
ಪದೇಪದೆ ಮಳೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಸಂಕಷ್ಟಗಳ ಸಂಕೋಲೆಯಲ್ಲಿ ಸಿಕ್ಕಕೊಂಡು ಒದ್ದಾಡುತ್ತಿದೆ. ಬೀದಿಗೆ ಬಿದ್ದರುವ ಸಾವಿರಾರು ಕುಟುಂಬಗಳಿಗೆ ಪರಿಹಾರ ಮರೀಚಿಕೆಯಾಗಿದೆ. ಒಂದಉ ವರ್ಷದ ಅವಧಿಯಲ್ಲಿ ಮೂರು ಬಾರಿ ಪ್ರವಾಹಕ್ಕೆ ತುತ್ತಾಗಿರುವ ಜನ ಮನೆ-ಬೆಳೆ-ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾಗಿ ಏನಾದರೂ ಸಹಾಯ ಸಿಕ್ಕೀತೇ ಎಂದು ದೈನೇಸಿಗಳಾಗಿ ಸರ್ಕಾರ ಕಡೆ ನೋಡುತ್ತಿದ್ದರೂ ಪರಿಹಾರದ ಸುಳಿವು ಸಹ ಅವರಿಗೆ ಸಿಗುತ್ತಿಲ್ಲ. ಎಂದಿನಂತೆ ಅವರಿಗೆ ಸಹಾಯ ಮರೀಚಿಕೆಯಾಗಿದೆ.
ಬಿ ಎಸ್ ಯಡಿಯೂರಪ್ಪನವರ ಸರ್ಕಾರವೇನೋ ಇರುವ ಹಣದಲ್ಲಿ ತಕ್ಷಣಕ್ಕೆ ಪರಿಹಾರ ಒದಗಿಸುವುದಾಗಿ ಹೇಳುತ್ತಿದೆ. ಆದರೆ ಆ ಭಾಗದಲ್ಲಿ ಪ್ರವಾಹ ಸೃಷ್ಟಸಿರುವ ಅವಾಂತರ ಮತ್ತು ಗಂಡಾಂತರಗಳ ಬಗ್ಗೆ ಅದಕ್ಕೆ ಒಂದು ಚಿಕ್ಕ ಅಂದಾಜು ಕೂಡ ಸರ್ಕಾರಕ್ಕೆ ಇದ್ದಂತಿಲ್ಲ. ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಲ್ಲಿನ ಜಮೀನುಗಳಲ್ಲಿ ಬೆಳೆಗಳು ನಾಶವಾಗಿವೆ. ಸಾವಿರಾರು ಮನೆಗಳು ಅನಾಮತ್ತಾಗಿ ಧರೆಗುರುಳಿವೆ. ರಸ್ತೆ, ಸೇತುವೆಗಳು ಸಂಪೂರ್ಣವಾಗಿ ಹಾಳಾಗಿವೆ.
ಶತಮಾನದಲ್ಲೇ ಕೇಳರಿಯದಂಥ ರಣಭೀಕರ ಮಳೆ ಮತ್ತು ಪ್ರವಾಹದ ಆರ್ಭಟಕ್ಕೆ ಕಲಬುರಗಿ ಜಿಲ್ಲೆ ನಲುಗಿ ಹೋಗಿದೆ. ಜಿಲ್ಲೆಯಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದ್ದು, 10
ಯಾದಗಿರಿಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನೀರುಪಾಲಾಗಿದ್ದು, 450 ಮನೆಗಳು ನೆಲಸಮವಾಗಿವೆ. ಈ ಜಿಲ್ಲೆಯಲ್ಲಿ ರೂ. 500 ಕೋಟಿಗಿಂತ ಜಾಸ್ತಿ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ಉಕ್ಕಿದ ಪ್ರವಾಹದಿಂದ ಕಳೆದ ಬಾರಿ ಉಂಟಾದ ಹಾನಿ ಸೇರಿದಂತೆ ಇದುವರೆಗೆ ಒಟ್ಟು 35 ಸಾವಿರಕ್ಕೂ ಅಧಿಕ ಹೆಕ್ಟೇರ್ ಜಮೀನಿನಲ್ಲಿ ಬೆಳೆ ನಾಶವಾಗಿದ್ದು, ಜಿಲ್ಲೆಯಲ್ಲಿ 270 ಮನೆಗಳು ಹಾನಿಗೀಡಾಗಿವೆ. ಜಿಲ್ಲೆಯಲ್ಲಿ ಒಟ್ಟು ರೂ 1,400 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬಾಗಲಕೋಟೆಯಲ್ಲಿ ಕೃಷ್ಣೆ, ಮಲಪ್ರಭಾ ಪ್ರವಾಹಕ್ಕೆ ಹಾಗೂ ಮಳೆಗೆ 27 ಸಾವಿರಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿದ್ದು, ಜಿಲ್ಲೆಯಲ್ಲಿ ಸುಮಾರು 2700 ಮನೆಗಳು ಹಾನಿಗೀಡಾಗಿವೆ. ಒಂದು ಅಂದಾಜಿನ ಪ್ರಕಾರ ಬಾಗಲಕೋಟೆ ನಗರವೊಂದರಲ್ಲೇ ಪ್ರವಾಹದಿಂದ ಹೆಚ್ಚು ಕಡಿಮೆ ರೂ 500 ಕೋಟಿಗೂ ಅಧಿಕ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿರುವ ಪ್ರಶ್ನೆ ಯಾರು ಸತ್ಯವಂತರು, ಯಾರು ಸುಳ್ಳುಗಾರರು ಅನ್ನುವುದಲ್ಲ. ನೊಂದು ಬೆಂದಿರುವ ಸಂತ್ರಸ್ತರಿಗೆ ಬೇಕಿರುವುದು ಪರಿಹಾರ. ಆದರೆ, ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಮತ್ತು ಇದುವರೆಗೆ ಮಾಡಿರುವ ವ್ಯವಸ್ಥೆಗಳನ್ನು ಗಮನಿಸಿದರೆ ಆ ಜನರ ಕಷ್ಟಗಳಿಗೆ ಪರಿಹಾರ ಸಿಗುವುದು ಸಾಧ್ಯವಿಲ್ಲ ಅಂತ ಯಾರಿಗಾದರೂ ಅನಿಸಿಬಿಡುತ್ತದೆ.