಗಳ ಕಾಲ ಟಾವರ್ ಏರಿ ಕುಳಿತ ಜಾಮೀದ್ ಹೈಡ್ರಾಮ ನಡೆಸಿದ್ದನು. ಇದರಿಂದ ಪೊಲೀಸರು ಹಾಗೂ ಸ್ಥಳೀಯರು ಬೆಚ್ಚುಬಿದ್ದಿದ್ದರು. ಈತನನ್ನು ಕೆಳಗಿಳಿಸಲು ಸಿಬ್ಬಂದಿ ಹರಸಾಹಸಪಡಬೇಕಾಗಿತ್ತು. ಇದೀಗ ಬೇಡಿಕೆ ಈಡೇರಿಸುವಂತೆ ಆಗ್ರಹಿ ಕಳ್ಳ ಏರಿದ್ದ ಟವರ್ಗೆ ಮಲ್ಲಿಕಾರ್ಜುನ ಏರಿ ಕುಳಿತಿದ್ದಾನೆ.
ಇದನ್ನೂ ಓದಿ: ಧಾರವಾಡ: ಸಿಗರೇಟ್ಗಾಗಿ ಮೊಬೈಲ್ ಟವರ್ ಏರಿ ಕುಳಿತ ಮಾನಸಿಕ ಅಸ್ವಸ್ಥ

ಟವರ್ ಏರಿದ ನೀರು ಸರಬರಾಜು ನೌಕರ
ಧಾರವಾಡ-ಹುಬ್ಬಳ್ಳಿ ಅವಳಿ ನಗರಕ್ಕೆ ನೀರು ಸರಬರಾಜು ಮಾಡುವ ಸವದತ್ತಿಯ ಮಲಪ್ರಭಾ ಜಲಾಶಯದಲ್ಲಿರುವ ಮುಖ್ಯ ಘಟಕದಲ್ಲಿ ವಾಲ್ ಮ್ಯಾನ್ ಆಗಿರುವ ಮಲ್ಲಿಕಾರ್ಜುನ, ಟವರ್ ಏರಿದ್ದರಿಂದ ಕೆಲ ಕಾಲ ಗೊಂದಲ ನಿರ್ಮಾಣವಾಗಿತ್ತು. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆತನ ಮನವೋಲಿಸುವಲ್ಲಿ ಯಶಸ್ವಿಯಾಗಿದ್ದು, ಟವರ್ನಿಂದ ಕೆಳಗಿಳಿಯಲು ಮಲ್ಲಿಕಾರ್ಜುನ ಒಪ್ಪಿದ್ದಾನೆ. ಅದರಂತೆ ಸುರಕ್ಷಿತವಾಗಿ ಆತನನ್ನು ಕೆಳಗಿಳಿಸುವ ಕಾರ್ಯ ನಡೆಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ