ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಪುನರ್ ರಚನೆ; ಸಚಿವರ, ಶಾಸಕರ ಮಕ್ಕಳ ನೇಮಕ

ಮುಖ್ಯಮಂತ್ರಿ ಅಧ್ಯಕ್ಷತೆಯ ಕರ್ನಾಟಕ ವನ್ಯಜೀವಿ ಮಂಡಳಿಯನ್ನು ಪುನರ್ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯನ್ನು ಪುನರ್ ರಚನೆ ಮಾಡಿ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶಿಸಿದೆ.

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಪುನರ್ ರಚನೆ; ಸಚಿವರ, ಶಾಸಕರ ಮಕ್ಕಳ ನೇಮಕ
ಸಿಎಂ ಸಿದ್ದರಾಮಯ್ಯ
Updated By: ಆಯೇಷಾ ಬಾನು

Updated on: Jul 27, 2024 | 7:19 AM

ಬೆಂಗಳೂರು, ಜುಲೈ.27: ಸಿಎಂ ಸಿದ್ದರಾಮಯ್ಯ (Siddaramaiah) ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯನ್ನು (Karnataka Wildlife Board) ಮೂರು ವರ್ಷಗಳ ಅವಧಿಗೆ ಪುನರ್ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರಜ್ಞರು, ಪರಿಸರವಾದಿಗಳ ಕೋಟಾದಡಿಯಲ್ಲಿ ಸಚಿವರ, ಶಾಸಕರ ಮಕ್ಕಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಸಚಿವ ಎಂ.ಬಿ. ಪಾಟೀಲ್ ಪುತ್ರ ಧ್ರುವ್ ಎಂ ಪಾಟೀಲ್, ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಮಂಡಳಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ. ರಾಜ್ಯ ವನ್ಯಜೀವಿ ಮಂಡಳಿಗೆ ಸಿಎಂ ಅಧ್ಯಕ್ಷರಾಗಿರುತ್ತಾರೆ. ಅರಣ್ಯ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಸದ್ಯ ಈಗ ಶಾಸಕರ ಕೋಟಾದಡಿ 10 ಸದಸ್ಯರನ್ನ ನೇಮಕ ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಮದುರ್ಗ ಶಾಸಕ ಅಶೋಕ್ ಎಂ. ಪಟ್ಟಣ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಸರ್ಕಾರೇತರ ಸಂಸ್ಥೆಗಳ ಕೋಟಾದಡಿ ವೈಲ್ಡ್‌ಲೈಫ್‌ ಅಸೋಸಿಯೇಷನ್‌ ಆಫ್ ಸೌತ್ ಇಂಡಿಯಾ ವನ್ಯಜೀವಿ ಸಂಘದಿಂದ ಸುಶೀಲಗೈನಚಂದ್, ಟೈಗರ್ಸ್‌ ಅನ್‌ಲಿಮಿಟೆಡ್ ವನ್ಯಜೀವಿ ಸಮಾಜದಿಂದ ಸೀಮಾ ಬೇಗಂ ಖಲೀಲ್, ಬೆಂಗಳೂರು ಪರಿಸರ ಟ್ರಸ್ಟ್‌ನಿಂದ ಡಾ.ಆರ್.ವಿ.ದಿನೇಶ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಸಂಸತ್​​ ನಲ್ಲಿ ವಾಲ್ಮೀಕಿ, ಮುಡಾ ಹಗರಣ ಚರ್ಚೆಗೆ ಕಾಂಗ್ರೆಸ್ ಅಡ್ಡಿ; ಪ್ರಲ್ಹಾದ ಜೋಶಿ ಕಿಡಿ

ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರ ತಜ್ಞರು ಹಾಗೂ ಪರಿಸರವಾದಿಗಳ ಕೋಟಾದಿಂದ ಬೆಂಗಳೂರಿನ ರವೀಂದ್ರ ರಘುನಾಥ, ಡಾ.ರಾಜಕುಮಾರ್ ಎಸ್ ಅಲ್ಲೆ, ಅಜಿತ್ ಕರಿಗುಡ್ಡಯ್ಯ, ಧ್ರುವ ಎಂ ಪಾಟೀಲ್, ಮಲ್ಲಪ್ಪ ಎಸ್ ಅಂಗಡಿ, ವಿರಾಜಪೇಟೆಯಿಂದ ಸಂಕೇತ ಪೂವಯ್ಯ, ಧಾರವಾಡದ ವೈಶಾಲಿ ಕುಲಕರ್ಣಿ, ಬೀದರ್‌ನ ವಿನಯ್ ಕುಮಾರ್ ಮಾಳಿಗೆ, ಮೈಸೂರಿನ ಡಾ.ಸಂತೃಪ್ತ ಅವರನ್ನು ನೇಮಕ ಮಾಡಲಾಗಿದೆ.

ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು, ಸಂಸ್ಥೆಗಳ ಹತ್ತು ಅಧಿಕಾರಿಗಳು ಪದನಿಮಿತ್ತ ಸದಸ್ಯರು ರಾಜ್ಯದ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:18 am, Sat, 27 July 24