ಚುನಾವಣೆ ಹೊಸ್ತಿಲಲ್ಲಿ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ ಗದಗ ಜಿಲ್ಲಾಡಳಿತ

ಈಗಾಗಲೇ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಂಡ ಗದಗ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್​ಗಳನ್ನು ಸ್ಥಾಪನೆ ಮಾಡಿದ್ದು, ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿದೆ. ಆ ಮೂಲಕ ಅಕ್ರಮ ಸಾಗಾಣಿಕೆದಾರರಿಗೆ ಎಚ್ಚರಿಕೆ ನೀಡಿದೆ.

ಚುನಾವಣೆ ಹೊಸ್ತಿಲಲ್ಲಿ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ ಗದಗ ಜಿಲ್ಲಾಡಳಿತ
ಚುನಾವಣೆ ಹೊಸ್ತಿಲಲ್ಲಿ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ ಗದಗ ಜಿಲ್ಲಾಡಳಿತ
Rakesh Nayak Manchi

Updated on: Mar 21, 2023 | 3:15 PM

ಗದಗ: ಚುನಾವಣೆ (Karnataka Assembly Election 2023) ಹತ್ತಿರ ಬರುತ್ತಿದ್ದಂತೆ ಕುರುಡು ಕಾಂಚಾಣ ಜೊತೆ ಚಿನ್ನವೂ ಕುಣಿದಾಡಲು ಆರಂಭವಾಗಿದೆ. ಚುನಾವಣೆ ಘೋಷಣೆಗೂ ಮುನ್ನ ಗದಗ ಜಿಲ್ಲಾಡಳಿತ ಚಿನ್ನ ಹಾಗೂ ಲಕ್ಷ ಲಕ್ಷ ಗರಿ ಗರಿ ನೋಟುಗಳನ್ನು ಬೇಟೆಯಾಡಿದೆ. ಈಗಾಗಲೇ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಂಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್​ಗಳನ್ನು ಸ್ಥಾಪನೆ ಮಾಡಿದ್ದು, ಇಲ್ಲಿ ಸಿಸಿ ಟಿವಿ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿರಿಸಲಾಗಿದೆ. ಅದರಂತೆ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿದೆ. ಅಂದ ಚೆಂದದ ಚಿನ್ನಾಭರಣಗಳ ರಾಶಿ, ನೋಟುಗಳ ಕಂತೆಗಳನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. 500 ಮುಖ ಬೆಲೆಯ ಕಂತೆ ಕಂತೆ ಗರಿ ಗರಿ ನೋಟುಗಳು, ಚಿನ್ನಾಭರಣ ನೋಡಿ ಗದಗ ಜಿಲ್ಲೆಯ ಜನರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಚುನಾವಣೆ ಹೊಸ್ತಿಲಲ್ಲೇ ದಾಖಲೆ ಇಲ್ಲದ ಚಿನ್ನಾಭರಣ, ಹಣ ಜಪ್ತಿ ಮಾಡಿ ಬಿಸಿ ಮುಟ್ಟಿಸಿದ ಜಿಲ್ಲಾಡಳಿತವು, ಆರಂಭದಲ್ಲೇ ಬಿಸಿ ಮುಟ್ಟಿಸಿದ್ದಾರೆ. ಚುನಾವಣೆ ಘೋಷಣೆ ಮುನ್ನವೇ ಕುರುಡು ಕಾಂಚಾಣ ಜೊತೆ ಫಳ ಫಳ ಹೊಳೆಯುವ ಚಿನ್ನದ ಆಟ ಚೆಕ್ ಪೋಸ್ಟ್ ಮೂಲಕ ಲಗಾಮ್ ಹಾಕಲಾಗಿದೆ. ಚೆಕ್ ಪೋಸ್ಟ್ ನಲ್ಲಿ ಸಿಸಿ ಟಿವಿ ಕಣ್ಣು ಮೂಲಕ ಹೈ ಅಲರ್ಟ್ ಆಗಿದ್ದಾರೆ.

ಚುನಾವಣೆ ಆಯೋಗವು ಚುನಾವಣೆ ಘೋಷಣೆ ಮಾಡಿಲ್ಲ. ಈಗಲೇ ಕುರುಡು ಕಾಂಚಾಣ ಹರಿದಾಡುತ್ತಿದೆ. ಅಷ್ಟೇ ಅಲ್ಲ ಚಿನ್ನಾಭರಣವೂ ಭರ್ಜರಿಯಾಗಿ ಹರಿದಾಡುತ್ತಿದೆ. ಇವು ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದರೇ ಎಂಬುದು ತಿಳಿದುಬಂದಿಲ್ಲ, ಆದರೆ ದಾಖಲೆ ಇಲ್ಲದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ನಗದು ಗದಗ ಜಿಲ್ಲಾಡಳಿತ ಪತ್ತೆ ಮಾಡಿದೆ. ಗದಗ ಜಿಲ್ಲಾಡಳಿತ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಚುನಾವಣೆ ಘೋಷಣೆ ಮುನ್ನವೇ ಅಕ್ರಮ ತಡೆಯಲು ಡಿಸಿ ವೈಶ್ಯಾಲಿ ಮೇಡ್ ಜಿಲ್ಲಾದ್ಯಂತ 18 ಚೆಕ್ ಪೋಸ್ಟ್​ಗಳನ್ನು ಸ್ಥಾಪನೆ ಮಾಡಿದ್ದಾರೆ. ಅಕ್ರಮವಾಗಿ ಏನೇ ಸಾಗಟಾ ಆದರೂ ಶೋಧ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಯೊಂದು ವಾಹನಗಳನ್ನು ಚೆಕ್ ಪೋಸ್ಟ್​ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಮಾರ್ಚ್ 15 ರಂದು ದಾಖಲೆ ಇಲ್ಲದ ಮುಂಬೈನಿಂದ ಗದಗ ನಗರದಕ್ಕೆ ಸಾಗಿಸುತ್ತಿದ್ದ 1ಕೋಟಿ 75 ಲಕ್ಷ ಮೌಲ್ಯದ 4ಕೆಜಿ ಚಿನ್ನಾಭರಣ ಪತ್ತೆಯಾಗಿದ್ದು, ಇದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಅಂತ ಟಿವಿ9ಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ರಮೇಶ್ ಜಾರಕಿಹೊಳಿ ಆಪ್ತನ ಭಾವಚಿತ್ರವಿರುವ ಟಿಫಿನ್ ಬಾಕ್ಸ್‌ಗಳ ಜಪ್ತಿ

ಮಾರ್ಚ್ 15 ರಂದು ಕಾರೊಂದು ಚೆಕ್ ಪೋಸ್ಟ್​ನಿಂದ ಪಾಸ್ ಆಗಿದೆ. ಆ ಕಾರ್​ನಲ್ಲಿ ದಾಖಲೆ ಇಲ್ಲದ ನಾಲ್ಕು ಕೆಜಿ ಚಿನ್ನಾಭರಣ ಸಾಗಾಟ ನಡೆದಿದೆ ಅಂತ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಅದರಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಕಾರನ್ನು ತಡೆದು ತಪಾಸಣೆ ಮಾಡಿದಾಗ 4ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದ ಕಾರಣ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಮಾರ್ಚ್ 20ರ ರಾತ್ರಿ ಗದಗ ತಾಲೂಕಿನ ಮುಳಗುಂದ ಚೆಕ್ ಪೋಸ್ಟ್​ನಲ್ಲಿದ್ದ ಎಸ್​ಪಿ ಬಿಎಸ್ ನೇಮಗೌಡ ನೇತೃತ್ವದ ತಂಡವು ದಾಖಲೆ ಇಲ್ಲದೇ ಸಾಗಿಸುತ್ತಿದ್ದ 24 ಲಕ್ಷ 50 ಸಾವಿರ ನಗರದ ಜಪ್ತಿ ಮಾಡಿದೆ.

ದಾವಣಗೆರೆಯಿಂದ ಗದಗ ಕಡೆಗೆ ಬರುತ್ತಿದ್ದ ಕಾರ್​ ಅನ್ನು ತಡೆದು ಪರಿಶೀಲಿಸಿದಾಗ 20 ಲಕ್ಷದ 50 ಸಾವಿರ ಹಣ ಸೀಜ್ ಪತ್ತೆಯಾಗಿದೆ. ಬದಾಮಿ ತಾಲೂಕಿನ ಜಾಲಿಹಾಳದಿಂದ ಲಕ್ಷ್ಮೇಶ್ವರ ಕಡೆಗೆ ಹೊರಟಿದ್ದ ಕಾರೊಂದರಲ್ಲಿ 4 ಲಕ್ಷ ಪತ್ತೆಯಾಗಿದ್ದು, 500 ಮುಖ ಬೆಲೆಯ ಗರಿ ಗರಿ ಕಂತೆ ಕಂತೆ ಹಣ ಸೀಜ್ ಮಾಡಲಾಗಿದೆ. ಆದರೆ ಪ್ರಯಾಣಿಕರು ವಾಹನ, ಆಸ್ತಿ ಖರೀದಿಗೆ ಹಣ ತೆಗೆದುಕೊಂಡು ಹೋರಟಿದ್ದೇವೆ ಎಂದಿದ್ದಾರೆ. ಅದಾಗ್ಯೂ, ದಾಖಲೆ ಇಲ್ಲದ ಕಾರಣ ಸೀಜ್ ಮಾಡಿ ತನಿಖೆ ನೀಡೆಸಿರುವುದಾಗಿ ಎಸ್​ಪಿ ನೇಮಗೌಡ ಅವರು ಟಿವಿ9ಗೆ ಹೇಳಿದ್ದಾರೆ.

ಗದಗ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥಿತ, ಅಕ್ರಮ ರಹಿತ ಚುನಾವಣೆಗೆ ಜಿಲ್ಲಾಡಳಿತ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ಜಿಲ್ಲೆಯ ಸ್ಥಾಪಿಸಿದ 18 ಚೆಕ್ ಪೋಸ್ಟ್​ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಪ್ರವೇಶ ಮಾಡುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಈ ಮೂಲಕ ರಾಜಕೀಯ ಪಕ್ಷಗಳಿಗೆ ಜಿಲ್ಲಾಡಳಿತ ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ ಅನ್ನೋ ಸಂದೇಶ ನೀಡಿದೆ. ಪಾರದರ್ಶಕ ಚುನಾವಣೆಗೆ ಅಧಿಕಾರಿಗಳು ಕೈಗೊಂಡ ನಿರ್ಧಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ: ಸಂಜೀವ ಪಾಂಡ್ರೆ, ಟವಿ9 ಗದಗ

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us