ರಸ್ತೆ ಅಪಘಾತದಲ್ಲಿ ಕರ್ನಾಟಕದ ನಾಲ್ವರು ಕುಂಭಮೇಳ ಯಾತ್ರಿಕರ ಸಾವು

| Updated By: ವಿವೇಕ ಬಿರಾದಾರ

Updated on: Feb 25, 2025 | 1:34 PM

ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ್ದ ವಿಜಯಪುರ ಜಿಲ್ಲೆಯ ಇಬ್ಬರು ಯಾತ್ರಿಗಳು ಗುಜರಾತ್‌ನ ಪೋರ್‌ಬಂದರ್ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚಡಚಣದ ವಿಶ್ವನಾಥ ಅವಜಿ ಮತ್ತು ಮಲ್ಲಿಕಾರ್ಜುನ ಸದ್ದಲಗಿ ಮೃತರು. 17 ಜನರ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದ ವಾಹನ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಅಪಘಾತದಲ್ಲಿ ಕರ್ನಾಟಕದ ನಾಲ್ವರು ಕುಂಭಮೇಳ ಯಾತ್ರಿಕರ ಸಾವು
ಸಾಂದರ್ಭಿಕ ಚಿತ್ರ
Follow us on

ವಿಜಯಪುರ, ಫೆಬ್ರವರಿ 25: ಪ್ರಯಾಗ್​ರಾಜ್​ಗೆ (Prayagraj) ತೆರಳಿದ್ದ ರಾಜ್ಯದ ಇಬ್ಬರು ಯಾತ್ರಿಗಳು ಗುಜರಾತ್​​ನ ಪೋರ್ ​ಬಂದರ್​​ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಿಜಯಪುರ (Vijayapura) ಜಿಲ್ಲೆಯ ಚಡಚಣ ಪಟ್ಟಣದ ನಿವಾಸಿಗಳಾದ ವಿಶ್ವನಾಥ ಅವಜಿ (55), ಮಲ್ಲಿಕಾರ್ಜುನ ಸದ್ದಲಗಿ (40) ಮೃತ ದುರ್ದೈವಿಗಳು. ವಾಹನದಲ್ಲಿ ಒಟ್ಟು 17 ಜನ ಪ್ರಯಾಗ್​ರಾಜ್​ಗೆ ತೆರಳುತ್ತಿದ್ದರು. ಯಾತ್ರಾರ್ಥಿಗಳಿದ್ದ ವಾಹನ ಮಾರ್ಗ ಮಧ್ಯೆ ನಿಂತಿದ್ದ ಟಿಪ್ಪರ್​​ಗೆ ಡಿಕ್ಕಿಯಾಗಿದೆ. ವಾಹನದಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಪೋರಬಂದರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಭಮೇಳದಿಂದ ಹಿಂದಿರುಗುತ್ತಿದ್ದವರು ಅಪಘಾತದಲ್ಲಿ ಸಾವು

ಬೀದರ್​: ಕುಂಭಮೇಳದಿಂದ ಹಿಂದಿರುಗುವಾಗ ಅಪಘಾತ ಸಂಭವಿಸಿ ಬೀದರ್​ನ ಇಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ವರ್ದಾ ಬಳಿ ಟಿಟಿ ಮತ್ತು ಲಾರಿ ನಡುವೆ ಡಿಕ್ಕಿ ಅಪಘಾತ ಸಂಭವಿಸಿದೆ. ಮೃತರು ಬೀದರ್​ನ ಓಲ್ಡ್ ಸಿಟಿಯ ದರ್ಜಿಗಲ್ಲಿಯವರು ಎಂದು ತಿಳಿದುಬಂದಿದೆ. ಟಿಟಿಯಲ್ಲಿದ್ದ ಇನ್ನುಳಿದ 14 ಜನರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕುಂಭಮೇಳಕ್ಕೆ​ ತೆರಳುತ್ತಿದ್ದ ಕ್ರೂಸರ್​ ವಾಹನ ಅಪಘಾತ: ಬೆಳಗಾವಿಯ ಆರು ಮಂದಿ ಸಾವು

5 ದಿನದ ಹಿಂದೆ 16 ಜನರು ಟೆಂಪೊ ಟ್ರಾವೆಲರ್​ನಲ್ಲಿ ಉತ್ತರ ಪ್ರದೇಶದ ಪ್ರಯಾಗ್​ರಾಜ್​​ ಕುಂಭಮೇಳಕ್ಕೆ ಹೋಗಿದ್ದರು. ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ನಂತರ ಕಾಶಿ, ರಾಮೇಶ್ವರ, ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ವಾಪಸ್​ ಬೀದರ್​ಗೆ ಬರುತ್ತಿದ್ದರು. ಮಂಗಳವಾರ (ಫೆ.25) ಬೆಳಗಿನ ಜಾವ ಟಿಟಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ