AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರ ಲಾಠಿಚಾರ್ಚ್​​ ಖಂಡಿಸಿ ಕಾಫಿನಾಡು ಕೊತ ಕೊತ: ಹಲವೆಡೆ ಬಂದ್​, ಪ್ರತಿಭಟನೆ

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಸಾವಿನ ನಂತರ ನಡೆದ ಪೊಲೀಸ್ ಲಾಠಿಚಾರ್ಜ್‌ ಖಂಡಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಮತ್ತು ಕಡಬಗೆರೆ ತಾಲೂಕುಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಜನರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪೊಲೀಸರ ಲಾಠಿಚಾರ್ಚ್​​ ಖಂಡಿಸಿ ಕಾಫಿನಾಡು ಕೊತ ಕೊತ: ಹಲವೆಡೆ ಬಂದ್​, ಪ್ರತಿಭಟನೆ
ಚಿಕ್ಕಮಗಳೂರು ಜಿಲ್ಲೆ ಬಹುತೇಕ ಬಂದ್​Image Credit source: Tv9 Kannada
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Feb 23, 2026 | 12:12 PM

Share

ಚಿಕ್ಕಮಗಳೂರು, ಫೆಬ್ರವರಿ 23: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು ಮತ್ತು ನಂತರದ ಲಾಠಿಚಾರ್ಜ್ ವಿಚಾರವಾಗಿ ಕಾಫಿನಾಡು ಚಿಕ್ಕಮಗಳೂರಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ, ಎನ್.ಆರ್.ಪುರ, ಮತ್ತು ಶೃಂಗೇರಿ ತಾಲೂಕುಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಡಬಗೆರೆ ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ ಮುಂಗಟ್ಟು ಮುಚ್ಚಿ ವರ್ತಕರು ಬಂದ್​​ ಬೆಮಬಲಿಸಿದ್ದಾರೆ. ನಿನ್ನೆ ಇಡೀ ದಿನ ಕಡಬಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆದಿದ್ದು, ಸಂಜೆ ಲಾಠಿಚಾರ್ಜ್​​ ಕೂಡ ನಡೆದಿತ್ತು.

ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್​​

ಜನರ ಆಕ್ರೋಶದ ಕಟ್ಟೆ ಒಡೆದ ಪರಿಣಾಮ ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್​​ ಆಗಿದೆ. ನಿನ್ನೆ ನಡೆದ ಘಟನೆ ಖಂಡಿಸಿ ಬಾಳೆಹೊನ್ನೂರಿನ JCI ಸರ್ಕಲ್ ನಲ್ಲಿ ಪ್ರತಿಭಟನೆ ನಡೆದಿದ್ದು, ನೂರಾರು ಜನರು ಭಾಗಿಯಾಗಿದ್ದಾರೆ. ರಾಜ್ಯದಕಾಂಗ್ರೆಸ್ ಸರ್ಕಾರ ಮತ್ತು ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ರೈತ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದು, ರೈತ ವಿರೋಧಿ ರಾಜ್ಯ ಸರ್ಕಾರ ಎಂಬ ಘೋಷಣೆಗಳು ಈ ವೇಳೆ ಮೊಳಗಿವೆ.

ಇದನ್ನೂ ಓದಿ:  ಕಾಡಾನೆಗೆ ಮತ್ತೊಂದು ಬಲಿ ಬೆನ್ನಲ್ಲೇ ರಣರಂಗವಾದ ಚಿಕ್ಕಮಗಳೂರು; ಕಲ್ಲು ತೂರಾಟ-ಲಾಠಿ ಚಾರ್ಜ್‌, ಶೃಂಗೇರಿ ಬಂದ್​​ಗೆ ಕರೆ

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ್, ಮೃತ ದೇಹ ರವಾನೆ ವೇಳೆ ಜನರನ್ನು ಚದುರಿಸುವ ಕೆಲಸ ಮಾಡಿದ್ದೇವೆಯೇ ಹೊರತು ಲಾಠಿಚಾರ್ಜ್​​ ಮಾಡಿಲ್ಲ. 29 ಜನರ ಮೇಲೆ FIR ದಾಖಲು ‌ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನೆ ವೇಳೆ ನಮ್ಮ‌ ಸಿಬ್ಬಂದಿಗೆ ಗಾಯವಾಗಿದ್ದು, ತನಿಖೆ ನಡೆಸಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಧಿಕಾರಿ ಮತ್ತು ನಾನು ಹೋರಾಟಗಾರರಿಗೆ ಮನವಿ ಕೂಡ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸ್ ಬಿಗಿ ಭದ್ರತೆ

ಪ್ರತಿಭಟನೆಗೆ ಕರೆ ಹಿನ್ನೆಲೆ ಬಾಳೆಹೊನ್ನೂರಿನ ಅರಣ್ಯ ಇಲಾಖೆ ಕಚೇರಿಗೆ ಪೊಲೀಸ್​​ ಬಿಗಿ ಭದ್ರತೆ ಒದಗಿಸಲಾಗಿದೆ. ಸ್ಥಳದಲ್ಲಿ KSRP ತುಕಡಿ ಸೇರಿದಂತೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡುವ ಮೂಲಕ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.