ಜಮೀನು ಕಬಳಿಸಲು ಕಿರುಕುಳ, ಯುವಕ ಆತ್ಮಹತ್ಯೆ; FIR ದಾಖಲಾಗ್ತಿದ್ದಂತೆ ನಗರಸಭೆ ಮಾಜಿ ಅಧ್ಯಕ್ಷ ಎಸ್ಕೇಪ್

ಕಾಂಗ್ರೆಸ್ ಮುಖಂಡನೊಬ್ಬನ ದರ್ಪಕ್ಕೆ ನಲುಗಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗದಗ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಗರಸಭೆ ಮಾಜಿ ಅಧ್ಯಕ್ಷನ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾನಂತೆ. ಆ ಮುಖಂಡನಿಗೆ ಈಗ ಬಂಧನ ಭೀತಿ ಎದುರಾಗಿದೆ.

ಜಮೀನು ಕಬಳಿಸಲು ಕಿರುಕುಳ, ಯುವಕ ಆತ್ಮಹತ್ಯೆ; FIR ದಾಖಲಾಗ್ತಿದ್ದಂತೆ ನಗರಸಭೆ ಮಾಜಿ ಅಧ್ಯಕ್ಷ ಎಸ್ಕೇಪ್
ಜಮೀನು ಕಬಳಿಸಲು ಕಿರುಕುಳ, ಯುವಕ ಆತ್ಮಹತ್ಯೆ
Edited By:

Updated on: Aug 29, 2021 | 1:23 PM

ಗದಗ: ಆಗಸ್ಟ್ 25 ರ ರಾತ್ರಿ ಗದಗ ತಾಲೂಕಿನ ಹಿರೇಕೊಪ್ಪದ ವೀರಯ್ಯ, ಗ್ರಾಮದ ಜಮೀನೊಂದರಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮುನ್ನ ಯುವಕ ವೀರಯ್ಯನ ಆಡಿಯೋವೊಂದು ಸಾಕಷ್ಟು ಸುದ್ದಿಯಾಗಿತ್ತು. ಆ ಆಡಿಯೋದಲ್ಲಿ ಗದಗ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್ ಕೌತಾಳ್ ಜಮೀನು ವಿಚಾರವಾಗಿ ತನಗೆ ಮಾಡಿರುವ ಅನ್ಯಾಯ, ಕೊಡ್ತಿರುವ ಕಿರುಕುಳದ ಬಗ್ಗೆ ಹೇಳಿದ್ದ. ಅಷ್ಟೇ ಅಲ್ಲ ತನ್ನ ಅಕ್ಕನ ಬಳಿಯೂ ತನಗಾಗಿರುವ ನೋವು.. ಅನ್ಯಾಯ ಎಲ್ಲವನ್ನೂ ಹೇಳಿ ಸಾವಿಗೆ ಶರಣಾಗಿದ್ದ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಯಾವಾಗ ಯುವಕನ ಆಡಿಯೋ ವೈರಲ್ ಆಯ್ತೋ ಗದಗ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್ ಕೌತಾಳ್ ವಿರುದ್ಧ ಕೇಸ್ ಕೂಡ ದಾಖಲಾಯ್ತು. ಆದ್ರೆ ಬಂಧನ ಭೀತಿಯಿಂದ ಪೀರಸಾಬ್ ಕೌತಾಳ್ ಮನೆಗೆ ಬೀಗ ಹಾಕಿ ರಾತ್ರೋ ರಾತ್ರಿ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ. ಆದ್ರೆ ಗ್ರಾಮಸ್ಥರು ಪೊಲೀಸರ ವಿಳಂಬ ನೀತಿ ವಿರುದ್ಧ ಗರಂ ಆಗಿದ್ದಾರೆ. ಇದಕ್ಕೆ ಸ್ಪಷನೆ ನೀಡಿರುವ ಎಸ್‌ಪಿ ಯತೀಶ್ ಕಾನೂನು ರೀತಿ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದ್ದಾರೆ.

ಫೀರಸಾಬ್ ಕೌತಾಳಗೆ ಪ್ರಭಾವಿ ರಾಜಕಾರಣಿಗಳ ಕೃಪಾಕಟಾಕ್ಷವಿದೆಯಂತೆ ಹಾಗಾಗಿಯೇ ಪೊಲೀಸರೇ ರಕ್ಷಣೆ ಕೊಡ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬರ್ತಿವೆ. ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬಸ್ಥರು ಸಹ ಆತನ ಪ್ರಭಾವ ಕಂಡು ಭಯಬಿದ್ದಿದ್ದು ಆತನ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ.

ಫೀರಸಾಬ್ ಕೌತಾಳನಿಂದ ಕೇವಲ ವೀರಯ್ಯ ಮಾತ್ರವಲ್ಲ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆಯಂತೆ. ಬಡವರ ಆಸ್ತಿ ನುಂಗಿ ಬೀದಿಗೆ ತರೊದೇ ಈತನ ಕೆಲಸವಂತೆ. ಅಷ್ಟೇ ಅಲ್ಲ ಪುಟ್ಟರಾಜ ಗವಾಯಿಗಳ ಮಠದ ಆಸ್ತಿಯನ್ನು ಸಹ ಗುಳುಂ ಮಾಡಿರುವ ವಿಚಾರ ವೀರಯ್ಯನ ಆಡಿಯೋದಿಂದ ಬಯಲಾಗಿದೆ. ಹೀಗಾಗಿ ಪೊಲೀಸರು ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಅನ್ನೋ ಆಗ್ರಹ ಯುವಕನ ಕುಟಂಬಸ್ಥರದ್ದು.

ಇದನ್ನೂ ಓದಿ: ನಗರಸಭೆ ಮಾಜಿ ಅಧ್ಯಕ್ಷನ ವಿರುದ್ಧ ದಬ್ಬಾಳಿಕೆ ಆರೋಪ, ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ