ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಕೋಟಿ ಕೋಟಿ ಹಣ ಹಂಚಿಕೆ: ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೊ ವೈರಲ್

| Updated By: ಗಣಪತಿ ಶರ್ಮ

Updated on: Oct 17, 2024 | 12:04 PM

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಸನ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಕಾರಣ, ಕಾಂಗ್ರೆಸ್ ಮುಖಂಡ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿರುವುದು. ವೈರಲ್ ಆಡಿಯೋದಲ್ಲೇನಿದೆ ಎಂಬ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಕೋಟಿ ಕೋಟಿ ಹಣ ಹಂಚಿಕೆ: ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೊ ವೈರಲ್
ಶಿವಲಿಂಗೇಗೌಡ
Follow us on

ಹಾಸನ, ಅಕ್ಟೋಬರ್ 17: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ಕೋಟಿ ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದ್ದು ಎನ್ನಲಾದ, ಅರಸೀಕೆರೆ ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೊ ವೈರಲ್ ಆಗಿದೆ. ಚುನಾವಣೆ ನಡೆದು ನಾಲ್ಕು ತಿಂಗಳ ಬಳಿಕ ಆಡಿಯೋ ವೈರಲ್ ಆಗಿದೆ.

ವೈರಲ್ ಆಡಿಯೋದಲ್ಲೇನಿದೆ?

ಶಿವಲಿಂಗೇಗೌಡರದ್ದು ಎನ್ನಲಾಗುತ್ತಿರುವ ಆಡಿಯೋದಲ್ಲಿ, ಸಿಎಂ, ಡಿಸಿಎಂ ಸೂಚನೆಯಂತೆ ಹಣ ಹಂಚಬೇಕು ಎಂದು ಹೇಳಲಾಗಿದೆ. ಒಟ್ಟು ಏಳು ಕೋಟಿ ಹಣ ಹಂಚಿಕೆಯ ಬಗ್ಗೆ ಮಾತನಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಐದು ಕೋಟಿ ಕೊಡುತ್ತಾರೆ. ಮಾಜಿ ಎಂಎಲ್​ಸಿ ಗೋಪಾಲಸ್ವಾಮಿ ಒಂದು ಕೋಟಿ, ನಾನು ಒಂದು ಕೋಟಿ ಕೊಡುತ್ತೇನೆ. ಒಟ್ಟು ಏಳು ಕೋಟಿ ಹಂಚಿಕೆ ಆಗಬೇಕು ಎಂದು ಮಾತನಾಡಿರುವುದು ಆಡಿಯೋದಲ್ಲಿದೆ. ಶಿವಲಿಂಗೇಗೌಡ ತಮ್ಮ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದು ಎನ್ನಲಾಗುತ್ತಿದೆ.

ಪ್ರತಿ ಓಟಿಗೆ ಐದು ನೂರು ರೂಪಾಯಿ ಕೊಡಬೇಕು. ಒಟ್ಟು ಶೇಕಡಾ 68 ರಿಂದ 70 ಜನರಿಗೆ ಹಣ ಕೊಡಿ. ಯಾರು ನಮಗೆ ಓಟ್ ಹಾಕುತ್ತಾರೆ ಎಂಬುದು ಗೊತ್ತಿರುತ್ತೆ, ಅವರಿಗೆ ಕೊಡಿ. ಅವರು 30 ಪರ್ಸೆಂಟ್ ಮತ ತಗೊತಾರೆ ಅವರಿಗೆ ಕೊಡೋದು ಬೇಡ. ಸಿಎಂ, ಡಿಸಿಎಂ, ಉಸ್ತುವಾರಿ ಅವರೇ ತೀರ್ಮಾನ ಮಾಡಿದ್ದಾರೆ, ಅದರಂತೆ ಹಂಚಲಿ. ಶಿವರಾಂ ಅವರು ಮನೆಗೊಂದು ಸಾವಿರ ಕೊಡುತ್ತಾ ಇದ್ದಾರಂತೆ. ಅವರ ಶಿಷ್ಯನೇ ಹೇಳಿದ್ದಾರೆ, ಅವರು ಐದು ನೂರು ರೂಪಾಯಿ ಕೊಟ್ಟಿದಾರೆ ಎಂಬುದಾಗಿ. ನಾವೂ ಒಂದು ಓಟ್​​ಗೆ 500 ರೂ. ಕೊಡಬೇಕು ಎಂದಿರುವುದು ಆಡಿಯೋದಲ್ಲಿದೆ.

ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಬಿ ಶಿವರಾಂ ಅವರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವುದು ಆಡಿಯೋದಲ್ಲಿದೆ. ತೀರ್ಮಾನ ಆಗಿರುವುದು ಐದು ನೂರು ರೂ. ಹಂಚಬೇಕು ಎಂದು. ಅಷ್ಟು ಹಂಚದಿದ್ದರೆ ಚೆನ್ನಾಗಿರಲ್ಲ ಎಂದು ಮಾತನಾಡಿರುವುದು ಆಡಿಯೋದಲ್ಲಿದೆ ಎನ್ನಲಾಗಿದೆ.

ಪೆನ್​ಡ್ರೈವ್, ಅಶ್ಲೀಲ ವಿಡಿಯೋ ಬಗ್ಗೆಯೂ ಮಾತು

ಪೆನ್ ಡ್ರೈವ್ ಪ್ರಕರಣ ಹಾಗೂ ಅಶ್ಲೀಲ ವೀಡಿಯೋ ಬಗ್ಗೆಯೂ ಮಾತು ಸಾಗಿದೆ. ಇಂತಹ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ವೀಡಿಯೋ ಲೀಕ್ ಆದ ನಂತರ ಕುಮಾರಸ್ವಾಮಿ ಅವರೇ ಪ್ರಚಾರಕ್ಕೆ ಬರಲಿಲ್ಲ. ದೆವೇಗೌಡರು ಅಂತಹ ವಯಸ್ಸಲ್ಲಿ ಬಂದು ಪ್ರಚಾರ ಮಾಡಬೇಕಾ? ಬೇರೆ ಯಾರೂ ಇರಲಿಲ್ಲವೇ? ಬಿಜೆಪಿ ನಾಯಕರು ಕೆಲಸ ಮಾಡುತ್ತಾ ಇಲ್ಲ ಎಂದಿರುವುದು ಆಡಿಯೋದಲ್ಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೇಳಲು ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ: ಜೋಶಿ ವ್ಯಂಗ್ಯ

ಬೇಲೂರು ಶಾಸಕ ಸುರೇಸ್ ಕೆಲಸ ಮಾಡುತ್ತಾ ಇಲ್ಲ. ಬೇಲೂರಿನಲ್ಲಿ ಶಿವರಾಂ ಸರಿಯಾಗಿ ಪ್ರಚಾರ ಮಾಡುತ್ತಾ ಇಲ್ಲ. ಶಿವರಾಂ ಬಂದ ನಂತರ ರೌಡಿಗಳು ಚಿಗುರಿಕೊಂಡಿದ್ದಾರೆ. ಹಿಂದೆ‌ ಬೇಲೂರಿನಲ್ಲಿ ರುದ್ರೇಶ್ ಗೌಡ ಇದ್ದಾಗ ಅವರನ್ನ ದೂರ ಇಟ್ಟಿದ್ದರು. ರೌಡಿಗಳನ್ನ ಜೊತೆಯಲ್ಲಿ ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಹೀಗಾದ್ರೆ ಯಾರು ಓಟ್ ಹಾಕುತ್ತಾರೆ ಎಂದು ಶಿವಲಿಂಗೇಗೌಡ ಮಾತನಾಡಿದ್ದಾರೆ ಎನ್ನಲಾಗಿದೆ. ಬೇಲೂರು ಭಾಗದ ಮುಖಂಡರ ಜೊತೆ ಶಿವಲಿಂಗೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಇದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ