Karnataka Rains: ಕರ್ನಾಟಕದ ಹಲವೆಡೆ ಗುಡುಗು ಸಹಿತ ಭಾರೀ ಮಳೆ, ರೈತರ ಮುಖದಲ್ಲಿ ಮಂದಹಾಸ

ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಇಂದು ಬೆಳಗಾವಿ ಮತ್ತು ಹಾಸನದಲ್ಲಿ ಭಾರೀ ಮಳೆಯಾಗಿದ್ದು, ಗದಗ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗಿದೆ.

Karnataka Rains: ಕರ್ನಾಟಕದ ಹಲವೆಡೆ ಗುಡುಗು ಸಹಿತ ಭಾರೀ ಮಳೆ, ರೈತರ ಮುಖದಲ್ಲಿ ಮಂದಹಾಸ
ಕರ್ನಾಟಕದಲ್ಲಿ ಮಳೆ
Rakesh Nayak Manchi

Updated on: Apr 20, 2023 | 8:09 PM

ಗದಗ: ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ (Karnataka Rains) ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಇಂದು ಬೆಳಗಾವಿಯಲ್ಲಿ (Belagavi Rain) ಗಾಳಿ ಸಹಿತ ಮಳೆಯಾಗಿದ್ದು, ನಿರಂತರ ಒಂದು ಗಂಟೆಗಳ ಕಾಲ ಮಳೆಯಾಗಿದೆ. ಇತ್ತ ಹಾಸನ (Hassan Rain) ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ರೋಡ್ ಶೋ ನಡೆಸುತ್ತಿದ್ದ ಜೆಡಿಎಸ್ (JDS) ಕಾರ್ಯಕರ್ತರು ಮಳೆಯಲ್ಲಿ ಮಿಂದೆದ್ದರು. ಇನ್ನೊಂದೆಡೆ, ಗದಗ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ (Gadag Rain) ಮಳೆಯಾಗಿದೆ. ಒಟ್ಟಾರೆಯಾಗಿ ಸುಡು ಬಿಸಿಲಿಗೆ ಬೆಂದಿದ್ದ ಈ ಮೂರು ಜಿಲ್ಲೆಗಳಲ್ಲಿನ ಜನರು ಮತ್ತು ಪರಿಸರವನ್ನು ವರುಣ ದೇವ ತಂಪರೆದಿದ್ದಾನೆ.

ಗದಗ‌ ಜಿಲ್ಲೆಯ ಹಲವಡೆ ಇಂದು ಗುಡುಗು ಸಹಿತ ಭಾರೀ ಮಳೆಯಾಗಿದೆ. ಶಿರಹಟ್ಟಿ ಪ್ಟಣದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಅಯ್ಯೋ ಸೆಕೆಯಪ್ಪಾ ಸೆಕೆ ಅನ್ನುತ್ತಿದ್ದ ಜನರು ಹಬ್ಬ! ತಂಪಾಯ್ತು ಎನ್ನುತ್ತಿದ್ದಾರೆ. ಮಾತ್ರವಲ್ಲದೆ, ಸುಡು ಬಿಸಿಲಿಗೆ ಬೆಲೆ ನಷ್ಟದ ಚಿಂತೆಯಲ್ಲಿದ್ದ ಅನ್ನದಾತರ‌ ಮುಖದಲ್ಲಿ ಮಂದಹಾಸ ಮೂಡಿದೆ.

ಬೆಳಗಾವಿ ಜಿಲ್ಲೆಯಲ್ಲೂ ವರುಣ ದೇವ ತಂಪೆರೆದಿದ್ದಾನೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಸುತ್ತಮುತ್ತ ಗಾಳಿ ಸಹಿತ ಮಳೆಯಾಗಿದ್ದು, ಒಂದು ಗಂಟೆ ಕಾಲ ನಿರಂತರವಾಗಿ ಮಳೆ ಸುರಿದಿದೆ. ಒಂದೆಡೆ ವಾತಾವರಣ ತಂಪಾಯಿತು ಎನ್ನುವ ಖುಷಿ ಜನರಲ್ಲಿದ್ದರೆ, ಇನ್ನೊಂದೆಡೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಕಂಗಾಲೂ ಆಗಿದ್ದಾರೆ. ಗಾಳಿ ಮಳೆಯಿಂದ ವಾಹನ ಸವಾರರು ಸಂಚಾರಕ್ಕೆ ಪರದಾಟ ನಡೆಸಬೇಕಾಯಿತು.

ಹಾಸನ: ಮಳೆ; ಕುಣಿದು ಕುಪ್ಪಳಿಸಿದ ಜೆಡಿಎಸ್​ ಕಾರ್ಯಕರ್ತರು

ಹಾಸನ ಜಿಲ್ಲೆಯಲ್ಲೂ ಇಂದು ಮಳೆಯಾಗಿದೆ. ಹೌದು, ಜೆಡಿಎಸ್​ ನಾಯಕರ ರೋಡ್​ಶೋಗೆ ಮಳೆರಾಯ ಅಡ್ಡಿಯಾದರೂ ಕಾರ್ಯಕರ್ತರು ಮಾತ್ರ ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ರೋಡ್​ಶೋನಲ್ಲಿ ಭಾಗಿಯಾಗಿರುವ ಕುಮಾರಸ್ವಾಮಿ, ಭವಾನಿ ರೇವಣ್ಣ, ಸೂರಜ್ ರೇವಣ್ಣ, ಹಾಸನ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ.ಸ್ವರೂಪ್​ ಮತ್ತಿತರರು ಈ ರೋಡ್ ಶೋದಲ್ಲಿ ಇದ್ದರು. ಇನ್ನೊಂದೆಡೆ ಹಾಸನ ಬಸ್ ನಿಲ್ದಾಣ ರಸ್ತೆಯಲ್ಲಿ ಮಳೆ ಹಿನ್ನೆಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಂಗಿದ್ದಾರೆ.

ಇದನ್ನೂ ಓದಿ: Karnataka Weather: ಉಡುಪಿ, ಮೈಸೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು, ತುಮಕೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳು ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಮಳೆಯಾಗಲಿದೆ.

ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ, ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ 2 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದ್ದು, ಏಪ್ರಿಲ್ 21ರಂದು ಸ್ವಲ್ಪ ಮೋಡಕವಿದ ವಾತಾವರಣ ನಿರ್ಮಾಣವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:09 pm, Thu, 20 April 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us