ಹೆಚ್ಚಿನ ಬೆಲೆ ವಸೂಲಿ: ಗದಗದಲ್ಲಿ ಮದ್ಯ ಮಾರಾಟಗಾರರ ಅಟ್ಟಹಾಸಕ್ಕೆ ಬೇಸತ್ತ ಮದ್ಯ ಪ್ರಿಯರು

ಗದಗ ಜಿಲ್ಲೆಯಲ್ಲಿ ಮದ್ಯ ಮಾರಾಟಗಾರರ ಅಟ್ಟಹಾಸ ಮಿತಿಮಿರಿದೆ. ಸಭೆಯಲ್ಲಿ ಸಚಿವರು ಎಚ್ಚರಿಕೆಗೂ ಕ್ಯಾರೇ ಅಬಕಾರಿ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದು ಮದ್ಯ ಪ್ರೀಯರ ಆಕ್ರೋಶ ಕಾರಣವಾಗಿದೆ.

ಹೆಚ್ಚಿನ ಬೆಲೆ ವಸೂಲಿ: ಗದಗದಲ್ಲಿ ಮದ್ಯ ಮಾರಾಟಗಾರರ ಅಟ್ಟಹಾಸಕ್ಕೆ ಬೇಸತ್ತ ಮದ್ಯ ಪ್ರಿಯರು
ಗದಗ: ಮದ್ಯ ಖರೀದಿಸಲು ಬರುವ ಜನರಿಂದ ಹೆಚ್ಚಿನ ಬೆಲೆ ವಸೂಲಿ
Edited By: Rakesh Nayak Manchi

Updated on: Nov 12, 2022 | 8:16 AM

ಗದಗ: ಜಿಲ್ಲೆಯಲ್ಲಿ ಮದ್ಯ ಮಾರಾಟಗಾರರ ಅಟ್ಟಹಾಸ ಮಿತಿಮಿರಿದೆ. ಹೆಚ್ಚಿನ ಬೆಲೆ ವಸೂಲಿ ಮಾಡಿ ಭರ್ಜರಿ ಕಮಾಯಿ ಮಾಡುತ್ತಾ ಇದ್ದಾರೆ. ಅದರಲ್ಲೂ ಸಿಎಲ್-2 ಮಳಿಗೆಯಲ್ಲಿ ಎಂಆರ್​ಪಿ ಬೆಲೆ ನೀಡಬೇಕು ಎನ್ನುವ ಕಾನೂನು ಇದೆ. ಆದರೆ ಇಲ್ಲಿ ಮಾತ್ರ ಎಂಆರ್​ಪಿಗಿಂತಲೂ 30-40 ರೂಪಾಯಿ ಹೆಚ್ಚಿಗೆ ವಸೂಲಿ ಮಾಡುತ್ತಾ ಇದ್ದಾರೆ. ಇದು ಸಚಿವರ ಆಕ್ರೋಶಕ್ಕೆ ಕಾರಣವಾಗಿತ್ತು. ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು. ಆದರೂ ಮದ್ಯ ಪ್ರೀಯರಿಂದ ದುಪ್ಪಟ್ಟು ಹಣ ವಸೂಲಿ ಮಾತ್ರ ಇನ್ನೂ ನಿಂತಿಲ್ಲ. ಸಚಿವ ಆದೇಶಕ್ಕೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದು ಮದ್ಯ ಪ್ರೀಯರ ಆಕ್ರೋಶ ಕಾರಣವಾಗಿದೆ.

ಹೆಚ್ಚಿನ ಬೆಲೆ ವಸೂಲಿ ಹಿನ್ನೆಲೆ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಎಂಆರ್​ಪಿ ಬೆಲೆಗೆ ಯಾವುದಾದರೂ ಮದ್ಯ ತಂದು ಕೊಡಿ ನೋಡೋಣ ಅಂತ ತುಂಬಿದ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಝಾಡಿಸಿದ್ದರು. ಇನ್ನುಮುಂದೆ ಹೆಚ್ಚಿನ ಹಣ ಜಿಲ್ಲೆಯಲ್ಲಿ ನಿಲ್ಲಬೇಕು ಎಂದು ಖಡಕ್ ಸೂಚನೆ ನೀಡಿದ್ದರು. ಆದರೆ 10 ದಿನ ಕಳೆದರೂ ಎಂಆರ್​ಪಿ ದರಕ್ಕಿಂತಲೂ ಹೆಚ್ಚಿನ ಹಣ ವಸೂಲಿ ಮಾಡುವುದು ಇನ್ನೂ ನಿಂತಿಲ್ಲ. ಸಚಿವರ ಸೂಚನೆಗೂ ಲಿಕ್ಕರ್ ದೊರೆಗಳು ಕ್ಯಾರೇ ಎನ್ನುತ್ತಿಲ್ಲ.

ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಾಜಾರೋಷವಾಗಿ ಎಂಆರ್​ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಹೆಚ್ಚಿನ ಹಣ ವಸೂಲಿ ಬಯಲಾಗಿದೆ. 105ರೂ., 110 ರೂಪಾಯಿ ಬೆಲೆಯ ಲಿಕ್ಕರ್ 120-130 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಬಿಯರ್ ಬೆಲೆ 160 ಎಂಆರ್​ಪಿ ಇದ್ದರೆ 180-190 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಮದ್ಯ ಮಾಲೀಕರ ವಿರುದ್ಧ ಮದ್ಯ ಪ್ರೀಯರು ಕೂಡಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಾರೋಷವಾಗಿ ಹೆಚ್ವಿನ ಬೆಲೆಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಸುಮ್ಮನಿದೆ. ಸಿಎಲ್-2 ಶಾಪ್​ನಲ್ಲಿ ಎಂಆರ್​ಪಿಗಿಂತ ಒಂದು ಪೈಸೆ ಹೆಚ್ಚಿಗೆ ಪಡೆಯಬಾರದು ಎನ್ನುವ ಕಾನೂನು ಇದೆ. ಆದರೆ ಗದಗ ಜಿಲ್ಲೆಯಲ್ಲಿ ಮದ್ಯದ ಅಂಗಡಿ ಮಾಲೀಕರು ಆಡಿದ್ದೇ ಆಟವಾಗಿದೆ. ಕೂಡಲೇ ಹೆಚ್ವಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವದನ್ನು ನಿಲ್ಲಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮದ್ಯದ ಶಾಪ್​ಗಳ ಲೈಸೆನ್ಸ್ ರದ್ದು ಮಾಡಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಸಿಎಲ್-2 ಶಾಪ್ ಮಾಲೀಕರು ಅಬಕಾರಿ ಸಂಪೂರ್ಣ ಗಾಳಿಗೆ ತೂರಿದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಿಎಲ್-2 ಕೌಂಟರ್ ಸೇಲ್ ಮಾತ್ರ ಮಾಡಬೇಕು. ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಸಿಎಲ್-2 ಅಂಗಡಿ ಮಾಲೀಕರು ಪಕ್ಕದಲ್ಲೇ ಟೇಬಲ್ ಹಾಕಿ ಸರ್ವಿಸ್ ನೀಡುತ್ತಾರೆ. ಇದು ಕಾನೂನು ಬಾಹಿರ. ಇನ್ನೂ ಮದ್ಯದ ಶಾಪ್ ಮಾಲೀಕರು ಮದ್ಯ ಪ್ರೀಯರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಅಬಕಾರಿ ಎಂಆರ್​ಪಿ ದರಕ್ಕೆ ಮಾರಾಟ ಮಾಡಿದರೆ ಸರ್ಕಾರಕ್ಕೆ ನ್ಯಾಯಯುತವಾಗಿ ತೆರಿಗೆ ಹೋಗುತ್ತದೆ. ಆದರೆ ಮದ್ಯದ ಅಂಗಡಿ ಮಾಲೀಕರು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿ ಭರ್ಜರಿ ಕಮಾಯಿ ಮಾಡುತ್ತಿದ್ದಾರೆ. ಇದರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪಾಲಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಇನ್ನೂ ಸಾವಜಿ ಹೋಟೆಲ್​ಗಳಲ್ಲಂತೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿದೆ. ಇನ್ನೂ ಈ ಕುರಿತು ಅಬಕಾರಿ ಉಪ ಆಯುಕ್ತರನ್ನು ಕೇಳಿದರೆ ನಾವು ಸಾಕಷ್ಟು ಕೇಸ್ ಮಾಡಿದ್ದೇವೆ, ಹಾಗೇನಾದರೂ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ.
ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಬರುವ ಅಬಕಾರಿ ಇಲಾಖೆಯನ್ನೇ ವಂಚಿಸಿ ರಾಜಾರೋಷವಾಗಿ ಹೆಚ್ಚಿನ ಬೆಲೆಗೆ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇನಾದ್ರು ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ಶಾಪ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಚಿವರ ಸೂಚನೆ ಪಾಲಿಸುತ್ತಾರಾ ಎಂಬುದನ್ನು ನೋಡಬೇಕಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 am, Sat, 12 November 22

Loading...
Unable to load recommendations.
Follow Us