ನೇಹಾ ಕೊಲೆಗಾರರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ: ಸ್ವಪಕ್ಷದ ಕಾರ್ಪೊರೇಟರ್​​ನಿಂದಲೇ ಆರೋಪ, ಸಿಬಿಐ ತನಿಖೆಗೆ ಆಗ್ರಹ

|

Updated on: Apr 22, 2024 | 9:40 AM

Neha Hiremath Murder Case: ಗುರುವಾರ (ಏ.18) ರಂದು ಮಧ್ಯಾಹ್ನ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಕೊಲೆಯಾಗಿತ್ತು. ಕೊಲೆಗಾರರ ಬಗ್ಗೆ ಕಾಂಗ್ರೆಸ್​ ಸರ್ಕಾರ ಮೃದು ಧೋರಣೆ ಹೊಂದಿದೆ ಎಂದು ಕಾಂಗ್ರೆಸ್​ ಕಾರ್ಪೊರೇಟರ್​ ನಿರಂಜನ ಹಿರೇಮಠ ಸ್ವಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ.

ನೇಹಾ ಕೊಲೆಗಾರರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ: ಸ್ವಪಕ್ಷದ ಕಾರ್ಪೊರೇಟರ್​​ನಿಂದಲೇ ಆರೋಪ, ಸಿಬಿಐ ತನಿಖೆಗೆ ಆಗ್ರಹ
ನೇಹಾ ತಂದೆ ನಿರಂಜನ ಹಿರೇಮಠ, ಸಿದ್ದರಾಮಯ್ಯ
Follow us on

ಹುಬ್ಬಳ್ಳಿ, ಏಪ್ರಿಲ್​ 22: ಹುಬ್ಬಳ್ಳಿಯ (Hubballi) ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆಯಾಗಿ ನಾಲ್ಕು ದಿನಗಳು ಕಳೆದಿವೆ. ರಾಜ್ಯ ಸರ್ಕಾರ (Congress Government) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಕೊಲೆಗಾರರ ಬಗ್ಗೆ ಮೃದು ಧೋರಣೆ ಹೊಂದಿದೆ ಎಂದು ನೇಹಾ ತಂದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್​ ಸದಸ್ಯ ನಿರಂಜನ ಹಿರೇಮಠ (Niranjan Hiremath) ಸ್ವಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ಎಎನ್​​ಐ ಜೊತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎಂಟು ಜನ ಭಾಗಿಯಾಗಿದ್ದಾರೆ, ಅವರ ಹೆಸರನ್ನೂ ಹೇಳಿದ್ದೇನೆ. ಆದರೆ ಈವರೆಗೂ ಒಬ್ಬರನ್ನೂ ಬಂಧಿಸಿಲ್ಲ. ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದು, ಇವರ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇನೆ. ಹೀಗಾಗಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆಗೆ ನೀಡಿ ಎಂದು ಒತ್ತಾಯಿಸಿದರು.

ಸ್ಥಳೀಯ ಸರ್ಕಾರದಿಂದ ಸರಿಯಾಗಿ ತನಿಖೆಯಾಗದಿದ್ದರೇ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ. ರಾಜ್ಯದ ಪೊಲೀಸರ ಮೇಲಿದ್ದ ಭರವಸೆ ಕಳೆದುಕೊಂಡಿದ್ದೇನೆ. ಹುಬ್ಬಳ್ಳಿ-ಧಾರವಾಡ ಪೊಲೀಸ್​ ಕಮಿಷನರ್​ ಮಹಿಳೆ ಇದ್ದರೂ ಒಂದು ಹುಡುಗಿಯ ಕೊಲೆ ಆಗಿದೆ. ಮಹಿಳೆಯಾಗಿ ಒಂದು ಹುಡುಗಿಯ ಕೊಲೆ ಪ್ರಕರಣವನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಬರುತ್ತಾರೆ, ನಿಮ್ಮ ಜೊತೆ ಇದ್ದೇವೆ ಅಂತ ಹೇಳುತ್ತಾರೆ. ಕಳೆದ ನಾಲ್ಕು ದಿನಗಳಿಂದ ಈ ಎರಡು ಮಾತುಗಳನ್ನು ಬಿಟ್ಟು ಬೇರೆ ಏನು ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ನೇಹಾ ಕೊಲೆ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು-ಜೆಪಿ ನಡ್ಡಾ ಆಗ್ರಹ

ಯಾರದ್ದೋ ಮಾತು ಕೇಳಿ, ಯಾರದ್ದೋ ಒತ್ತಡಕ್ಕೆ ಮಣಿದು ಪ್ರಕರಣದಿಂದ ಹಿಂದೆ ಸರೆಯುತ್ತಿದ್ದಾರೆ. ಅಲ್ಲದೆ ಗೃಹ ಮಂತ್ರಿ, ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಅಂತ ನನಗೆ ಮೂಲಗಳಿಂದ ಮಾಹಿತಿ ದೊರೆತಿದೆ. ಇಂತಹ ಅಧಿಕಾರಿಯನ್ನು ಯಾಕೆ ನೇಮಕ ಮಾಡಿದ್ದೀರಿ? ಇವರಿಂದ ಏನು ಉಪಯೋಗವಿದೆ? ನೇಹಾ ಅವರ ಮಗಳು ಇದ್ದ ಹಾಗೆ ಅಂತ ತಿಳಿದು ಯಾಕೆ ಆರೋಪಿಯನ್ನು ಎನ್​ಕೌಂಟರ್​ ಮಾಡಲಿಲ್ಲ? ಹೀಗಾಗಿ ಇವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇನೆ ಎಂದರು.

ಹೀಗಾಗಿ ನಾನು ಮುಖ್ಯಮಂತ್ರಿಗಳಿಗೆ, ಗೃಹ ಮಂತ್ರಿಗಳ ಬಳಿ ವಿನಂತಿ ಮಾಡಿಕೊಳ್ಳುತ್ತೇನೆ ಕೂಡಲೆ ಈ ಕಮಿಷನರ್​ ಅವರನ್ನು ವರ್ಗಾವಣೆ ಮಾಡಿ. ಮತ್ತು ಪಕ್ರರಣದ ತನಿಖೆಯನ್ನು ಸಿಒಡಿ ಅಥವಾ ಸಿಬಿಐಗೆ ನೀಡಿ ಎಂದು ಆಗ್ರಹಿಸಿದರು.

ಲವ್ ಆ ತರಹ ಏನೂ ಇರಲಿಲ್ಲ, ಒಳ್ಳೆ ಹುಡಗಿ

ನೇಹಾಳ ಕುರಿತು ನೇಹಾ ಮನೆಯ ಮುಂಭಾಗದಲ್ಲಿರುವ ಮುಸ್ಲಿಂ ಕುಟುಂಬ ಮಾತನಾಡಿ, ಹಿಂದೂ ಮುಸ್ಲಿಂ ಬೇಧ ಬಾವ ಇಲ್ಲದೆ ನಾವಿದ್ದೇವೆ. ನೇಹಾ ತಾಯಿ ನಮ್ಮ ಜೊತೆ ವಾಕಿಂಗ್ ಬರುತ್ತಾ ಇದ್ದರು. ನೇಹಾ ನಮ್ಮ ಜೊತೆ ಬಹಳ ಚೆನ್ನಾಗಿ‌ ಮಾತಾಡತಿದ್ದರು. ಅವರ ಮನೆಯಲ್ಲಿ ಹಬ್ಬ ಇದ್ದರೆ ನಾವು ಹೋಗತಿದ್ವಿ. ನಮ್ಮ ಮನೆಯಲ್ಲಿ ಹಬ್ಬ ಇದ್ದರೆ ಅವರು ಬರುತ್ತಿದ್ದರು. ಎಲ್ಲರೊಂದಿಗೆ ನೇಹಾ ಚೆನ್ನಾಗಿದ್ದಳು ಎಂದು ಹೇಳಿದರು.

ಲವ್ ಆ ತರಹ ಏನೂ ಇರಲಿಲ್ಲ, ಒಳ್ಳೆ ಹುಡಗಿ. ನೇಹಾ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:15 am, Mon, 22 April 24