ಕಾರು ಚಾಲಕನ ಮೇಲೆ ಹಲ್ಲೆ ಆರೋಪ: ತಮ್ಮ ವಿರುದ್ಧ ಪ್ರಕರಣದ ಬಗ್ಗೆ ಪ್ರಜ್ವಲ್‌ ರೇವಣ್ಣ ಹೇಳಿದ್ದಿಷ್ಟು

ಮಾಜಿ ಕಾರು ಚಾಲಕನ ಮೇಲೆ ಹಲ್ಲೆ ಆರೋಪ ಕೇಸ್​ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದ ಏನೇನು ಮಾಡಬೇಕೋ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ಹೀಗಾಗಿ ಆರೋಪ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಕೋರ್ಟ್‌ಗೆ ಹೋಗಿದ್ದೀನೆಂದು ಚಾಲಕ ಹೇಳಿದ್ದಾನೆ. ಕೋರ್ಟ್‌ಗೆ ಹೋದ ಮೇಲೆ ಮಾಧ್ಯಮದ ಮುಂದೆ ಬರುವುದು ಏನಿದೆ ಎಂದಿದ್ದಾರೆ.

ಕಾರು ಚಾಲಕನ ಮೇಲೆ ಹಲ್ಲೆ ಆರೋಪ: ತಮ್ಮ ವಿರುದ್ಧ ಪ್ರಕರಣದ ಬಗ್ಗೆ ಪ್ರಜ್ವಲ್‌ ರೇವಣ್ಣ ಹೇಳಿದ್ದಿಷ್ಟು
ಸಂಸದ ಪ್ರಜ್ವಲ್ ರೇವಣ್ಣ
Edited By:

Updated on: Jan 11, 2024 | 5:41 PM

ಹಾಸನ, ಜನವರಿ 11: ಹಲ್ಲೆ ಮಾಡಿಸಿಕೊಂಡವರು 8 ತಿಂಗಳವರೆಗೂ ಸುಮ್ಮನೆ ಕೂರಲ್ಲ.ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದ ಏನೇನು ಮಾಡಬೇಕೋ ಮಾಡುತ್ತಿದ್ದಾರೆ. ರಾಜಕೀಯ ಅಂದಮೇಲೆ ಇವೆಲ್ಲಾ ಇರುತ್ತವೆ. ಇನ್ನೂ ಏನೇನು ಮಾಡುತ್ತಾರೆ ಯಾರಿಗೆ ಗೊತ್ತು ಎಂದು ಜೆಡಿಎಸ್‌ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹೇಳಿದ್ದಾರೆ. ನಗರದಲ್ಲಿ ತಮ್ಮ ಮಾಜಿ ಕಾರು ಚಾಲಕನ ಮೇಲೆ ಹಲ್ಲೆ ಆರೋಪ ಕೇಸ್​ ವಿಚಾರವಾಗಿ ಮಾತನಾಡಿದ ಅವರು, ನಾನು ಅದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಲ್ಲ ಎಂದು ಹೇಳಿದ್ದಾರೆ.

ಕೋರ್ಟ್‌ಗೆ ಕೇಸ್ ಹಾಕೊಂಡಿದ್ದೀನಿ ಅಂತ ಅವರೇ ಹೇಳಿದ್ದಾರೆ. ಕೋರ್ಟ್‌‌ಗೆ ಹಾಕಿಕೊಂಡ ಮೇಲೆ ಮಾಧ್ಯಮದ ಮುಂದೆ ಬರುವುದು ಏನಿದೆ. ಎಲೆಕ್ಷನ್ ಹತ್ತಿರ ಬರುತ್ತಿದೆ ಮಾತನಾಡುತ್ತಿದ್ದಾರೆ. ಎಂಟು, ಒಂಭತ್ತು ತಿಂಗಳ ಹಿಂದೆ ಆಗಿರುವುದು ಅಂತ ಅವರೇ ಹೇಳಿದ್ದಾರೆ. ಆಗ ನಡೆದಿದ್ದನ್ನು ಈಗ ಏಕೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಮಾಧ್ಯಮದ ಮುಂದೆ ಕುಳಿತುಕೊಂಡು ಒಬ್ಬರ ತೇಜೋವಧೆ ಮಾಡಬಾರದು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಆಸ್ತಿ ಮಾರಾಟಕ್ಕೆ ಒತ್ತಾಯಿಸಿ ಕಿಡ್ನಾಪ್: ಪ್ರಜ್ವಲ್ ರೇವಣ್ಣ, ಭವಾನಿ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಕಾರು ಚಾಲಕ

ಇವರಿಗೆ ಕೋರ್ಟ್ ಮೇಲೆ ನಂಬಿಕೆ ಇಲ್ಲ ಅಂತ ಕಾಣುತ್ತೆ. ಅವರ ಅಜೆಂಡಾ ಏನಿದೆ ಅದು ಎಂಪಿ‌ ಚುನಾವಣೆ. ಯಾರು, ಯಾರ ಮೇಲೂ ಹಲ್ಲೆ ಮಾಡಲ್ಲ, ಆಗಲ್ಲ. ಎ.ಟಿ.ರಾಮಸ್ವಾಮಿ ಅವರು ದೊಡ್ಡವರಿದ್ದಾರೆ, ಅವರು ಹಿರಿಯ ರಾಜಕಾರಣಿ. ಇಂತಹ ಹೋರಾಟಕ್ಕೆ ಬರುತ್ತಾರೆ ಅಂದರೆ ನಾನು ಏನು ಹೇಳಬೇಕು. ನಾನು ಅವರ ಬಗ್ಗೆ ಏನು ಚರ್ಚೆ ಮಾಡಲ್ಲ. ಅವರಿಗೆ ಮಾಹಿತಿ ಸರಿಯಾಗಿದ್ದರೆ ಹೋರಾಟ ಮಾಡಲಿ. ಇದರಲ್ಲಿ ಯಾರದ್ದು ತಪ್ಪು, ಯಾರದ್ದು ತಪ್ಪಿಲ್ಲ‌ ಅಂತ ಇಡೀ ರಾಜ್ಯಕ್ಕೆ, ಇಡೀ ಜಿಲ್ಲೆಗೆ ಗೊತ್ತಿದೆ.

ಇದನ್ನೂ ಓದಿ: ಕಾರು ಅಪಘಾತ: ಭವಾನಿ ರೇವಣ್ಣ ವಿಡಿಯೋ ವೈರಲ್, ಬೈಕ್​ ಸವಾರನ ವಿರುದ್ಧ ಕೇಸ್ ಬುಕ್

ಇದರ ಬಗ್ಗೆ ಮುಂದುವರೆದು ಏನು ಮಾತನಾಡಲು ಹೋಗಲ್ಲ. ನಾನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲ್ಲ. ಅದೇ ವಿಚಾರ ನಾನು ಮಾತನಾಡಲ್ಲ. ಅದರ ಬಗ್ಗೆ ಮಾತನಾಡಿ ಎನ್ನುವ ಅಧಿಕಾರ‌ ನಿಮಗಿಲ್ಲ. ನೀವು ನನಗೆ ಬಲವಂತ ಮಾಡುವ ಅಧಿಕಾರ ನಿಮಗಿಲ್ಲ. ನಾನು ಮಾತನಾಡಲ್ಲ ಅಂದರೆ ಮಾತನಾಡಲ್ಲ ಎಂದು ಗರಂ ಆಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.