ವಿದ್ಯಾಕಾಶಿ ಧಾರವಾಡಕ್ಕೆ ಕಳಶಪ್ರಾಯವಾಗಿರುವ ಕರ್ನಾಟಕ ವಿವಿಗೆ ಅನುದಾನ ಕೊರತೆ ಕಳಂಕ, ಪಿಯು ಕಾಲೇಜು ಕ್ಲೋಸ್​ ಮಾಡಲು ಸಿಂಡಿಕೇಟ್​ ತೀರ್ಮಾನ

ಅನುದಾನ ರಹಿತ ಕಾಲೇಜು ಆಗಿದ್ದರಿಂದ ಕರ್ನಾಟಕ ವಿಶ್ವವಿದ್ಯಾಲಯವೇ ತನ್ನ ಆಂತರಿಕ ಸಂಪನ್ಮೂಲದಿಂದ ಮುನ್ನಡೆಸುತ್ತ ಬರುತ್ತಿತ್ತು. ಆರ್ಥಿಕವಾಗಿ ದಿವಾಳಿ ಹಿನ್ನೆಲೆ ಕರ್ನಾಟಕ‌ ವಿವಿ ಅಧೀನದಲ್ಲಿರುವ ಯುನಿವರ್ಸಿಟಿ ಪಬ್ಲಿಕ್ ಪಿಯು ನಡೆಯುವುದೇ ಕಷ್ಟವಾಗಿದ್ದಕ್ಕೆ ಕಾಲೇಜ್ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ವಿದ್ಯಾಕಾಶಿ ಧಾರವಾಡಕ್ಕೆ ಕಳಶಪ್ರಾಯವಾಗಿರುವ ಕರ್ನಾಟಕ ವಿವಿಗೆ ಅನುದಾನ ಕೊರತೆ ಕಳಂಕ, ಪಿಯು ಕಾಲೇಜು ಕ್ಲೋಸ್​ ಮಾಡಲು ಸಿಂಡಿಕೇಟ್​ ತೀರ್ಮಾನ
Edited By: ಸಾಧು ಶ್ರೀನಾಥ್​

Updated on: Jun 06, 2023 | 3:56 PM

ಧಾರವಾಡ: ವಿದ್ಯಾಕಾಶಿ, ಸಾಹಿತಿಗಳ ನಾಡು ಎಂಬ ಹೆಸರಿನಿಂದ ಕರೆಯುವ ಧಾರವಾಡಕ್ಕೆ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯವೊಂದು(Karnataka University, Dharwad) ಕಿರೀಟವಿದ್ದಂತೆ. ಇದರ ಅಧೀನದಲ್ಲಿದ್ದ ಪಿಯು ಕಾಲೇಜವೊಂದನ್ನ ಇದೀಗ ಬಂದ್ ಮಾಡಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಮಾತ್ರ ಬಲು ವಿಚಿತ್ರ. ಏನದು? ವರದಿ ಇಲ್ಲಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಯುನಿವರ್ಸಿಟಿ ಪಬ್ಲಿಕ್ ಪಿಯು ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಂದ್ ಆಗಲಿದೆ. ಗುಣಮಟ್ಟದ ಶಿಕ್ಷಣಕ್ಕೆ ದೇಶದಲ್ಲಿ ಹೆಸರುವಾಸಿ ಆಗಿರುವ ಕವಿವಿ ನಿರ್ಧಾರಕ್ಕೆ ಶಿಕ್ಷಣ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ‌. ಧಾರವಾಡ ಕವಿವಿ ಅಧೀನದಲ್ಲಿರುವ ಯುನಿವರ್ಸಿಟಿ ಪಬ್ಲಿಕ್ ಪಿಯು ಕಾಲೇಜು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದೆ‌‌. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕವಾಗಿ ಬಂದ್ ಮಾಡಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ವಾರ ನಡೆದ ಕರ್ನಾಟಕ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಉದ್ಘಾಟನೆಗೆ ಐಐಟಿ ರೆಡಿ: ಪ್ರಧಾನಿ ಆಗಮನಕ್ಕಾಗಿ ಎದುರು ನೋಡುತ್ತಿದೆ ವಿದ್ಯಾಕಾಶಿ ಧಾರವಾಡ! ಎಲ್ಲೆಡೆ ಮೋದಿ ಜೋಷ್ ಇದೆ ಎಂದ ಸಂಸದ ಪ್ರಲ್ಹಾದ ಜೋಶಿ

ಈ ಕಾಲೇಜ್​ನಲ್ಲಿ ಪ್ರತಿ ವರ್ಷ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಿಂದ ಬಡತನದಲ್ಲಿರುವ ಸುಮಾರು 50 ರಿಂದ 60 ಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆಯುತ್ತಿದ್ದರು. ಅನುದಾನ ರಹಿತ ಕಾಲೇಜು ಆಗಿದ್ದರಿಂದ ಕರ್ನಾಟಕ ವಿಶ್ವವಿದ್ಯಾಲಯವೇ ತನ್ನ ಆಂತರಿಕ ಸಂಪನ್ಮೂಲದಿಂದ ಮುನ್ನಡೆಸುತ್ತ ಬರುತ್ತಿತ್ತು. ಸದ್ಯ ಕರ್ನಾಟಕ ವಿಶ್ವವಿದ್ಯಾಲಯ ಆರ್ಥಿಕವಾಗಿ ದಿವಾಳಿ ಆಗಿದ್ದು ಸದ್ಯ ವಿಶ್ವವಿದ್ಯಾಲಯವೇ ನಡೆಯುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ‌ ವಿವಿ ಅಧೀನದಲ್ಲಿರುವ ಯುನಿವರ್ಸಿಟಿ ಪಬ್ಲಿಕ್ ಪಿಯು ನಡೆಯುವುದೇ ಕಷ್ಟವಾಗಿದ್ದಕ್ಕೆ ಕಾಲೇಜ್ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಒಂದು ವರ್ಷಕ್ಕೆ ಬೇಕು 93 ಲಕ್ಷ ರೂಪಾಯಿ ಅನುದಾನ

ಇನ್ನು ಈ ಕಾಲೇಜ್ ಬಂದ್ ಮಾಡಲು ಕವಿವಿ ಸಿಂಡಿಕೇಟ್ ಸಹ ಹಸಿರು ನಿಶಾನೆ ತೋರಿಸಿರುವುದು ಆಶ್ಚರ್ಯ ಮೂಡಿಸಿದೆ. ಈ ಕಾಲೇಜನ್ನು ವರ್ಷಕ್ಕೆ ಮುಂದುವರೆಸಿಕೊಂಡು ಹೋಗಲು ಕನಿಷ್ಠ 93 ಲಕ್ಷ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಆದರೆ, ಕಾಲೇಜಿನ ದಾಖಲಾತಿ ಹಾಗೂ ಪರೀಕ್ಷಾ ಶುಲ್ಕ ಸೇರಿದಂತೆ ಇತರ ಮೂಲಗಳಿಂದ ಪ್ರತಿ ವರ್ಷ 13 ಲಕ್ಷ ರೂಪಾಯಿ ಮಾತ್ರ ಸಂಗ್ರಹಣೆ ಆಗುತ್ತಿತ್ತು. ಬಾಕಿ ಉಳಿದ ಹಣವನ್ನು ಕವಿವಿ ಇಷ್ಟು ವರ್ಷಗಳವರೆಗೆ ತನ್ನ ಆಂತರಿಕ ಸಂಪನ್ಮೂಲದಿಂದಲೇ ಭರಿಸುತ್ತ ಬರುತ್ತಿತ್ತು. ಆದರೆ, ಸದ್ಯ ಕವಿವಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರಣ ಕಾಲೇಜು ಬಂದ್‌ ಮಾಡಲು ತೀರ್ಮಾನಿಸಿರುವುದು ನೋವಿನ ಸಂಗತಿ. ಸದ್ಯ ಇದಕ್ಕೆ ಶಿಕ್ಷಣ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದಿಂದ ಅನುದಾನ ತಂದು ಕಾಲೇಜು ಆರಂಭ ಮಾಡಲಿ ಎಂದಿದ್ದಾರೆ.

ಒಟ್ಟಿನಲ್ಲಿ ಧಾರವಾಡದಂತಹ ವಿದ್ಯಾಕಾಶಿಯಲ್ಲೇ ಕರ್ನಾಟಕ ವಿವಿ ತನ್ನ ಅಧೀನದಲ್ಲಿನ ಕಾಲೇಜು ಬಂದ್ ಮಾಡಲು ನಿರ್ಧಾರ ಮಾಡಿದ್ದು ಎಲ್ಲರಿಗೆ ಬೇಸರ ತಂದಿದೆ. ಆದಷ್ಟು ಬೇಗ ಹೊಸ ಸರ್ಕಾರದಿಂದ ಅನುದಾನ ತಂದು ಕಾಲೇಜು ಮರಳಿ ಪ್ರಾರಂಭ ಮಾಡಬೇಕು ಎಂಬುವುದು ಶಿಕ್ಷಣ ಪ್ರೇಮಿಗಳ ಒತ್ತಾಸೆ. ‌

ಧಾರವಾಡದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:46 pm, Tue, 6 June 23

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us