ಹಾಸನ: ಮೆದುಳು ನಿಷ್ಕ್ರಿಯಗೊಂಡು ಸಾವಿನ ಸನಿಹಕ್ಕೆ ಹೋದವನ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಅಗಸ್ಟ್ 21ರ ಸೋಮವಾರ ಬೈಕ್​ನಲ್ಲಿ ಹೊರಟಿದ್ದವನಿಗೆ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿತ್ತು, ಏನೂ ಆಗಿಲ್ಲ ಎಂದು ಮನೆಯಲ್ಲಿದ್ದವನು ಹಾಸಿಗೆಯಲ್ಲೇ ಕೋಮಾಗೆ ಹೋಗಿದ್ದ. ಎರಡು ದಿನಗಳ ಸತತ ಹೋರಾಟದ ಬಳಿಕ ವೈದ್ಯರು ಬ್ರೈನ್ ಡೆಡ್ ಎಂದು ಘೋಷಣೆ ಮಾಡಿದ್ರು, ಹೆತ್ತವರ ಸಾವಿನಿಂದ ಅನಾಥವಾಗಿ ತಾನೂ ಧಾರುಣವಾಗಿ ಸಾವಿನ ಸನಿಹಕ್ಕೆ ಬಂದ ಯುವಕನ ಅಂಗಾಂಗ ದಾನ ಮಾಡಿ ಎಂಟು ಜನರ ಬಾಳಿಗೆ ಬೆಳಕಾದ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಹಾಸನ: ಮೆದುಳು ನಿಷ್ಕ್ರಿಯಗೊಂಡು ಸಾವಿನ ಸನಿಹಕ್ಕೆ ಹೋದವನ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ
ಅಪಘಾತಕ್ಕೊಳಗಾದ ಯುವಕ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2023 | 8:53 PM

ಹಾಸನ, ಆ.25: ಅಪಘಾತದಲ್ಲಿ (Accident) ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯುವಕ ಧಾರುಣ ಸಾವು. ಮುದ್ದು ಮಗನನ್ನು ಕಳೆದುಕೊಂಡು ಮುಗಿಲು ಮುಟ್ಟಿದ ಪೋಷಕರ ಕಣ್ಣೀರು, ಯಜಮಾನನ ಸಾವು ಕಂಡು ಗೀಳಿಡುತ್ತಿರುವ ಶ್ವಾನ. ಹೌದು, ಹರ್ಷಿಲ್(17) ಮೆದುಳು ನಿಷ್ಕ್ರಿಯಗೊಂಡು ಸಾವಿನ ಸನಿಹಕ್ಕೆ ಹೋದವನ ಅಂಗಾಂಗವನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕೆಲವೇಳೆ ವಿಧಿ ಅದೆಷ್ಟು ಕ್ರೂರವಾಗಿ ಬಿಡುತ್ತೆ ಎನ್ನುವುದಕ್ಕೆ ಹಾಸನ ನಗರದ ವಿದ್ಯಾನಗರದ ಈ ಯುವಕನ ಕುಟುಂಬವೇ ಸಾಕ್ಷಿ. ಕೇವಲ ಎರಡು ವರ್ಷಗಳ ಹಿಂದೆ ತಾಯಿ ಕೋವಿಡ್ ಆಗಿ ಆಸ್ಪತ್ರೆ ಸೇರಿದ್ರು, ಕೋವಿಡ್​ನಿಂದ ಮಡದಿ ಆಸ್ಪತ್ರೆ ಸೇರಿದ್ದಕ್ಕೆ ಆಘಾತಗೊಂಡ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪತಿ ಸಾವಿನ ಸುದ್ದಿ ತಿಳಿದು ಹತ್ತೇ ದಿನಕ್ಕೆ ಮಡದಿಯೂ ಕೊನೆಯುಸಿರೆಳೇದಿದ್ದರು. ಇದ್ದೊಬ್ಬ ಮಗ ಅಪ್ಪ ಅಮ್ಮನ ಕಳೆದುಕೊಂಡು ಅನಾಥವಾಗಿದ್ದ. ಹಾಸನದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಹರ್ಷಿಲ್(17) ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡು ಕಡೆಗೂ ಬದುಕಿ ಬಾರದೆ ಸಾವಿನ ಮನೆ ಸೇರಿದ್ದಾನೆ. ಮಗ ಮತ್ತೆ ಬದುಕಿ ಬರೊದಿಲ್ಲ ಎನ್ನೋದನ್ನ ಅರಿತ ಕುಟುಂಬ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮೆರೆದು ಹೃದಯ, ಲಿವಲ್, ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡಿದ್ದಾರೆ.

ಇದನ್ನೂ ಓದಿ:World Organ Donation Day 2023: ವಿಶ್ವ ಅಂಗಾಂಗ ದಾನ ದಿನ ಯಾವಾಗ? ಇದರ ಮಹತ್ವ ಏನು?

ಅಪಘಾತ ಮಾಡಿ ಚಿಕಿತ್ಸೆ ಕೊಡಿಸದೆ ಬಿಟ್ಟು ಹೋದ ಬೈಕ್ ಸವಾರನ ಅಮಾನವೀಯತೆಗೆ ಬಾಳಿ ಬದುಕ ಬೇಕಾಗಿದ್ದ ಯುವಕ ಧಾರುಣವಾಗಿ ಸಾವಿಗೀಡಾಗಿದ್ದಾನೆ. ನಿನ್ನೆ(ಆ.23) ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಯುವಕನ ಅಂಗಾಂಗಗಳನ್ನ ಜಯದೇವ, ಏಸ್ಟರ್, ಬಿಜಿಎಸ್ ಹಾಗೂ ಚೆನ್ನೈನ ಆಸ್ಪತ್ರೆಗಳಿಗೆ ದಾನ ಮಾಡುವ ಮೂಲಕ ಎಂಟು ಜನರ ಬಾಳಿಗೆ ಬೆಳಕಾಗಿ ಸಾವಿನಲ್ಲೂ ಈ ಯುವಕ ಬದುಕಿದ್ದಾನೆ.

ಅಗಸ್ಟ್ 21ರ ಸೋಮವಾರ ಕಾಲೇಜು ಮುಗಿಸಿ ಮನೆಗೆ ಬಂದಿದ್ದ ಹರ್ಷಿಲ್ ತನ್ನ ಬೈಕ್ ಏರಿ ಸಿಟಿ ರೌಂಡ್ಸ್ ಗೆಂದು ಹೊರಟಿದ್ದ. ಇನ್ನೇನು ಮನೆಯಿಂದ 150 ಮೀಟರ್ ದೂರ ಹೋಗಿರಬಹುದು ಅಷ್ಟರಲ್ಲೇ ಎದುರಿನಿಂದ ಬಂದ ಇನ್ನೊಂದು ಬೈಕ್ ಈತನ ಬೈಕ್ ಗೆ ಡಿಕ್ಕಿಯಾಗಿ, ರಭಸಕ್ಕೆ ಕೆಳಗೆ ಬಿದ್ದಿದ್ದ. ಬಳಿಕ ಆತನನ್ನು ಮೇಲೆತ್ತಿ ಮಾನವೀಯತೆ ತೋರದೆ ಬಿದ್ದವನಿಗೇ ಬೈದು ಬಿಟ್ಟು ಪರಾರಿಯಾಗಿದ್ದ. ಮನೆಯವರಿಗೆ ವಿಚಾರ ತಿಳಿದರೆ ಬೈಯ್ತಾರೆ ಎಂದು ತಾನೇ ಬೈಕ್ ರಿಪೇರಿ ಮಾಡಿಸೋ ಯತ್ನ ಮಾಡಿದ ಹರ್ಷಿಲ್ ಆಸ್ಪತ್ರೆಗೆ ಹೋಗಿ ನೋವು ನಿವಾರಕ ಇಂಜೆಕ್ಷನ್ ಪಡೆದು ಮನೆಗೆ ಬಂದು ಮಲಗಿದ್ದಾನೆ ಅಷ್ಟೇ, ಮೆದುಳಿಗೆ ಬಿದ್ದ ಬಲವಾದ ಪೆಟ್ಟು ಆತನನ್ನ ಮಲಗಿದಲ್ಲೇ ಜೀವಂತ ಶವವಾಗಿಸಿದೆ.

ಇದನ್ನೂ ಓದಿ:Dinesh Gundurao: ಅಂಗಾಂಗ ದಾನ ಬಹಳ ಮುಖ್ಯ; ಅದರ ಬಗ್ಗೆ ಜಾಗೃತಿ ಇಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಷಾದ

ರಾತ್ರಿ ಊಟಕ್ಕೆ ಏಳಿಸಿದ್ರು ಮೊಮ್ಮಗ ಎದ್ದೇಳದಿದ್ದಾಗ ಗಾಬರಿಯಾದ ಅಜ್ಜಿ ಸಂಬಂಧಿಕರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಹಾಸನ ಬೆಂಗಳೂರು ಅಂತೆಲ್ಲ ಸುತ್ತಾಡಿ ಕಡೆಗೆ ಬೆಂಗಳೂರಿನ ಸಕ್ರಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸೋ ಯತ್ನ ಮಾಡಿದ್ರು ಮೆದುಳು ನಿಷ್ಕ್ರಿಯಗೊಂಡ ಕಾರಣ ಆತ ಇನ್ನು ಎಲ್ಲರಂತೆ ಆಗೋದಿಲ್ಲ, ಇನ್ನೇನಿದ್ದರೂ ಆತ ಜೀವಂತ ಶವ ಎನ್ನೋದು ಖಾತ್ರಿಯಾಗುತ್ತಲೆ ಅಂಗಾಂಗ ದಾನ ಮಾಡೋಕೆ ತೀರ್ಮಾನ ಮಾಡಿದ ಕುಟುಂಬ ಸದಸ್ಯರು ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ.

ಒಟ್ಟಿನಲ್ಲಿ ಹೆಲ್ಮೆಟ್ ಇಲ್ಲದ ಬೈಕ್ ಸವಾರಿ ಹಲವು ಯುವಕರ ಜೀವಕ್ಕೆ ಕಂಕಟವಾಗುತ್ತಿ​ರೋದು ಒಂದೆಡೆಯಾದ್ರೆ, ಅಪಘಾತದ ಬಳಿಕ ತಕ್ಷಣ ಆಸ್ಪತ್ರೆಗೆ ಸೇರಿಸದ ಅಮಾನವೀಯ ನಡೆ, ಇನ್ನೂ ಬಾಳಿ ಬದುಕ ಬೇಕಿದ್ದವ ಬದುಕನ್ನೇ ಕತ್ತಲಾಗಿಸುತ್ತಿದ್ದು, ಎರಡು ವರ್ಷದ ಹಿಂದೆ ತಂದೆ ತಾಯಿ ಕಳೆದುಕೊಂಡ ಬಾಲಕ ಇದೀಗ ತಾನೂ ಸಾವಿನ ಮನೆ ಸೇರಿದ್ದು, ಸಂಬಂಧಿಕರ ರೋದನೆ ಮುಗಿಲು ಮುಟ್ಟಿತ್ತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ